ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Editorial | ಪರಮಾಧಿಕಾರ ಕೊಟ್ಟುಕೊಂಡ ಸರ್ಕಾರಹೊಸ ಅಧಿಸೂಚನೆ ಹಿಂಪಡೆವುದು ಸೂಕ್ತ

Last Updated 12 ಏಪ್ರಿಲ್ 2023, 0:45 IST
ಅಕ್ಷರ ಗಾತ್ರ

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸೂತ್ರಗಳ ಸಂಹಿತೆ) ನಿಯಮಗಳಿಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರವು ಕಳೆದ ವಾರ ಅಧಿಸೂಚನೆ ಯಲ್ಲಿ ಪ್ರಕಟಿಸಿದೆ. ಈ ನಿಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯದ ಪಾಲಿಗೆ ಬೆದರಿಕೆಯಂತೆ ಇವೆ. ಅಧಿಸೂಚನೆಯ ಪ್ರಕಾರ, ಸರ್ಕಾರವೇ ನೇಮಿಸಿದ ಸತ್ಯಶೋಧನಾ ತಂಡವು ಸರ್ಕಾರಕ್ಕೆ ಸಂಬಂಧಿಸಿದ ನಕಲಿ, ತಪ್ಪು ಅಥವಾ ತಪ್ಪುದಾರಿಗೆ ಎಳೆಯುವ ಆನ್‌ಲೈನ್‌ ವಸ್ತು–ವಿಷಯಗಳನ್ನು ಗುರುತಿಸಲು ಅವಕಾಶ ಇದೆ. ಸಾಮಾಜಿಕ ಜಾಲತಾಣ ಕಂಪನಿಗಳು ಅಥವಾ ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಗಳು ಸರ್ಕಾರ ಸೂಚನೆ ನೀಡಿದ ನಂತರದಲ್ಲಿ ಇಂತಹ ವಸ್ತು–ವಿಷಯಗಳನ್ನು ಅಳಿಸಿಹಾಕಬೇಕು. ಇಲ್ಲದಿದ್ದರೆ ಈ ಕಂಪನಿಗಳಿಗೆ, ಕಾನೂನಿನ ಅಡಿ ಸಿಗುವ ಕೆಲವು ರಕ್ಷಣೆಗಳು ಇಲ್ಲವಾಗುತ್ತವೆ. ವಾಸ್ತವದಲ್ಲಿ ಈ ರಕ್ಷಣೆಗಳು ಇಂತಹ ಕಂಪನಿಗಳಿಗೆ, ಮೂರನೆಯ ವ್ಯಕ್ತಿಯು ಈ ಕಂಪನಿಗಳ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ವಸ್ತು–ವಿಷಯಗಳ ವಿಚಾರದಲ್ಲಿ ಹೊಣೆಗಾರಿಕೆಯಿಂದ ಮುಕ್ತಿ ನೀಡುವಂಥವು. ಸರ್ಕಾರ ಈಗ ಇರಿಸಿರುವ ಹೆಜ್ಜೆಯು ತಪ್ಪು. ಇದು ಒಪ್ಪಿತ ಸಹಜ ನ್ಯಾಯಕ್ಕೆ ವಿರುದ್ಧ. ಈಗ ಜಾರಿಯಲ್ಲಿ ಇರುವ ನಿಯಮಗಳು, ನ್ಯಾಯಾಲಯಗಳು ಹಿಂದೆ ನೀಡಿರುವ ತೀರ್ಪುಗಳಿಗೆ ವಿರುದ್ಧವಾಗಿವೆ. ಸಾಂವಿಧಾನಿಕ ಹಕ್ಕುಗಳನ್ನು ಇವು ಉಲ್ಲಂಘಿಸುತ್ತವೆ. ತಿದ್ದುಪಡಿ ಮಾಡಲಾಗಿರುವ ನಿಯಮಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ (2000) ವಿವರಿಸಲಾಗಿರುವ ಪ್ರಕ್ರಿಯೆಗಳನ್ನು ಉಲ್ಲಂಘಿಸುವಂತಿವೆ. ಆನ್‌ಲೈನ್‌ ಮೂಲಕ ಪ್ರಕಟಿಸಿದ ವಸ್ತು–ವಿಷಯಗಳನ್ನು ಅಳಿಸಿಹಾಕುವ ವಿಚಾರದಲ್ಲಿ ಶ್ರೇಯಾ ಸಿಂಘಾಲ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ 2015ರಲ್ಲಿ ನೀಡಿರುವ ಮಾರ್ಗಸೂಚಿಗಳಿಗೆ ಇವು ಅನುಗುಣವಾಗಿಲ್ಲ.

