ಬೆಂಗಳೂರು, ಜ. 13– ರಾಜ್ಯ ವಿದ್ಯುತ್ ಮಂಡಲಿಯ ಸುಮಾರು 22 ಸಾವಿರ ಮಂದಿ ನೌಕರರಿಗೆ ಕನಿಷ್ಠ 15ರಿಂದ ಪರಮಾವಧಿ 100 ರೂಪಾಯಿವರೆಗೆ ಸಂಬಳ ಹೆಚ್ಚುವ ಹೊಸ ವೇತನ ವ್ಯವಸ್ಥೆ 1969ರ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ.
ವಿದ್ಯುತ್ ನೌಕರರ ಸಂಘ ಹಾಗೂ ಮಂಡಳಿಯ ಆಡಳಿತದ ನಡುವೆ ನಿನ್ನೆ ಆದ ಒಪ್ಪಂದದ ರೀತ್ಯ ನೌಕರರ ಕನಿಷ್ಠ ವೇತನ 140 ರೂಪಾಯಿ.
‘ಭಾರತೀಕರಣ’ ಘೋಷಣೆ ವಿರುದ್ಧ ಎಚ್ಚರಿಕೆ: ಪ್ರಧಾನಿ
ವಾರಾಣಸಿ, ಜ. 13– ಅಲ್ಪಸಂಖ್ಯಾತರನ್ನು ‘ಭಾರತೀಕರಣ’ ಮಾಡಬೇಕೆಂಬ ಘೋಷಣೆ ವಿರುದ್ಧ ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಎಚ್ಚರಿಸಿದರು.
ಜಾತಿ, ಮತ, ಜನಾಂಗಗಳ ಆಧಾರದ ಮೇಲೆ ಭೇದಭಾವ ತೋರುವ ತತ್ವ ಈ ಹಿಂದೆ ರಾಷ್ಟ್ರಕ್ಕೆ ಅಪಾರ ಹಾನಿಯುಂಟು ಮಾಡಿದೆ ಎಂದೂ ಅವರು ತಿಳಿಸಿದರು.
ಭಾರತೀಯರು ಯಾವುದೇ ಒಂದು ಜನಾಂಗವನ್ನು ಪ್ರತಿನಿಧಿಸುವುದಿಲ್ಲ, ಆದರೆ ಅದು ನಾನಾ ಜನಾಂಗಗಳ ಮತ್ತು ಧರ್ಮಗಳ ಸಮ್ಮೇಳನವನ್ನು ಪ್ರತಿನಿಧಿಸುತ್ತದೆ ಎಂದೂ ಅವರು ನುಡಿದರು.
ಜಾತಿ, ಮತ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಂವಿಧಾನವು ಸಮಾನತೆಯ ಹಕ್ಕನ್ನು ನೀಡಿದೆ. ಅಲ್ಪಸಂಖ್ಯಾತರನ್ನು ಸಂರಕ್ಷಿಸುವುದು ಬಹುಸಂಖ್ಯಾತರ ಕರ್ತವ್ಯ ಎಂದೂ ಅವರು ತಿಳಿಸಿದರು.
ಬಿಹಾರ ಸರ್ಕಾರ ರಚನೆಗೆ ಕಾವೇರಿದ ಚಟುವಟಿಕೆ: ಹರಿಹರ್ಗೆ ಆಹ್ವಾನ
ಪಟ್ನ, ಜ. 13– ಬಿಹಾರದಲ್ಲಿ ಬಹುತೇಕ ಶಾಸಕರ ಬೆಂಬಲ ತಮಗಿದೆ ಎಂದು ಎರಡು ಕಾಂಗ್ರೆಸ್ ಪಕ್ಷಗಳೂ ಹೇಳುತ್ತಿವೆಯಲ್ಲದೆ ಸಮ್ಮಿಶ್ರ ಸರ್ಕಾರ ರಚನೆಯ ಸಾಧ್ಯತೆ ಬಗ್ಗೆ ಇತರ ಪಕ್ಷಗಳೊಡನೆ ತೀವ್ರ ಮಾತುಕತೆಗಳಲ್ಲಿ ನಿರತವಾಗಿವೆ.
ಏತನ್ಮಧ್ಯೆ ಮಂತ್ರಿಮಂಡಲ ರಚಿಸುವುದಕ್ಕಾಗಿ ಶನಿವಾರ ತಮ್ಮನ್ನು ಭೇಟಿ ಮಾಡಬೇಕೆಂದು ಸರ್ದಾರ್ ಹರಿಹರಸಿಂಗ್ ಅವರಿಗೆ ತಾವು ತಿಳಿಸಿಲ್ಲವೆಂದು ಬಿಹಾರದ ರಾಜ್ಯಪಾಲ ಶ್ರೀ ನಿತ್ಯಾನಂದ ಕನುಂಗೊ ಹೇಳಿದ್ದಾರೆ.
ಮಂತ್ರಿಮಂಡಲ ರಚಿಸಲು ಜನವರಿ 17ರಂದು ಶ್ರೀ ಹರಿಹರಸಿಂಗ್ ಅವರಿಗೆ ರಾಜ್ಯಪಾಲರು ಆಮಂತ್ರಣ ನೀಡಲಿದ್ದಾರೆಂದು ಇಂದು ನವದೆಹಲಿಯಲ್ಲಿ ವಿರೋಧಿ ಕಾಂಗ್ರೆಸ್ ನಾಯಕ ಡಾ. ರಾಮ್ಸುಭಗ್ ಸಿಂಗ್ ಹೇಳಿದ್ದರು.