ಪಾಕ್ಗೆ ರಷ್ಯ ಶಸ್ತ್ರಾಸ್ತ್ರ ನೆರವು ಭಾರತ ಸಹಿಸದು: ಪ್ರಧಾನಿ ಇಂದಿರಾಗಾಂಧಿ ಸ್ಪಷ್ಟನೆ
ಕಲ್ಕತ್ತ, ಸೆ. 14– ಪಾಕಿಸ್ತಾನಕ್ಕೆ ಯಾವುದೇ ಬಗೆಯ ರಷ್ಯದ ಶಸ್ತ್ರಾಸ್ತ್ರ ನೆರವನ್ನೂ ಭಾರತ ಸಹಿಸದು ಎಂದು ಪ್ರಧಾನಿ ಇಂದಿರಾ ಗಾಂಧಿ ಹೇಳಿದರು. ಕಲ್ಕತ್ತೆಯ ಡಂಡಂ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
‘ಮಾಸ್ಕೊದಲ್ಲಿ ರಷ್ಯ ಮತ್ತು ಭಾರತ ವಿದೇಶಾಂಗ ಸಚಿವರ ನಡುವೆ ಯಾವ ವಿಷಯಗಳು ಚರ್ಚಿತವಾಗಿವೆಯೋ ಗೊತ್ತಿಲ್ಲ. ಪಾಕಿಸ್ತಾನಕ್ಕೆ ಯಾವುದೇ ಬಗೆಯ ರಷ್ಯದ ಶಸ್ತ್ರಾಸ್ತ್ರ ನೆರವಿಗೆ ನಮ್ಮ ಅಸಮಾಧಾನವಿದೆ’ ಎಂದು ಹೇಳಿದರು.
ರಾಜಕೀಯ ಜೀವನದಲ್ಲಿ ತಿಕ್ಕಾಟ ಸಹಜ
ಕಲ್ಕತ್ತ, ಸೆ. 14– ಯಾವುದೇ ರಾಷ್ಟ್ರದ ರಾಜಕೀಯ ಜೀವನದಲ್ಲೂ ತಿಕ್ಕಾಟ ಮತ್ತು ಕಷ್ಟಗಳು ಇದ್ದದ್ದೆ ಎಂದು ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಹೇಳಿದರು. ಪಶ್ಚಿಮ ಬಂಗಾಳದ ಕಾಂಗ್ರೆಸ್ಸಿಗರಲ್ಲಿ ಇರುವ ಭಿನ್ನಾಭಿಪ್ರಾಯಗಳ ಬಗ್ಗೆ ಅವರು ಉತ್ತರ ನೀಡಿದರು.
ಕನ್ನಡ ಭಾಷಾಭಿವೃದ್ಧಿಗೆ ಬೆಂಬಲ
ಬೆಂಗಳೂರು, ಸೆ. 14– ಓದುವ ಅಭ್ಯಾಸ ಬೆಳೆಸಿಕೊಂಡು ಕನ್ನಡ ಸಾಹಿತ್ಯ ವ್ಯವಸಾಯದಲ್ಲಿ ತೊಡಗಲು ಬೆಂಗಳೂರಿನ ಆರ್ಚ್ಬಿಷಪ್ ಮೋ.ರೆ.ಡಾ. ಡಿ. ಎಸ್. ಲೂರ್ಹುಸ್ವಾಮಿ ಅವರು ಇಂದು ಇಲ್ಲಿ ಯುವಕರಿಗೆ ಕರೆಯಿತ್ತರು.
ಕೆಥೋಲಿಕ್ ಕ್ರೈಸ್ತರ ಕನ್ನಡ ಸಾಹಿತ್ಯ ಸಂಘವು ಕ್ಲೀವ್ ಲೆಂಡ್ಟೌನ್ ಸಂತಕ್ಸೇವಿಯರ್ ಸಭಾ ಮಂದಿರದಲ್ಲಿ ಆಚ
ರಿಸಿದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಅವರು ಕನ್ನಡ ಭಾಷಾಭಿವೃದ್ಧಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಗದ್ದೆಯಲ್ಲಿ ಮತ್ಸ್ಯ ವ್ಯವಸಾಯ
ಬೆಂಗಳೂರು, ಸೆ. 14– ಭತ್ತದ ಗದ್ದೆಯಲ್ಲಿ ಮತ್ಸ್ಯ ವ್ಯವಸಾಯವನ್ನು ಲಾಭದಾಯಕವಾಗಿ ಮಾಡಬಹುದೆಂದು ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯ ನಡೆಸಿರುವ ಪ್ರಯೋಗದಿಂದ ವ್ಯಕ್ತವಾಗಿದೆ. ಭತ್ತದ ಗದ್ದೆಗಳಲ್ಲಿ ಮೀನು ಸಾಕಣೆಯಿಂದ ಬೆಳೆಗೆ ಹಾನಿಯಾಗದು ಮಾತ್ರವಲ್ಲ ಈ ಉದ್ದೇಶಕ್ಕಾಗಿ ಹೆಚ್ಚಿನ ವಿನಿಯೋಗವೂ ಅನಗತ್ಯ. ಮೂರೂವರೆ ತಿಂಗಳುಗಳ ಕಾಲ 6 ರಿಂದ 12 ಸೆಂಟಿಮೀಟರ್ಗಳಷ್ಟು ಆಳ ನೀರು ನಿಲ್ಲುವ ಗದ್ದೆಗಳಲ್ಲಿ ಮತ್ಸ್ಯ ವ್ಯವಸಾಯ ಸಾಧ್ಯ ಎಂದು ಪ್ರಯೋಗದಿಂದ ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.