ಮೈಸೂರು ಉಪಚುನಾವಣೆ ಪರಾಭವ: ಸಂಸ್ಥಾ ಕಾಂಗ್ರೆಸ್ ಎಂ.ಪಿ.ಗಳ ಕಳವಳ
ನವದೆಹಲಿ, ಮೇ 6– ಮೈಸೂರು ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರಾಭವಕ್ಕೆ ಕಾರಣ ಕುರಿತು ವಿವರ ತನಿಖೆ ನಡೆಸುವಂತೆ ಸಂಸ್ಥಾ ಕಾಂಗ್ರೆಸ್ ಸಂಸದೀಯ ಪಕ್ಷವು ಇಂದು ಕಾರ್ಯಕಾರಿ ಸಮಿತಿಯನ್ನು ಕೋರಿದೆ.
ಮೇ 23ರಂದು ಕಾರ್ಯಕಾರಿ ಸಮಿತಿಯು ಇಲ್ಲಿ ಸಭೆ ಸೇರಲಿರುವುದರಿಂದ ತನಿಖೆ ನಡೆಸಲು ಸಣ್ಣ ಸಮಿತಿಯೊಂದನ್ನು ರಚಿಸುವಂತೆ ಅಧ್ಯಕ್ಷ ಎಸ್. ನಿಜಲಿಂಗಪ್ಪನವರನ್ನು ಪ್ರಾರ್ಥಿಸುವ ಸಂಭವವಿದೆ. ಸಮಿತಿಯ ವರದಿಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪರಿಶೀಲಿಸಬಹುದು.
ವಿದೇಶಿ ಹಣದ ಪ್ರಭಾವ ತಪ್ಪಿಸಲು ಶೀಘ್ರವೇ ಶಾಸನ
ನವದೆಹಲಿ, ಮೇ 6– ಭಾರತದಲ್ಲಿ ವಿದೇಶಿ ಹಣದ ಪ್ರಭಾವ ನಿರೋಧಿಸಲು ಮಸೂದೆಯೊಂದನ್ನು ಮಂಡಿಸಲು ಕೇಂದ್ರ ಸರ್ಕಾರ ಯೋಚಿಸಿದೆ.
ರಾಜಕೀಯ ಪಕ್ಷಗಳು ವಿದೇಶಿ ಹಣ ಪಡೆಯುವುದರ ಸಂಪೂರ್ಣ ನಿಷೇಧ ಮತ್ತು ಶಾಸಕರೂ ವಿದೇಶಿ ಹಣ ಪಡೆಯುವುದರ ಸಂಪೂರ್ಣ ಬಹಿಷ್ಕಾರ ಕೇಂದ್ರವು ತರಲಿರುವ ಮಸೂದೆಯ ಎರಡು ಮುಖ್ಯ ಅಂಶಗಳಾಗಿರುತ್ತವೆ.