ಈ ಅಧಿಸೂಚನೆಯ ಮೂಲಕ ಕೇಂದ್ರ ಸರ್ಕಾರವು ಯಾವುದು ತಪ್ಪು ಹಾಗೂ ಯಾವುದು ಸರಿ ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ತನಗೆ ತಾನೇ ಯಾವುದೇ ಸಮರ್ಥನೆ ಇಲ್ಲದೆ ಕೊಟ್ಟುಕೊಂಡಿದೆ. ಇಂತಹ ವಸ್ತು–ವಿಷಯಗಳ ಅತ್ಯುನ್ನತ ಸಂಪಾದಕನ ಕೆಲಸವನ್ನು ಸರ್ಕಾರವು ವಹಿಸಿಕೊಂಡಿದೆ. ತನಗೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಸರ್ಕಾರವು ತಾನೇ ತೀರ್ಮಾನಿಸುತ್ತದೆ, ತಾನೇ ಶಿಕ್ಷೆ ವಿಧಿಸುತ್ತದೆ. ಸಂಬಂಧಪಟ್ಟವರಿಗೆ ಇದನ್ನು ನ್ಯಾಯಾಲಯ ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಪ್ರಶ್ನಿಸುವ ಅವಕಾಶ ಇರುವುದಿಲ್ಲ. ಇದು ನ್ಯಾಯಸಮ್ಮತ ನಡೆಯಲ್ಲ. ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಕ್ಷೇತ್ರವೊಂದರಲ್ಲಿ ತನಗೆ ಪರಮಾಧಿಕಾರವನ್ನು ಸರ್ಕಾರವು ಕೊಟ್ಟುಕೊಂಡಿದೆ. ಆನ್‌ಲೈನ್‌ ಲೋಕದಲ್ಲಿ ಮಧ್ಯವರ್ತಿ ಕಂಪನಿಗಳಾದ ಇಂಟರ್ನೆಟ್‌ ಸೇವಾದಾತರು, ಶೋಧ ಸೇವೆ ಒದಗಿಸುವ ಕಂಪನಿಗಳು, ಸಾಮಾಜಿಕ ಜಾಲತಾಣ ಕಂಪನಿಗಳು ಮಾಹಿತಿಯನ್ನು ಸರಿಯಾಗಿ ಪರಾಮರ್ಶಿಸುವ ಜವಾಬ್ದಾರಿ ಹೊಂದಿವೆ ಎಂದು ಸರ್ಕಾರ ಹೇಳಿದೆ. ಇದು ಸರಿಯಾದ ಮಾತು. ಆದರೆ ನಕಲಿ ಸುದ್ದಿ ಯಾವುದು, ತಪ್ಪುದಾರಿಗೆ ಎಳೆಯುವ ಸುದ್ದಿ ಯಾವುದು ಎಂಬುದಕ್ಕೆ ಸ್ಪಷ್ಟವಾದ ವ್ಯಾಖ್ಯಾನ ಇಲ್ಲ. ಇವುಗಳಿಗೆ ಸ್ಪಷ್ಟವಾದ ವ್ಯಾಖ್ಯಾನ ಇಲ್ಲದಿರುವಾಗ ಹಾಗೂ ಯಾವುದು ನಕಲಿ, ಯಾವುದು ತಪ್ಪುದಾರಿಗೆ ಎಳೆಯುವಂಥದ್ದು ಎಂಬುದನ್ನು ತೀರ್ಮಾನಿಸಲು ವಿಸ್ತೃತವಾದ ಪ್ರಕ್ರಿಯೆಗಳು ಇಲ್ಲದಿರುವಾಗ, ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲದಿರುವಾಗ ಸರ್ಕಾರ ಕೈಗೊಳ್ಳುವ ತೀರ್ಮಾನಗಳಲ್ಲಿ ಪಾರದರ್ಶಕತೆ ಇರುವುದಿಲ್ಲ. ಸರ್ಕಾರ ಕೈಗೊಳ್ಳುವ ತೀರ್ಮಾನಗಳು ಮನಸ್ಸಿಗೆ ಬಂದಂತೆ ಕೈಗೊಳ್ಳುವ ತೀರ್ಮಾನಗಳಂತೆ ಆಗುತ್ತವೆ. ಇಂತಹ ಅಧಿಕಾರವು ದುರ್ಬಳಕೆ ಆಗುತ್ತದೆ ಎಂಬುದರಲ್ಲಿ ಅನುಮಾನ ಬೇಡ.

ಸರ್ಕಾರ ಇರಿಸಿರುವ ಹೆಜ್ಜೆಯು ಸೆನ್ಸಾರ್ ವಿಧಿಸುವುದಕ್ಕೆ ಸಮ ಎಂದು ಭಾರತೀಯ ಸಂಪಾದಕರ ಕೂಟ ಹೇಳಿದೆ. ಈ ವಿಚಾರವಾಗಿ ಸಮಾಲೋಚನೆಯೇ ನಡೆದಿಲ್ಲ ಎಂದು ಅದು ಹೇಳಿದೆ. ಕೆಲವು ವಾರಗಳ ಹಿಂದೆ ಒಂದಿಷ್ಟು ನಿಯಮಗಳನ್ನು ಪ್ರಕಟಿಸಿದ್ದ ಸರ್ಕಾರವು ಇದೇ ಬಗೆಯ ವ್ಯಾಪಕ ಅಧಿಕಾರವನ್ನು ಪ್ರೆಸ್‌ ಇನ್‌ಫರ್ಮೇಷನ್‌ ಬ್ಯೂರೊಕ್ಕೆ ನೀಡಿತ್ತು (ಪಿಐಬಿ). ಈಗಿನ ನಿಯಮಗಳಲ್ಲಿ ಪಿಐಬಿಗೆ ಯಾವುದೇ ಪಾತ್ರವಿಲ್ಲದಿದ್ದರೂ, ಪರಿಣಾಮಗಳು ಮಾತ್ರ ಒಂದೇ. ಮಾಧ್ಯಮ ಸಂಸ್ಥೆಗಳು ಸುದ್ದಿಯನ್ನು ಬಿತ್ತರಿಸುವುದಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತವೆ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ವಸ್ತು–ವಿಷಯಗಳ ಮೇಲಿನ ನಿರ್ಬಂಧವು ಮಾಧ್ಯಮ ಸಂಸ್ಥೆಗಳ ಮೇಲೆಯೂ ಪರಿಣಾಮ ಉಂಟುಮಾಡುತ್ತದೆ. ಇದು ನಿರ್ಬಂಧ ಎಂಬ ಪದವನ್ನು ಬಳಸದೆಯೇ ನಿರ್ಬಂಧವನ್ನು ವಿಧಿಸಿದಂತಿದೆ. ಮಾಧ್ಯಮ ಸ್ವಾತಂತ್ರ್ಯದ ಮಹತ್ವವನ್ನು ಸಾರಿ ಹೇಳುವ ಹಲವು ತೀರ್ಪುಗಳನ್ನು ನ್ಯಾಯಾಲಯಗಳು ಈಚಿನ ದಿನಗಳಲ್ಲಿ ನೀಡಿವೆ. ಆದರೆ ಈ ನಿಯಮಾವಳಿಗಳು ಅವೆಲ್ಲವನ್ನೂ ಉಪೇಕ್ಷಿಸಿವೆ. ಅಧಿಕಾರದ ದುರ್ಬಳಕೆ ಆಗುವುದಿಲ್ಲ ಎಂದು ಸರ್ಕಾರ ನೀಡಿರುವ ಭರವಸೆಯನ್ನು ಒಪ್ಪಲು ಆಗುವುದಿಲ್ಲ. ಈ ಅಧಿಸೂಚನೆಯನ್ನು ಸರ್ಕಾರವು ಹಿಂಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT