ಬ್ರಹ್ಮಾನಂದರೆಡ್ಡಿ ರಾಜೀನಾಮೆ ಹೈದರಾಬಾದಿನಲ್ಲಿ ಘರ್ಷಣೆ, ಕರ್ಫ್ಯೂ
ಹೈದರಾಬಾದ್, ಜೂನ್ 27–ರಾಜೀನಾಮೆ ನೀಡಲು ಆಂಧ್ರ ಪ್ರದೇಶ ಮುಖ್ಯಮಂತ್ರಿ ಶ್ರೀ ಬ್ರಹ್ಮಾನಂದರೆಡ್ಡಿ ನಿರ್ಧರಿಸಿದ್ದಾರೆ.
ರಾಷ್ಟ್ರ ಹಾಗೂ ರಾಜ್ಯದ ಹಿತ ಸಾಧನೆಗಾಗಿ ದಾಕ್ಷಿಣ್ಯರಹಿತ ನಿರ್ಧಾರ ತೆಗೆದುಕೊಳ್ಳಲು ಪಾರ್ಲಿಮೆಂಟರಿ ಮಂಡಲಿಗೆ ಅವಕಾಶ ಮಾಡಿಕೊಡುವುದೇ ತಮ್ಮ ರಾಜೀನಾಮೆಯ ಉದ್ದೇಶವೆಂದು ಇಂದು ಮಧ್ಯಾಹ್ನ ಅವರು ನುಡಿದರು.
ತಮ್ಮ ರಾಜೀನಾಮೆಯನ್ನು ಪಾರ್ಲಿಮೆಂಟರಿ ಮಂಡಲಿಗೆ ಸಲ್ಲಿಸಿರುವುದಾಗಿ ಶ್ರೀ ರೆಡ್ಡಿ ತಿಳಿಸಿದರು.
‘ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪ ಮತ್ತು ಉಪಪ್ರಧಾನಿ ಮುರಾರಜಿ ದೇಸಾಯಿ ಅವರೊಡನೆ ಇಂದು ಬೆಳಿಗ್ಗೆ ಮಾತನಾಡಿದೆ’ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ದೆಹಲಿ ವಿಸ್ಮಯ
ನವದೆಹಲಿ, ಜೂನ್ 27– ಆಂಧ್ರ ಪ್ರದೇಶದ ಮುಖ್ಯಮಂತ್ರಿ ಬ್ರಹ್ಮಾನಂದರೆಡ್ಡಿಯವರ ರಾಜೀನಾಮೆ ಇಲ್ಲಿನ ರಾಜಕೀಯ ವೀಕ್ಷಕರನ್ನು ಚಕಿತಗೊಳಿಸಿದೆ.
ಬ್ರಹ್ಮಾನಂದರೆಡ್ಡಿಯವರು ಕಳೆದ ಎರಡು ದಿನಗಳ ಹಿಂದೆ ಡಾ. ಚೆನ್ನಾರೆಡ್ಡಿ ಮತ್ತು ಕೊಂಡಾ ಲಕ್ಷ್ಮಣ್ ಬಾಪೂಜಿಯವರನ್ನು ಸ್ಥಾನಬದ್ಧತೆಯಲ್ಲಿಡುವ ವಿವಾದಾತ್ಮಕ ನಿರ್ಧಾರ ಕೈಗೊಂಡಿದ್ದ ಕಾರಣ ಈಗ ಅವರ ರಾಜೀನಾಮೆ ರಾಜಕೀಯ ನಾಯಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.