ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸೌರವಿದ್ಯುತ್‌ ಉತ್ಪಾದನೆ: ಮಹತ್ವದ ಯೋಜನೆ, ಶೀಘ್ರ ಅನುಷ್ಠಾನಗೊಳ್ಳಲಿ

Published 25 ಜನವರಿ 2024, 19:30 IST
Last Updated 25 ಜನವರಿ 2024, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಘೋಷಿಸಿರುವ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ಯು ದೇಶದ ಇಂಧನ ಉತ್ಪಾದನೆಯ ಗತಿಯನ್ನೇ ಬದಲಿಸಬಹುದಾದ ಮಹತ್ವಾಕಾಂಕ್ಷಿ ಉಪಕ್ರಮ. ದೇಶದಾದ್ಯಂತ ಒಂದು ಕೋಟಿ ಮನೆಗಳ ಮೇಲೆ ಸೌರವಿದ್ಯುತ್‌ ಘಟಕಗಳನ್ನು ಅಳವಡಿಸುವ ಪ್ರಸ್ತಾವವನ್ನು ಈ ಯೋಜನೆಯು ಹೊಂದಿದೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಹೆಚ್ಚಳದ ಇಂದಿನ ಸಂದರ್ಭದಲ್ಲಿ, ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯ ಪ್ರಮಾಣವನ್ನು ಸಾಧ್ಯವಾದಷ್ಟೂ ಹೆಚ್ಚಿಸುವ ತುರ್ತು ಅಗತ್ಯವಿದೆ.

ಕಲ್ಲಿದ್ದಲು, ಕಚ್ಚಾತೈಲದಂಥ ಪಳೆಯುಳಿಕೆ ಅಥವಾ ಸಾಂಪ್ರದಾಯಿಕ ಇಂಧನ ಮೂಲಗಳ ಬಳಕೆಯನ್ನು ಕಡಿಮೆ ಮಾಡುವುದಾಗಿ ಜಾಗತಿಕ ಸಮುದಾಯಕ್ಕೆ ಭಾರತ ಕೊಟ್ಟಿರುವ ಮಾತನ್ನು ಕೂಡ ಉಳಿಸಿಕೊಳ್ಳಬೇಕಿದೆ. ಆ ದಿಸೆಯಲ್ಲಿ ಪ್ರಸಕ್ತ ಯೋಜನೆಯ ಮಹತ್ವವನ್ನು ನಾವು ಗ್ರಹಿಸಬೇಕಿದೆ. ಅಲ್ಲದೆ, ಸೌರವಿದ್ಯುತ್‌ ಘಟಕಗಳು ಗೃಹಬಳಕೆಯ ಶಕ್ತಿಮೂಲಗಳ ವೆಚ್ಚವನ್ನು ಬಹುಪಾಲು ತಗ್ಗಿಸಲಿವೆ. ವರ್ಷದಲ್ಲಿ ಸರಿಸುಮಾರು 250ರಿಂದ 300 ದಿನಗಳವರೆಗೆ ಒಳ್ಳೆಯ ಬಿಸಿಲು ಬೀಳುವುದರಿಂದ ತಾರಸಿ ಮೇಲಿನ ವಿದ್ಯುತ್‌ ಉತ್ಪಾದನೆಗೆ ಭಾರತವು ಅತ್ಯಂತ ತಕ್ಕ ತಾಣವಾಗಿದೆ. ದೇಶದಲ್ಲಿ ಒಟ್ಟಾರೆ 30 ಕೋಟಿ ಮನೆಗಳ ಮೇಲೆ ಸೌರವಿದ್ಯುತ್‌ ಘಟಕ ಹಾಕಲು ಅವಕಾಶವಿದೆ ಎಂದೂ ಅಂದಾಜಿಸಲಾಗಿದೆ.

ಕೇಂದ್ರ ಸರ್ಕಾರವು ಗೃಹ ಬಳಕೆದಾರ ಗ್ರಾಹಕರಿಗೆ ಸೌರವಿದ್ಯುತ್‌ ಘಟಕ ಅಳವಡಿಸಿಕೊಳ್ಳುವಂತೆ ಉತ್ತೇಜಿ ಸಲು 2022ರ ಜುಲೈನಲ್ಲಿಯೇ ನೋಂದಣಿ ವ್ಯವಸ್ಥೆಯನ್ನು ಆರಂಭಿಸಿದೆ. ಆದರೆ, ಇದುವರೆಗೆ ಅದಕ್ಕೆ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಸಿಕ್ಕಿಲ್ಲ. ಸದ್ಯ ದೇಶದಲ್ಲಿ ಹತ್ತು ಲಕ್ಷ ಮನೆಗಳು ಮಾತ್ರ ಸೌರವಿದ್ಯುತ್‌ ಘಟಕ ಹೊಂದಿವೆ. 2022ರ ವೇಳೆಗೆ 100 ಗಿಗಾ ವಾಟ್‌ ಸೌರವಿದ್ಯುತ್‌ ಉತ್ಪಾದನೆ ಮಾಡುವಷ್ಟು ಮೂಲಸೌಕರ್ಯವನ್ನು ಹೊಂದಬೇಕು ಎಂಬ ಗುರಿಯೊಂದಿಗೆ ಕೇಂದ್ರ ಸರ್ಕಾರ 2014ರಲ್ಲಿಯೇ ಯೋಜನೆಯನ್ನು ಹಾಕಿಕೊಂಡಿತ್ತು. ಆದರೆ, ಆ ಗುರಿಯನ್ನು ಇನ್ನೂ ಸಾಧಿಸಲು ಸಾಧ್ಯವಾಗಿಲ್ಲ. ಕೋವಿಡ್‌ ಸಾಂಕ್ರಾಮಿಕದಿಂದಲೂ ಈ ಯೋಜನೆಗೆ ಭಾಗಶಃ ಹಿನ್ನಡೆಯಾಗಿದೆ.

