ಕಲ್ಕತ್ತ, ಮಾರ್ಚ್ 16– ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ಅಜಯ್ ಮುಖರ್ಜಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.ಜನತೆಗೆ ಭದ್ರತೆಯನ್ನು ಒದಗಿಸಲು ತಮ್ಮ ಕೈಲಿ ಸಾಧ್ಯವಾಗದ ಕಾರಣ ತಾವು ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
‘ಪಕ್ಷಾಂತರ ಕಲಹಗಳು, ಲೂಟಿ, ಕೊಲೆ, ಮಹಿಳೆಯರಿಗೆ ಆಗುತ್ತಿರುವ ಅಪಮಾನವನ್ನು ತಡೆಯಲು ನನ್ನಿಂದ ಸಾಧ್ಯವಾಗಲಿಲ್ಲ. ಇವು ನಿರಂತರವಾಗಿ ನಡೆಯುತ್ತಲೇ ಇವೆ. ನಾನು ಅಧಿಕಾರದಲ್ಲಿ ಮುಂದುವರಿದಿದ್ದರೆ ಜನತೆಗೆ ದ್ರೋಹ ಬಗೆದಂತಾಗುತ್ತಿತ್ತು’ ಎಂದರು.
ಅಲ್ಪ ಉಳಿತಾಯ ಠೇವಣಿಗೆ ಹೆಚ್ಚಿನ ಬಡ್ಡಿ ದರ ನಿಗದಿಗೊಳಿಸಲು ಹೆಗಡೆ ಕರೆ
ಬೆಂಗಳೂರು, ಮಾರ್ಚ್ 16– ವಾಣಿಜ್ಯ ಬ್ಯಾಂಕುಗಳ ಬಡ್ಡಿ ದರಕ್ಕೆ ಸಮನಾಗಿರುವ ಹೊಸ ಬಡ್ಡಿ ದರಗಳನ್ನು ಕಾರ್ಯರೂಪಕ್ಕೆ ತಂದರೆ ಅಲ್ಪ ಉಳಿತಾಯ ಯೋಜನೆಗೆ ವಿನಿಯೋಗಿಸಲು ಹೆಚ್ಚಿನ ಜನರು ಮುಂದೆ ಬರಬಹುದೆಂದು ಅರ್ಥ ಸಚಿವ ರಾಮಕೃಷ್ಣ ಹೆಗಡೆ ಅವರು ಇಂದು ಇಲ್ಲಿ ಆಶಿಸಿದರು.
‘ಯದ್ವಾತದ್ವಾ ಬಡ್ಡಿ ದರ ನೀಡಲು ಮುಂದೆ ಬಂದು ‘ನಾಯಿ ಕೊಡೆ’ಗಳಂತೆ ಎದ್ದಿರುವ ಫೈನಾನ್ಸ್ ಕಾರ್ಪೊರೇಷನ್ಗಳ ಬಗ್ಗೆ ಸರ್ಕಾರ ಏನೂ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದೆ’ ಎಂದರು.
ಜ್ಯೋತಿ ಬಸುಗೆ ಆಹ್ವಾನ ನೀಡಲು ಕೇಂದ್ರದ ವಿರೋಧ
ಹೊಸದೆಹಲಿ, ಮಾರ್ಚ್ 16– ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿಗಳ ಬೆಳವಣಿಗೆಯನ್ನು ಇಂದು ಪರಿಶೀಲಿಸಿದ ಕೇಂದ್ರ ಸಂಪುಟದ ಆಂತರಿಕ ವ್ಯವಹಾರಗಳ ಸಮಿತಿ ಒಟ್ಟಭಿಪ್ರಾಯವು, ಮಾರ್ಕ್ಸ್ವಾದಿ ನಾಯಕ ಜ್ಯೋತಿ ಬಸು ಅವರು ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸ್ಥಿರೀಕರಿಸದೇ ಹೋದರೆ ಸರ್ಕಾರ ರಚಿಸಲು ಅವರನ್ನು ಆಹ್ವಾನಿಸುವುದಕ್ಕೆ ವಿರುದ್ಧವಾಗಿದೆ.