ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂಗಳ ಬಂದ್ ಪ್ರಸ್ತಾವ ಸಮರ್ಥನೀಯ ನಡೆಯಲ್ಲ

Last Updated 4 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ದೇಶದಲ್ಲಿನ 2.38 ಲಕ್ಷ ಎಟಿಎಂಗಳ ಸಂಖ್ಯೆ ಮೂರ್ನಾಲ್ಕು ತಿಂಗಳಲ್ಲಿ ಅರ್ಧಕ್ಕೆ ಅರ್ಧದಷ್ಟು ಕಡಿಮೆಯಾಗುವ ಆತಂಕ ಎದುರಾಗಿದೆ. ನಿರ್ವಹಣಾ ವೆಚ್ಚ ನಿಭಾಯಿಸಲಿಕ್ಕಾಗದ ಕಾರಣಕ್ಕೆ ಗಮನಾರ್ಹ ಸಂಖ್ಯೆಯ ಎಟಿಎಂಗಳಿಗೆ ಬಾಗಿಲು ಹಾಕುವ ನಿರ್ಧಾರಕ್ಕೆ ಬರಲಾಗಿದೆ ಎಂದು ಎಟಿಎಂ ಉದ್ಯಮ ಒಕ್ಕೂಟವು (ಸಿಎಟಿಎಂಐ) ಬೆದರಿಕೆ ಸ್ವರೂಪದ ಎಚ್ಚರಿಕೆ ನೀಡಿದೆ. ಇದು ಒತ್ತಡ ಹೇರುವಂತಹ ತಂತ್ರದ ಭಾಗವೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯ. ಬ್ಯಾಂಕ್‌ ಗ್ರಾಹಕರ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸಲಿರುವ ಈ ಚಿಂತನೆ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ.‌ ಎಟಿಎಂಗಳ ನಿಯಂತ್ರಣ ಮತ್ತು ಸುರಕ್ಷತೆ ವ್ಯವಸ್ಥೆಯಲ್ಲಿ ಅಳವಡಿಸಲಾಗುತ್ತಿರುವ ಬದಲಾವಣೆಗಳ ವೆಚ್ಚ ಹೆಚ್ಚಳದ ಕಾರಣಕ್ಕೆ ಅವುಗಳನ್ನು ನಿರ್ವಹಿಸುವುದು ಆರ್ಥಿಕವಾಗಿ ಲಾಭದಾಯಕವಾಗಿಲ್ಲ ಎನ್ನುವ ಏಕೈಕ ಕಾರಣಕ್ಕೆ ಅವಸರದ ನಿರ್ಧಾರಕ್ಕೆ ಬರುವುದು ನ್ಯಾಯೋಚಿತವಲ್ಲ. ಎಟಿಎಂಗಳ ನಿರ್ವಹಣೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಇತ್ತೀಚೆಗೆ ನಿಗದಿಪಡಿಸಿರುವ ಮಾರ್ಗದರ್ಶಿ ಸೂತ್ರಗಳ ಪಾಲನೆಗೆ ಹೆಚ್ಚುವರಿ ವೆಚ್ಚ ತಗಲುತ್ತಿದೆ. ನೋಟು ರದ್ದತಿಯ ಕಾರಣಕ್ಕೆ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ಮೇಲ್ದರ್ಜೆಗೆ ಏರಿಸುವ ಅನಿವಾರ್ಯ ಸೃಷ್ಟಿಯಾಗಿದೆ. ಅಷ್ಟೇ ಅಲ್ಲ, ಎಟಿಎಂ ಯಂತ್ರಗಳಲ್ಲಿ ಕನಿಷ್ಠ ಪ್ರಮಾಣದ ನಗದು ಹೊಂದಿರುವುದು, ನಗದು ವಿತರಣೆಗೆ ಅಗತ್ಯ ಮೂಲಸೌಕರ್ಯ, ಎಟಿಎಂ ಕೇಂದ್ರಗಳಲ್ಲಿ ಭದ್ರತಾ ವ್ಯವಸ್ಥೆ– ಇವೆಲ್ಲವೂ ನಿರ್ವಹಣಾ ವೆಚ್ಚ ಹೆಚ್ಚಿಸಿವೆ. ಗೃಹ ಸಚಿವಾಲಯವೂ ಭದ್ರತೆಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಎಟಿಎಂಗಳ ಅಸ್ತಿತ್ವಕ್ಕೆ ಈ ನಿರ್ಧಾರದಿಂದ ಧಕ್ಕೆ ಒದಗಲಿದೆ ಎಂಬುದು ಇನ್ನೊಂದು ಆತಂಕಕಾರಿ ಸಂಗತಿ. ಬ್ಯಾಂಕಿಂಗ್‌ ಸೇವೆ ವಿಸ್ತರಣೆಯೂ ಸೇರಿದಂತೆ ಆರ್ಥಿಕ ಸೇರ್ಪಡೆ ಕಾರ್ಯಕ್ರಮದಲ್ಲಿ ಎಟಿಎಂಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಬ್ಯಾಂಕ್‌ ಶಾಖೆಗಳಿಲ್ಲದ ದೂರದ ಗ್ರಾಮೀಣ ಪ್ರದೇಶಗಳಲ್ಲಿ ನಗದು ವಿತರಣೆಯನ್ನು ಎಟಿಎಂಗಳು ಸಮರ್ಥವಾಗಿ ನಿರ್ವಹಿಸುತ್ತಿವೆ. ಅವುಗಳನ್ನು ಏಕಾಏಕಿ ಮುಚ್ಚಿದರೆ ನೋಟು ರದ್ದತಿ ಸಂದರ್ಭದಲ್ಲಿ ಎದುರಾಗಿದ್ದ ನಗದು ಕೊರತೆ ಸಮಸ್ಯೆ ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಅಭಿವೃದ್ಧಿಯ ಲಾಭವು ಎಲ್ಲರಿಗೂ ದೊರೆಯಬೇಕು (ಆರ್ಥಿಕ ಸೇರ್ಪಡೆ) ಎನ್ನುವ ಸರ್ಕಾರದ ಆಶಯಕ್ಕೆ ಇದು ಅಡ್ಡಿಯಾಗಲಿದೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಸಬ್ಸಿಡಿ ಹಣ ಪಡೆಯುವುದೂ ದುಸ್ತರವಾಗಲಿದೆ. ಎಟಿಎಂಗಳ ಬಾಗಿಲು ಹಾಕಿದರೆ ಜನರು ನಗದು ಪಡೆಯಲು ಬ್ಯಾಂಕ್‌ಗಳನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಇದರಿಂದ ಸಿಬ್ಬಂದಿ ಹೆಚ್ಚಳ, ಕಟ್ಟಡ ವಿಸ್ತರಣೆಯಂತಹ ಹೆಚ್ಚುವರಿ ಹೊರೆಯನ್ನು ಬ್ಯಾಂಕ್‌ಗಳು ನಿಭಾಯಿಸಬೇಕಾಗುತ್ತದೆ. ಹೀಗಾಗಿ, ಎಟಿಎಂಗಳ ಸಂಖ್ಯೆ ಕಡಿತಗೊಳಿಸುವುದು ಹೆಚ್ಚುವರಿ ವೆಚ್ಚದ ಹೊರೆಗೆ ಪರಿಹಾರ ಒದಗಿಸದು. ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದೂ ಸರಿಯಲ್ಲ. ಎಟಿಎಂಗಳ ವಹಿವಾಟನ್ನು ಸುಲಲಿತ ಮತ್ತು ಸುರಕ್ಷಿತವಾಗಿ ನಿರ್ವಹಿಸುವುದಕ್ಕೆ ಗರಿಷ್ಠ ಆದ್ಯತೆ ನೀಡಬೇಕಾಗಿದೆ.

ಬ್ಯಾಂಕ್‌ಗಳು ಎಟಿಎಂಗಳ ನಿರ್ವಹಣೆಯನ್ನು ಬೇರೆ ಸಂಸ್ಥೆಗಳಿಗೆ ಒಪ್ಪಿಸಿರುವುದರಿಂದ ಅವುಗಳ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಎಟಿಎಂಗಳ ಸಂಖ್ಯೆ ಕಡಿತ ಮಾಡಬಾರದು. ಎಟಿಎಂ ನಿರ್ವಾಹಕರು ಬ್ಯಾಂಕ್‌ಗಳ ಜತೆ ಚರ್ಚಿಸಿ ಹೊಸ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು. ಎಟಿಎಂಗಳ ಸುರಕ್ಷತೆ, ನಗದು ಸಾಗಣೆ ಮತ್ತಿತರ ಹೆಚ್ಚುವರಿ ವೆಚ್ಚಗಳನ್ನು ಬ್ಯಾಂಕ್‌ಗಳೂ ಹಂಚಿಕೊಳ್ಳಬೇಕಾಗುತ್ತದೆ. ಎಟಿಎಂಗಳಲ್ಲಿ ವಂಚನೆ ಎಸಗುವ ಕೃತ್ಯಗಳು ದಿನೇ ದಿನೇ ಹೆಚ್ಚೆಚ್ಚು ನಾಜೂಕಾಗುತ್ತಿವೆ. ಇವುಗಳನ್ನು ಮಟ್ಟ ಹಾಕಲು ಸುರಕ್ಷತಾ ಮಾನದಂಡಗಳ ಅಳವಡಿಕೆಗೆ ಹೆಚ್ಚುವರಿ ವೆಚ್ಚ ಭರಿಸುವುದು ಅನಿವಾರ್ಯವಾಗುತ್ತಿದೆ. ಬ್ಯಾಂಕ್‌ಗಳೂ ಈ ವಿಷಯದಲ್ಲಿ ಹೆಚ್ಚು ಹೊಣೆಗಾರಿಕೆಯಿಂದ ವರ್ತಿಸಬೇಕಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌, ಕೇಂದ್ರ ಸರ್ಕಾರ ಮತ್ತು ಬ್ಯಾಂಕ್‌ಗಳು ಈ ವಿದ್ಯಮಾನವನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT