ಬೆಂಗಳೂರು ವಾರ್ಸಿಟಿ: ಕೇಂದ್ರದ ಅಧೀನಕ್ಕೆ ಕೊಡುವ ಸಲಹೆಗೆ ಯು.ಜಿ.ಸಿ. ನಕಾರ
ನವದೆಹಲಿ, ಏ. 30– ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಬೇಕೆಂಬ ಸಲಹೆಯನ್ನು ಯೋಜನಾ ಆಯೋಗ ಮತ್ತು ವಿಶ್ವವಿದ್ಯಾನಿಲಯ ಗ್ರಾಂಟ್ಸ್ ಕಮಿಷನ್ ತಿರಸ್ಕರಿಸಿದೆಯೆಂದು ಶಿಕ್ಷಣ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.
ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವರು, ‘ಮೈಸೂರು ಸರ್ಕಾರದ ಈ ಸಲಹೆಯನ್ನು ಹಣಕಾಸು ಸಚಿವ ಶಾಖೆಗೆ ಪರಿಶೀಲನೆಗಾಗಿ ಕಳುಹಿಸಲಾಯಿತು. ಅದನ್ನು ಹಣಕಾಸು ಶಾಖೆ, ಯೋಜನೆ ಆಯೋಗ ಮತ್ತು ವಿಶ್ವವಿದ್ಯಾನಿಲಯ ಗ್ರಾಂಟ್ಸ್ ಕಮೀಷನ್ಗೆ ಕಳುಹಿಸಿತು. ಆದರೆ ಅವೆರಡೂ ಸಲಹೆಯನ್ನು ಒಪ್ಪಿಲ್ಲ’ ಎಂದರು.
ಕನ್ನಡ ಸಾರಸ್ವತ ಲೋಕದ ಗಣ್ಯರ ಸಾಕ್ಷ್ಯಚಿತ್ರ
ಬೆಂಗಳೂರು, ಏ. 30– ಕನ್ನಡ ಸಾರಸ್ವತ ಲೋಕದ ಐದು ಮಂದಿ ಪ್ರಮುಖರ ಜೀವನದ ಸಾಧನೆ, ಸಫಲತೆಗಳು ಶೀಘ್ರದಲ್ಲಿಯೇ ಬೆಳ್ಳಿತೆರೆಯ ಮೂಲಕ ಜನತೆಗೆ ಪರಿಚಯವಾಗಲಿವೆ.
ಯೋಜನೆಯನ್ನು ಹಾಕಿಕೊಂಡಿರುವ ರಾಜ್ಯದ ವಾರ್ತೆ ಮತ್ತು ಪ್ರವಾಸೋದ್ಯಮ ಇಲಾಖೆಯು ಮೊದಲ ಪ್ರಯತ್ನಕ್ಕೆಂದು ಗಮನದಲ್ಲಿಟ್ಟುಕೊಂಡಿರುವ ಪ್ರಮುಖರು ಇವರು: ಶ್ರೀ ಡಿ.ವಿ. ಗುಂಡಪ್ಪ, ಶ್ರೀ ಕೆ.ವಿ. ಪುಟ್ಟಪ್ಪ, ಶ್ರೀ ದ.ರಾ. ಬೇಂದ್ರೆ, ಶ್ರೀ ಶಿವರಾಮ ಕಾರಂತ ಮತ್ತು ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್.
‘ಇದೊಂದು ಆರಂಭ ಮಾತ್ರ, ಕ್ರಮೇಣ ಸಾಹಿತ್ಯ ಮತ್ತು ಲಲಿತಾಕಲಾ ಕ್ಷೇತ್ರಗಳಲ್ಲಿ ಸನ್ಮಾನ್ಯ ಸ್ಥಾನ ಪಡೆದ ಎಲ್ಲ ಪ್ರಮುಖರ ಸಾಕ್ಷ್ಯಚಿತ್ರಗಳನ್ನು ತಯಾರಿಸಿ, ಪ್ರದರ್ಶಿಸುವ ಯೋಜನೆ ಇಲಾಖೆಗೆ ಇದೆ’ ಎಂದು ಇಲಾಖೆಯ ಡೈರೆಕ್ಟರ್ ಶ್ರೀ ಎಂ.ಡಿ. ಮರಿಪುಟ್ಟಣ್ಣ ಅವರು ಇಂದು ಇಲ್ಲಿ ತಿಳಿಸಿದರು.
ಅಸ್ಸಾಂ ಪುನರ್ವಿಂಗಡಣೆ ಮಸೂದೆ: ರಾಜ್ಯಸಭೆ ಅಸ್ತು
ನವದೆಹಲಿ, ಏ. 30– ಅಸ್ಸಾಂ ರಾಜ್ಯದ ಪುನರ್ವಿಂಗಡಣೆ ಕುರಿತ ಸಂವಿಧಾನ ತಿದ್ದುಪಡಿ ಮಸೂದೆಯು ಇಂದು ರಾಜ್ಯಸಭೆಯಲ್ಲಿ ಅಂಗೀಕೃತವಾಯಿತು.
ಈ ಮಸೂದೆಯು ಈಗಾಗಲೇ ಲೋಕಸಭೆಯಲ್ಲಿ ಅಂಗೀಕೃತವಾಗಿದೆ. ಜನಸಂಘ ಹೊರತು ಎಲ್ಲ ಪಕ್ಷಗಳೂ ಈ ಮಸೂದೆಗೆ ಬೆಂಬಲ ಕೊಟ್ಟವು.
ಅಸ್ಸಾಂ ರಾಜ್ಯದೊಳಗೆ ಪರಮಾಧಿಕಾರವುಳ್ಳ ಗಿರಿ ರಾಜ್ಯ ರಚನೆಗೆ ಈ 22ನೇ ಸಂವಿಧಾನ ತಿದ್ದುಪಡಿ ಮಸೂದೆ ಅವಕಾಶ ನೀಡುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.