ಇದುವರೆಗೆ 11 ಗಿಗಾ ವಾಟ್‌ ಉತ್ಪಾದನೆಗೆ ಬೇಕಾದ ಸೌರವಿದ್ಯುತ್‌ ಘಟಕಗಳ ಅಳವಡಿಕೆ ಮಾತ್ರ ಸಾಧ್ಯವಾಗಿದೆ. ಅದರಲ್ಲಿ ಗೃಹ ಘಟಕಗಳ ಉತ್ಪಾದನಾ ಸಾಮರ್ಥ್ಯದ ಪ್ರಮಾಣ 2.7 ಗಿಗಾ ವಾಟ್‌ನಷ್ಟಿದೆ. ಈ ಕಳಪೆ ಸಾಧನೆಗೆ ಹಲವು ಕಾರಣಗಳುಂಟು. ಸೌರವಿದ್ಯುತ್‌ ಘಟಕ ಅಳವಡಿಕೆಯ ವೆಚ್ಚವು ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಇರುವುದು ನಿಜವಾದರೂ ಜನಸಾಮಾನ್ಯರ ಪಾಲಿಗೆ ಅದು ಇನ್ನೂ ಕೈಗೆಟಕುತ್ತಿಲ್ಲ. ರಾಷ್ಟ್ರೀಯ ಸೌರವಿದ್ಯುತ್‌ ಯೋಜನೆ ಮೂಲಕ ಈ ಘಟಕಗಳ ಸ್ಥಾಪನೆಗೆ ಒಟ್ಟು ವೆಚ್ಚದ ಶೇ 40ರಷ್ಟನ್ನು ನೆರವಿನ ರೂಪದಲ್ಲಿ ನೀಡಲಾಗುತ್ತಿದೆ. ಸರ್ಕಾರ ಈಗ ಹೊಸದಾಗಿ ಘೋಷಿಸಿರುವ ಕಾರ್ಯಕ್ರಮದ ಮೂಲಕ ಜನಸಾಮಾನ್ಯರಿಗೆ ಹೆಚ್ಚಿನ ಆರ್ಥಿಕ ಹಾಗೂ ತಾಂತ್ರಿಕ ನೆರವು ಸಿಗಬಹುದೆಂಬ ನಿರೀಕ್ಷೆ ಇದೆ. ಆಕರ್ಷಕ ಕೊಡುಗೆ ಇದಾಗಿರಲಿದೆ ಎಂದೂ ಆಶಿಸಲಾಗಿದೆ.

ತಾರಸಿ ಮೇಲೆ ವಿದ್ಯುತ್‌ ಉತ್ಪಾದನೆ ಮಾಡುವುದರ ಮಹತ್ವದ ಕುರಿತು ಜನಜಾಗೃತಿ ಆಂದೋಲನವನ್ನು ಆರಂಭಿಸುವುದಾಗಿ ಪ್ರಧಾನಿ ಪ್ರಕಟಿಸಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಇಂತಹ ಜನಜಾಗೃತಿಯ ಅಗತ್ಯ ತುಂಬಾ ಹೆಚ್ಚಾಗಿದೆ. ತಾರಸಿ ಮೇಲೆ ಉತ್ಪಾದನೆಯಾಗುವ ವಿದ್ಯುತ್‌ಗೆ ಮುಖ್ಯ ವಿದ್ಯುತ್‌ ಜಾಲದೊಂದಿಗೆ ಸಂಪರ್ಕ ಕಲ್ಪಿಸಿದರೆ ಗ್ರಾಮಾಂತರ ಭಾಗದಲ್ಲಿ ವಿದ್ಯುತ್‌ ಕಡಿತದ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಹೆಚ್ಚು ಹೆಚ್ಚು ಇ–ವಾಹನ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಅಳವಡಿಸಲೂ ಇದರಿಂದ ಅವಕಾಶ ಒದಗಲಿದೆ. ಇ–ವಾಹನಗಳ ಮಾರಾಟದಲ್ಲಿ ಚಾರ್ಜಿಂಗ್‌ ಪಾಯಿಂಟ್‌ಗಳ ಕೊರತೆಯೇ ಮುಖ್ಯ ತೊಡಕು. ಈ ಯೋಜನೆಯ ಅನುಷ್ಠಾನದಿಂದ ಆ ತೊಡಕು ಸಹ ನೀಗಲಿದೆ. ಯೋಜನೆಯ ಜಾರಿಗೆ ಪ್ರಧಾನಿಯವರೇನೂ ಕಾಲಮಿತಿಯನ್ನು ನಿಗದಿಗೊಳಿಸಿಲ್ಲ. ಸಾಧ್ಯವಾದಷ್ಟು ಬೇಗ ಜನರಿಗೆ ತಲುಪುವಂತಾದರೆ ಒಳ್ಳೆಯದು. ಯೋಜನೆಯಲ್ಲಿ ಜನರ ಪಾಲ್ಗೊಳ್ಳುವಿಕೆಯು ಇಂಧನದಂತಹ ಪ್ರಮುಖ ಕ್ಷೇತ್ರದಲ್ಲಿ ಅವರ ಸ್ವಾವಲಂಬನೆಯನ್ನು ಹೆಚ್ಚಿಸಲಿದೆ. ಅಭಿವೃದ್ಧಿ ಚಟುವಟಿಕೆಗಳಿಗೂ ಇದು ವೇಗವರ್ಧಕವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT