ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಶಾಚಿಕ ಕೃತ್ಯ ತಡೆಯಲು ಎಲ್ಲರೂ ಕೈಜೋಡಿಸೋಣ

Last Updated 1 ಡಿಸೆಂಬರ್ 2019, 18:29 IST
ಅಕ್ಷರ ಗಾತ್ರ

ಏಳು ವರ್ಷಗಳ ಹಿಂದೆ ದೇಶವನ್ನು ತಲ್ಲಣಗೊಳಿಸಿದ್ದ ನಿರ್ಭಯಾ ಪ್ರಕರಣದಷ್ಟೇ ಪೈಶಾಚಿಕ ಕೃತ್ಯವೊಂದು ಹೈದರಾಬಾದ್‌ನಲ್ಲಿ ಇತ್ತೀಚೆಗೆ ಜರುಗಿದೆ. ಪಶುವೈದ್ಯೆಯೊಬ್ಬರ ಮೇಲೆಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ, ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಹೀನ ಕೃತ್ಯವು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರು ಇನ್ನೂ ಭೀತಿಯಲ್ಲೇ ಬದುಕಬೇಕಾಗಿರುವ ವಿಷಾದಕರ ಸ್ಥಿತಿಯನ್ನು, ಅವರ ಸುರಕ್ಷತೆಯ ಬಗೆಗಿನ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ನಿರ್ಭಯಾ ಪ್ರಕರಣವು ನಾಗರಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿ ರಾಷ್ಟ್ರವ್ಯಾಪಿ ಚಳವಳಿಗೆ ಕಾರಣವಾಗಿತ್ತು. ಸಾರ್ವಜನಿಕ ಅಭಿಪ್ರಾಯಕ್ಕೆ ಮಣಿದು ಸರ್ಕಾರ ಕೈಗೊಂಡ ಕೆಲವು ಕಾನೂನು ಕ್ರಮಗಳು, ಇನ್ನು ಮುಂದಾದರೂ ದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಕೃತ್ಯಗಳಿಗೆ ಕಡಿವಾಣ ಬೀಳಬಹುದು ಎಂಬ ಭರವಸೆಯನ್ನು ಚಿಗುರಿಸಿದ್ದವು. ಆದರೆ, ಆ ಭರವಸೆಯನ್ನು ಮಸುಕಾಗಿಸುವ ರೀತಿಯಲ್ಲಿ ದೌರ್ಜನ್ಯ ಕೃತ್ಯಗಳು ಆಗಿಂದಾಗ್ಗೆ ವರದಿಯಾ
ಗುತ್ತಲೇ ಇವೆ. ಆ ಮೂಲಕ, ಇಂತಹ ರಾಕ್ಷಸೀ ಕೃತ್ಯಗಳನ್ನು ಸಮರ್ಥವಾಗಿ ತಡೆಗಟ್ಟಲು ಬೇಕಾದ ರಾಜಕೀಯ ಮತ್ತು ಸಾಮಾಜಿಕ ಇಚ್ಛಾಶಕ್ತಿಯ ಕೊರತೆ ಕುರಿತು ಪ್ರಶ್ನೆಗಳು ಮೂಡಲು ಕಾರಣವಾಗುತ್ತಿವೆ. ನಿರ್ಭಯಾ ಪ್ರಕರಣದ ಬಳಿಕ, ಅತ್ಯಾಚಾರ, ಕೊಲೆಯಂತಹ ಗಂಭೀರ ಸ್ವರೂಪದ ಕೃತ್ಯಗಳಲ್ಲಿ ಪಾಲ್ಗೊಂಡ 18 ವರ್ಷದೊಳಗಿನ ಬಾಲಕರನ್ನೂ ಕಠಿಣ ಶಿಕ್ಷೆಗೊಳಪಡಿಸಲು ಸಾಧ್ಯವಾಗುವಂತೆ ಕಾನೂನಿಗೆ ತಿದ್ದುಪಡಿ ತರಲಾಯಿತು. ಮಹಿಳೆಯರು ಮತ್ತು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ವಿಧಿಸಲಾಗುತ್ತಿದ್ದ ಶಿಕ್ಷೆಯ ಪ್ರಮಾಣದಲ್ಲೂ ಏರಿಕೆಯಾಯಿತು. ಆದರೆ, ಅದರಿಂದಾಗಿ ನಂತರದ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆಯೇನಾದರೂ ಕಡಿಮೆಯಾಯಿತೇ? ಈ ಪ್ರಶ್ನೆಗೆ ನಿರಾಶಾದಾಯಕ ಉತ್ತರ ಬಿಟ್ಟರೆ ಬೇರೇನೂ ಸಿಗದು.ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ಈಚೆಗೆ ಬಿಡುಗಡೆ ಮಾಡಿದ 2017ರ ವರದಿಯ ಪ್ರಕಾರ, ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳ ಸಂಖ್ಯೆಯಲ್ಲಿ ಶೇ 9ರಷ್ಟು ಏರಿಕೆಯಾಗಿದೆ. ಮಹಿಳಾ ಸುರಕ್ಷತೆಗೆ ಸಂಬಂಧಿಸಿ ವಿವಿಧ ಯೋಜನೆಗಳನ್ನು ಕೈಗೊಳ್ಳಲು ನಿರ್ಭಯಾ ನಿಧಿ ಅಡಿ ಕೇಂದ್ರ ಸರ್ಕಾರವು 2015– 2018ರ ಅವಧಿಯಲ್ಲಿ ಬಿಡುಗಡೆ ಮಾಡಿದ ಒಟ್ಟು ₹854 ಕೋಟಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟಾರೆಯಾಗಿ ಬಳಸಿಕೊಂಡಿರುವ ಹಣಶೇ 20ಕ್ಕಿಂತಲೂ ಕಡಿಮೆ! ಮಹಿಳೆಯರ ಸುರಕ್ಷೆ ವಿಚಾರದಲ್ಲಿ ಸರ್ಕಾರಗಳ ನಿರ್ಲಕ್ಷ್ಯಕ್ಕೆ ಇದು ಕನ್ನಡಿ ಹಿಡಿಯುತ್ತದೆ. ‘ಪಶುವೈದ್ಯೆಯು ದುರ್ಘಟನೆಗೆ ಮುನ್ನ ತಂಗಿಗೆ ಕರೆ ಮಾಡುವ ಬದಲು ಪೊಲೀಸರಿಗೆ ಕರೆ ಮಾಡಿದ್ದಿದ್ದರೆ ಬದುಕಿರುತ್ತಿದ್ದರೇನೋ’ ಎಂದು ತೆಲಂಗಾಣ ಗೃಹ ಸಚಿವರು ಹೇಳಿದ್ದಾರೆ. ಅಂತಹ ಸ್ಥಿತಿಯಲ್ಲೂ ಆ ಬಗೆಯ ಆಲೋಚನೆಯೇ ಆ ವೈದ್ಯೆಗೆ ಬಂದಿಲ್ಲವೆಂದರೆ, ಸುರಕ್ಷಾ ಕ್ರಮಗಳ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವಲ್ಲಿ ಒಟ್ಟಾರೆ ವ್ಯವಸ್ಥೆ ಎಷ್ಟರಮಟ್ಟಿಗೆ ಸಫಲವಾಗಿದೆ ಎಂಬುದು ತಿಳಿಯುತ್ತದೆ.

