ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಶಂಕು ಸ್ವರ್ಗದಲ್ಲಿ!

Last Updated 8 ಆಗಸ್ಟ್ 2019, 19:29 IST
ಅಕ್ಷರ ಗಾತ್ರ

ಪುರಾಣ ಕಾಲದಿಂದ ಅಂತರಿಕ್ಷದಲ್ಲಿದ್ದು ಬೇಸತ್ತಿದ್ದ ತ್ರಿಶಂಕುವಿಗೆ ಆ ಆಗಂತುಕರನ್ನು ಕಂಡು ಖುಷಿಯಾಗಿತ್ತು. ಆಸ್ಥೆಯಿಂದ ವಿಚಾರಿಸಿದ- ‘ನೀವೆಲ್ಲಾ ಯಾರು? ಎಲ್ಲಿಂದ ಬರ್ತಿದೀರಿ?’

‘ನಾವೆಲ್ಲಾ ನಿಮ್ಮ ಅಭಿಮಾನಿಗಳು. ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ದೇಶದವರು. ಮೂರು ಕುಟುಂಬಗಳಿಂದ ಬಂದಿದೀವಿ?’ ಎಂದರವರು.

‘ಗೊತ್ತಾಯ್ತು, ರೆಸಾರ್ಟ್ ರಾಜಕಾರಣ ಮಾಡಿ ರಾಷ್ಟ್ರದಾದ್ಯಂತ ಸುದ್ದಿ ಮಾಡಿದ ರಾಜ್ಯದವರಲ್ವೆ! ಸಾಂದರ್ಭಿಕ ಶಿಶುವಿನ ಅಧಿಕಾರ ಅಂತ್ಯಗೊಳಿಸಿ, ಜಗದೇಕವೀರನ ಪಟ್ಟಾಭಿಷೇಕಕ್ಕೆ ಕಾರಣರಾದ ಅತೃಪ್ತರು ನೀವಲ್ವೆ?’

‘ಅದೆಲ್ಲ ಸುಳ್ಳು, ಸಾಂದರ್ಭಿಕ ಶಿಶುವಿನ ಕುಟುಂಬದಿಂದ ಆದ ಸಮಸ್ಯೆ ಇದು. ನಾವು ಅತೃಪ್ತರಲ್ಲ. ಜನಸೇವೆಗಾಗಿ ಅನ್ಯಾಯದ ವಿರುದ್ಧ ದನಿ ಎತ್ತಿದ ಬಂಡಾಯಗಾರರು. ನಾನು ‘ಹಳ್ಳಿ ಹಕ್ಕಿಯ ಹಾಡು’ ಪುಸ್ತಕ ಬರೆದಿದೀನಿ. ಈಗ ಇನ್ನೊಂದು ಪುಸ್ತಕ ಬರೇಯೋಣಾಂತಿದೀನಿ’ ಎಂದರೊಬ್ಬರು. ಅದಕ್ಕೆ ಇಬ್ಬರು ದನಿಗೂಡಿಸಿದರು.

‘ನಿಮ್ಮ ಪರಿಚಯ? ಏಕೆ ಕುಂಟ್ತಿದೀರಿ?’

‘ನಾನು ಬಸತಿ ಭೈರವಪ್ಪ. ನಾವು 13 ಜನ ಸೋದರರು ಬಂದಿದೀವಿ. ಬಹುಸಂಖ್ಯಾತವಾಗಿದ್ದ ನಮ್ಮ ಕುಟುಂಬಕ್ಕೆ, ಮೇಲಿನ ಒತ್ತಡದಿಂದ, ಅಲ್ಪಸಂಖ್ಯಾತರಿಗೆ ಅಧಿಕಾರ ಕೊಟ್ಟರೂ ತೀವ್ರ ಅವಮಾನ ಆಗಿದ್ರಿಂದ ಈ ಪರಿಸ್ಥಿತಿ ಉಂಟಾಗಿದೆ. ಸುಪ್ರೀಂ ಕೋರ್ಟ್ ಕೊಟ್ಟಿದ್ದ ಗಡುವಿನೊಳಗೆ ನಿಧಾನಸೌಧಕ್ಕೆ ಜೋರಾಗಿ ಓಡಿದಾಗ ನನ್ನ ಕಾಲು ಉಳುಕಿತು?’ ಎಂದರು ಇನ್ನೊಬ್ಬರು.

ಕೊನೆಗೆ ಉಳಿದ ವ್ಯಕ್ತಿ ಹೇಳಿತು– ‘ನನ್ನ ಹೆಸರು ಆಯಾರಾಮ್, ಸ್ವತಂತ್ರನಾಗಿದ್ದ ನನ್ನನ್ನು, ಅಧಿಕಾರಕ್ಕಾಗಿ ಏಣಿಯಾಗಿ ಬಳಸಿಕೊಂಡು ಆನಂತರ ಕಾಲಿನಿಂದ ಒದ್ದರು.’

‘ಮನೆ ಯಜಮಾನರು ನಮ್ಮ ಅಹವಾಲು ಕೇಳದೆ ಮನೆಯಿಂದ ಹೊರಹಾಕಿದರು. ನಮ್ಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಕೋರ್ಟ್ ತೀರ್ಪು ಏನಾಗುತ್ತೋ, ಅಲ್ಲೀವರೆಗೂ ನೀವೇ ನಮ್ಮ ಆಶ್ರಯದಾತರು. ಆವರೆಗೆ ನಾವು ಕ್ಷೇತ್ರಗಳಿಗೆ ಹೋಗುವಂತಿಲ್ಲ!’ ಎಂದರು ಎಲ್ಲರೂ ತಗ್ಗಿದ ದನಿಯಲ್ಲಿ.

‘ನಾವೆಲ್ಲಾ ಸಮಾನ ದುಃಖಿಗಳು, ಚಿಂತಿಸಬೇಡಿ ಬನ್ನಿ’ ಎಂದ ತ್ರಿಶಂಕು, ಅವರನ್ನು ತೆರೆದ ಬಾಹುಗಳಿಂದ ಸ್ವಾಗತಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT