ನವದೆಹಲಿ, ಫೆ. 11: ಬ್ಯಾಂಕ್ ರಾಷ್ಟ್ರೀಕರಣ ಶಾಸನವನ್ನು ಸುಪ್ರೀಂ ಕೋರ್ಟ್ ವಜಾ ಮಾಡಿರುವುದರಿಂದ ಉದ್ಭವಿಸಿರುವ ಪರಿಸ್ಥಿತಿ ಕುರಿತು ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಸಂಪುಟದ ಹಿರಿಯ ಸದಸ್ಯರ ಜೊತೆ ಇಂದು ಸಂಜೆ 2 ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು.
ರಾಷ್ಟ್ರೀಕರಿಸಲಾಗಿದ್ದ ಹದಿನಾಲ್ಕು ಪ್ರಮುಖ ಬ್ಯಾಂಕುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನೂ ಪರಿಶೀಲಿಸಲಾಯಿತು.
ವಿದೇಶಿ ಬ್ಯಾಂಕುಗಳನ್ನಾಗಲೀ ಹಳೆಯ ಶಾಸನದಲ್ಲಿ ಸೂಚಿತವಾದ ಹದಿನಾಲ್ಕಲ್ಲದೆ ಬೇರಾವ ಭಾರತೀಯ ಬ್ಯಾಂಕನ್ನಾಗಲೀ ರಾಷ್ಟ್ರೀಕರಿಸುವುದು ಅಸಂಭವವೆಂದು ಹೇಳಲಾಗಿದೆ.
ಕೋರ್ಟ್ ತೀರ್ಪಿನ ವಿರುದ್ಧ ರಾಜಕೀಯ ಆಟ ಬೇಡ: ಮುರಾರಜಿ
ನವದೆಹಲಿ, ಫೆ. 11: ಬ್ಯಾಂಕ್ ರಾಷ್ಟ್ರೀಕರಣ ರದ್ದು ತೀರ್ಪನ್ನು ಕೇಂದ್ರ ಸರ್ಕಾರವು ವೈಯಕ್ತಿಕ ಮುಖಭಂಗ ಅಥವಾ ಪ್ರಗತಿಪರ ವಿಧೇಯಕವನ್ನು ತಡೆಗಟ್ಟುವ ಯತ್ನ ಎಂದು ಪರಿಗಣಿಸ ಬಾರದೆಂದು ಪಾರ್ಲಿಮೆಂಟಿನಲ್ಲಿ ಕಾಂಗ್ರೆಸ್ ವಿರೋಧಿ ಪಕ್ಷದ ಅಧ್ಯಕ್ಷ ಮುರಾರಜಿ ದೇಸಾಯಿ ಅವರು ಇಂದು ಇಲ್ಲಿ ಸಲಹೆ ನೀಡಿದರು.
ಮತ್ತೊಂದು ಬಾರಿ ತರಾತುರಿ ಕ್ರಮದ ವಿರುದ್ಧ ಎಚ್ಚರಿಕೆ ನೀಡಿದ ಮುರಾರಜಿ ಅವರು ‘ಕೋರ್ಟ್ ತೀರ್ಪಿನ ವಿರುದ್ಧ ಯಾವುದೇ ರೀತಿಯ ರಾಜಕೀಯ ನಾಟಕವಾಡುವುದು ಒಳ್ಳೆಯದೇನೂ ಅಲ್ಲ’ ಎಂದು ತಿಳಿಸಿದರು.