ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಲ್ಲರಹಟ್ಟಿ: ಮೌಢ್ಯ ನಿವಾರಣೆಗೆ ಕಾನೂನಿನ ಭಯವೊಂದೇ ಸಾಲದು

Last Updated 18 ಸೆಪ್ಟೆಂಬರ್ 2019, 20:19 IST
ಅಕ್ಷರ ಗಾತ್ರ

ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿ ಅವರು ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿ ಪ್ರವೇಶಿಸುವುದನ್ನು ಅಲ್ಲಿನ ಜನ ತಡೆದ ಪ್ರಕರಣವು ಸಮಾಜದಲ್ಲಿ ಈಗಲೂ ಶ್ರೇಣೀಕೃತ ಜಾತಿ ವ್ಯವಸ್ಥೆ ಎಷ್ಟೊಂದು ಕಠೋರವಾಗಿ ಆಚರಣೆಯಲ್ಲಿದೆ ಎನ್ನುವುದಕ್ಕೆ ಸಾಕ್ಷಿ. ನಾರಾಯಣಸ್ವಾಮಿ ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರಿಂದಲೇ ಹಟ್ಟಿ ಪ್ರವೇಶಕ್ಕೆ ಅವರಿಗೆ ಅವಕಾಶ ನಿರಾಕರಿಸಲಾಗಿದೆ ಎನ್ನುವುದು ಸ್ಪಷ್ಟ. ದಲಿತರು ಹಟ್ಟಿ ಪ್ರವೇಶಿಸಿದರೆ, ದೈವಾಂಶ ಸಂಭೂತರೆಂದು ತಾವು ನಂಬಿರುವ ಜುಂಜಪ್ಪ, ಕ್ಯಾತಪ್ಪರಿಗೆ ಸಿಟ್ಟುಬರುತ್ತದೆ ಎನ್ನುವ ಮೂಢನಂಬಿಕೆಯಿಂದ ಗೊಲ್ಲರ ಹಟ್ಟಿಯ ಜನರು ಪ್ರವೇಶಕ್ಕೆ ತಡೆ ಒಡ್ಡಿದರು ಎಂದು ವರದಿಯಾಗಿದೆ. ಲೋಕಸಭಾ ಸದಸ್ಯರಿಗೇ ಈ ರೀತಿ ನಿರ್ಬಂಧ ವಿಧಿಸಿರುವುದನ್ನು ನೋಡಿದರೆ, ಇತರ ಸಾಮಾನ್ಯ ದಲಿತರು ಹಟ್ಟಿಗೆ ಪ್ರವೇಶ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬುದು ವೇದ್ಯ. ನಾರಾಯಣಸ್ವಾಮಿಯವರು ಗೊಲ್ಲರಹಟ್ಟಿಯ ಜನರ ಮನವೊಲಿಸಲು ಪ್ರಯತ್ನಿಸಿದರೂ ಸಫಲವಾಗದೆ ಹಟ್ಟಿಯ ಹೊರಗಿನಿಂದಲೇ ಮರಳಿಬಂದದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ವ್ಯಂಗ್ಯವೇ ಸರಿ. ಗೊಲ್ಲರಹಟ್ಟಿಗೆ ಸರ್ಕಾರದಿಂದ ಒದಗಿಸಬಹುದಾದ ಸೌಲಭ್ಯಗಳ ಪರಾಮರ್ಶೆಗೆ ಹೋಗಿದ್ದ ಸಂಸದರು, ಹಟ ಹಿಡಿದಿದ್ದರೆ ಪೊಲೀಸ್‌ ಬಲ ಪ್ರಯೋಗಿಸಿ ಹಟ್ಟಿಯ ಒಳಗೆ ಹೋಗಬಹುದಿತ್ತು. ‘ಸಂಸದನಾದರೂ ನನ್ನನ್ನು ಅಸ್ಪೃಶ್ಯನಂತೆ ಕಂಡಿದ್ದು ಬೇಸರ ಮೂಡಿಸಿದೆ. ಮೌಢ್ಯದಿಂದ ಈ ಜನರನ್ನು ಹೊರತರಬೇಕಿದೆ. ಆದರೆ ಇದು ಬಲವಂತದಿಂದ ನಡೆಯಬಾರದು’ ಎಂದು ಅವರು ತಮ್ಮ ನಿಲುವನ್ನು ಹಾಗೂ ಅಸಹಾಯಕತೆಯನ್ನು ಬಹಿರಂಗವಾಗಿಯೇ ತೋಡಿಕೊಂಡಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ತಹಶೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿ, ‘ಸಂವಿಧಾನದ ಪ್ರಕಾರ ಯಾರನ್ನೂ ಹೀಗೆ ಜಾತಿಯ ಕಾರಣಕ್ಕೆ ನಿರ್ಬಂಧಿಸುವಂತಿಲ್ಲ, ಇಂತಹ ಘಟನೆ ಮತ್ತೊಮ್ಮೆ ನಡೆದರೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿರುವುದು ಸೂಕ್ತವೇ ಆಗಿದೆ. ಆದರೆ, ಎಚ್ಚರಿಕೆಯಿಂದ ಹೆಚ್ಚಿನ ಪ್ರಯೋಜನ ವಾಗುತ್ತದೆ ಅನ್ನಿಸುವುದಿಲ್ಲ. ಏಕೆಂದರೆ, ಗೊಲ್ಲರಹಟ್ಟಿಯಲ್ಲಿ ಆಚರಣೆಯಲ್ಲಿ ಇರುವುದು ಇದೊಂದೇ ಮೌಢ್ಯವಲ್ಲ; ಮಹಿಳೆಯರನ್ನು ಮುಟ್ಟು ಮತ್ತು ಹೆರಿಗೆಯ ಸಂದರ್ಭದಲ್ಲಿ ಹಟ್ಟಿಯಿಂದ ಹೊರಗೆ ಕೂಡಿಸುವುದು, ದೇವರು ಒಪ್ಪುವುದಿಲ್ಲ ಎನ್ನುವ ಕಾರಣಕ್ಕೆ ಶೌಚಾಲಯಗಳನ್ನು ಕಟ್ಟಿಸದಿರುವುದು... ಇಂತಹ ಇನ್ನೂ ಅನೇಕ ಅಮಾನವೀಯ ಪದ್ಧತಿಗಳಿವೆ. ಚಿತ್ರದುರ್ಗ ಮಾತ್ರವಲ್ಲ, ತುಮಕೂರು, ಚಿಕ್ಕಮಗಳೂರು, ಹಾಸನ, ಬಳ್ಳಾರಿ ಜಿಲ್ಲೆಗಳ ಗೊಲ್ಲರಹಟ್ಟಿಗಳಲ್ಲೂ ಇಂತಹ ಮೌಢ್ಯ ಈಗಲೂ ಆಚರಣೆಯಲ್ಲಿದೆ ಎನ್ನುವುದು ನಮ್ಮ ಒಟ್ಟಾರೆ ವ್ಯವಸ್ಥೆಯ ವೈಫಲ್ಯವನ್ನೇ ಎತ್ತಿ ತೋರಿಸುತ್ತದೆ. ಇಂತಹ ಮೌಢ್ಯವನ್ನು ಇಲ್ಲವಾಗಿಸಲು ನಮ್ಮ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಗಂಭೀರ ಪ್ರಯತ್ನವನ್ನು ಈವರೆಗೆ ಏಕೆ ಮಾಡಿಲ್ಲ ಎನ್ನುವ ಪ್ರಶ್ನೆಯನ್ನು ನಿರ್ಲಕ್ಷಿಸಲಾಗದು.