ಅತ್ಯಾಚಾರದಂತಹ ಪ್ರಕರಣಗಳು ಈ ಮೊದಲು ಮುಚ್ಚಿಹೋಗುತ್ತಿದ್ದುದೇ ಹೆಚ್ಚು. ಕಳಂಕದ ಭೀತಿ, ಅಪರಾಧಿ ಕಡೆಯಿಂದ ಬರುವ ಬೆದರಿಕೆ, ಪುರಾವೆಗಳನ್ನು ನೀಡುವಾಗ ಅನುಭವಿಸಬೇಕಾದ ಮಾನಸಿಕ ಯಾತನೆಯ ಕಾರಣಕ್ಕೆ ದೂರು ದಾಖಲಿಸಲು ಸಂತ್ರಸ್ತರು ಹಿಂದೇಟು ಹಾಕುತ್ತಿದ್ದರು. ಈಗ ಜನರಲ್ಲಿ ಮೂಡುತ್ತಿರುವ ಪ್ರಜ್ಞೆ, ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ ಶಿಕ್ಷೆಗೆ ಗುರಿಯಾಗುತ್ತಿರುವ ಅಪರಾಧಿಗಳ ಸಂಖ್ಯೆ ಮಾತ್ರ ಅತ್ಯಲ್ಪ. ಸುಮಾರು ಶೇ 90ರಷ್ಟು ಪ್ರಕರಣಗಳಲ್ಲಿ ಅಪರಾಧ ಸಾಬೀತಾಗುತ್ತಿಲ್ಲ ಎಂಬ ಅಂಕಿಅಂಶವು ವ್ಯವಸ್ಥೆಯ ವೈಫಲ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಯಾವುದೇ ಅಪರಾಧಕ್ಕೆ ಶಿಕ್ಷೆ ತ್ವರಿತವಾಗಿ ಜಾರಿಯಾದರೆ, ಅದರಿಂದ ಕಾನೂನಿನ ಬಗ್ಗೆ ಜನರಲ್ಲಿ ಭಯ ಮೂಡುತ್ತದೆ. ಕಠಿಣ ಶಿಕ್ಷೆಯಿಂದ ಪಾರಾಗುವುದು ಅಸಾಧ್ಯ ಎಂಬಂಥ ಸಂದೇಶವನ್ನು ತ್ವರಿತ ನ್ಯಾಯದಾನದ ಮೂಲಕ ಗಟ್ಟಿಯಾಗಿ ಸಮಾಜಕ್ಕೆ ರವಾನಿಸಲು ನಮ್ಮ ವ್ಯವಸ್ಥೆಗೆ ಇನ್ನೂ ಸಾಧ್ಯವಾಗಿಲ್ಲ. ಇಂತಹ ಸ್ಥಿತಿಗೆ ತನಿಖಾ ವ್ಯವಸ್ಥೆಯಲ್ಲಿನ ಲೋಪಗಳೂ ಪ್ರಮುಖ ಕಾರಣಗಳಾಗುತ್ತಿವೆ. ಈ ದಿಸೆಯಲ್ಲಿ ಪೊಲೀಸ್‌ ಇಲಾಖೆಯ ಜವಾಬ್ದಾರಿ ಹೆಚ್ಚಿನದು. ಮೊಕದ್ದಮೆ ದಾಖಲಿಸುವಲ್ಲಿಂದ ಹಿಡಿದು ತನಿಖೆಯ ವಿವಿಧ ಹಂತಗಳವರೆಗೆ ಪೊಲೀಸ್‌ ವ್ಯವಸ್ಥೆ ಹೆಚ್ಚು ವೃತ್ತಿಪರತೆಯನ್ನು ಪ್ರದರ್ಶಿಸಬೇಕು.ಮಹಿಳೆ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ವ್ಯವಸ್ಥೆ ಮತ್ತಷ್ಟು ಸೂಕ್ಷ್ಮವಾಗಿಯೂ ಚುರುಕಾಗಿಯೂ ಕೆಲಸ ಮಾಡಬೇಕು. ಅದಕ್ಕೆ ಬೇಕಾದ ಎಲ್ಲ ನೆರವು ಮತ್ತು ಸಹಕಾರ ನೀಡುವುದು ಸರ್ಕಾರಗಳಿಗೆ ಆದ್ಯತೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT