ಸಣ್ಣ ಕೈಗಾರಿಕೆ ಉತ್ಪನ್ನಗಳಿಗೆ ಎಕ್ಸೈಜ್ ಸುಂಕ ರಿಯಾಯಿತಿ ನವದೆಹಲಿ, ಮೇ 1– ಇಂದು ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಮಂಡಿಸಿದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು 1970– 71ನೇ ಸಾಲಿನ ಆಯವ್ಯಯ ಮುಂಗಡಪತ್ರದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಪ್ರಕಟಿಸಿದರು.
ಪರಿಣಾಮವಾಗಿ ಎಕ್ಸೈಜ್ ಸುಂಕದಿಂದ ಸರ್ಕಾರಕ್ಕೆ ಬರಬೇಕಾಗಿರುವ ಆದಾಯದಲ್ಲಿ ಒಂದು ಕೋಟಿ ಎಂಬತ್ತು ಲಕ್ಷ ರೂಪಾಯಿ ಖೋತಾ ಆಗಲಿದೆ.
ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳಿಂದಾಗಿ ಉದ್ಭವಿಸಿರಬಹುದಾದ ನಿಜವಾದ ಕಷ್ಟಗಳನ್ನು ನಿವಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಸಣ್ಣಪುಟ್ಟ ಬದಲಾವಣೆಗಳನ್ನು ಪ್ರಕಟಿಸಿದ ಶ್ರೀಮತಿ ಗಾಂಧಿ ತಿಳಿಸಿದರು.
ಸಣ್ಣ ಕೈಗಾರಿಕೆಗಳಲ್ಲಿನ ತಯಾರಿಕೆಗಾರರು ಎದುರಿಸಬಹುದಾದ ಕಷ್ಟನಷ್ಟಗಳನ್ನು ನಿವಾರಿಸುವುದೇ ಪರೋಕ್ಷ ತೆರಿಗೆಗಳಲ್ಲಿ ಮಾರ್ಪಾಟು ಮಾಡಿರುವುದರ ಮುಖ್ಯ ಉದ್ದೇಶವೆಂದು ಶ್ರೀಮತಿ ಗಾಂಧಿ ನುಡಿದರು.
ಆಸ್ತಿಪಾಸ್ತಿ ಹಕ್ಕು ತೆಗೆದುಹಾಕಬೇಕೆಂಬ ನಿರ್ಣಯ ತಿರಸ್ಕೃತ ನವದೆಹಲಿ, ಮೇ 1– ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಿಂದ ಆಸ್ತಿಪಾಸ್ತಿ ಹಕ್ಕನ್ನು ತೆಗೆದುಹಾಕಬೇಕೆಂಬ ಪಿ.ರಾಮಮೂರ್ತಿ (ಮಾರ್ಕ್ಸ್ವಾದಿ ಕಮ್ಯುನಿಸ್ಟ್) ಅವರ ಖಾಸಗಿ ನಿರ್ಣಯವನ್ನು ಲೋಕಸಭೆ ಇಂದು ಧ್ವನಿಮತದಿಂದ ತಿರಸ್ಕರಿಸಿತು.