ಕಾಡುಗೊಲ್ಲರು ಮೂಲತಃ ಬುಡಕಟ್ಟು ಸಮುದಾಯದವರು. ಸಾಮಾಜಿಕವಾಗಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದವರು. ಸೌಲಭ್ಯಗಳಿಂದ ವಂಚಿತವಾಗಿರುವ ಈ ಸಮುದಾಯದ ಜನ, ಅಸ್ಪೃಶ್ಯತೆಯ ನೋವುಂಡ ಇನ್ನೊಂದು ಸಮುದಾಯವನ್ನು ಈ ಕಾಲಘಟ್ಟದಲ್ಲೂ ಅಸ್ಪೃಶ್ಯ ಎಂದು ಪರಿಗಣಿಸುತ್ತಿರುವುದು ವಿಪರ್ಯಾಸದ ಸಂಗತಿ. ದೇವರು, ಧರ್ಮದ ಹೆಸರಿನಲ್ಲಿ ಮೌಢ್ಯವನ್ನು ಪೋಷಿಸಿಕೊಂಡು ಬಂದಿರುವ ಕಾಡುಗೊಲ್ಲರನ್ನು ನಾಗರಿಕ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ತುರ್ತು
ಕ್ರಮಗಳನ್ನು ಕೈಗೊಳ್ಳಬೇಕಿದೆ. ಮುಖ್ಯವಾಗಿ, ಈ ಸಮುದಾಯವು ಶಿಕ್ಷಣದಲ್ಲಿ ಮುಂದೆ ಬರುವಂತೆ ನೋಡಿಕೊಳ್ಳಬೇಕು. ಅಸ್ಪೃಶ್ಯತೆಯ ಆಚರಣೆ ನಡೆಸುವವರಿಗೆ ಕಾನೂನಿನ ಭಯ ಹುಟ್ಟಿಸಬೇಕು ಎನ್ನುವುದು ನಿಜ. ಆದರೆ ದೇವರು, ದಿಂಡಿರ ಹೆಸರಿನಲ್ಲಿ ತಲೆತಲಾಂತರದಿಂದ ಬೆಳೆದುಬಂದಿರುವ ಮೌಢ್ಯವನ್ನು ಇಲ್ಲವಾಗಿಸುವುದು ಬರೀ ಕಾನೂನಿನ ಕ್ರಮದಿಂದ ಸಾಧ್ಯವಾಗುವುದಿಲ್ಲ. ಹಿಂದೆ ಗೊಲ್ಲರಹಟ್ಟಿಗಳಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲೂ ತೀವ್ರ ವಿರೋಧವಿತ್ತು. ಆದರೆ ಇತ್ತೀಚೆಗೆ ಆಧುನಿಕತೆಯ ಸೆಳೆತ ಮತ್ತು ಅರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಅನೇಕ ಹಟ್ಟಿಗಳಿಗೆ ವಿದ್ಯುತ್‌ ಸೌಲಭ್ಯ ಬಂದಿದೆ. ಈ ಮಾದರಿಯನ್ನೇ ಮುಂದಿಟ್ಟುಕೊಂಡು ಇತರ ಮೌಢ್ಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನ ಆಗಬೇಕು. ಈ ಪ್ರಯತ್ನಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಕೈಜೋಡಿಸಬೇಕು. ಈ ಪ್ರಕ್ರಿಯೆಯಲ್ಲಿ ಅದೇ ಸಮಾಜದ ಸುಶಿಕ್ಷಿತರು ಮತ್ತು ಮಠಾಧೀಶರ ನೆರವನ್ನೂ ಪಡೆದು ಮುಂದುವರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT