ಸತತ ಐದು ವರ್ಷಗಳಿಂದ ಕಲಾ ವಿಭಾಗದಲ್ಲಿ ಅತಿಹೆಚ್ಚು ಅಂಕಗಳಿಸುತ್ತಾ ಇಡೀ ರಾಜ್ಯದ ಗಮನ ಸೆಳೆದಿರುವಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಇಂದು ಕಾಲೇಜಿನಪ್ರಾಂಶುಪಾಲವೀರಭದ್ರಪ್ಪ ಅವರೊಂದಿಗೆ ಮಾತುಕತೆ.
**
* ಪ್ರತಿ ಬಾರಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದಾಗ ನಿಮ್ಮ ಕಾಲೇಜು ಹೆಚ್ಚು ಗಮನ ಸೆಳೆಯುತ್ತದಲ್ಲಾ?
ವಿದ್ಯಾರ್ಥಿಗಳ ಆಸಕ್ತಿಯನ್ನು ಮೊದಲೇ ಗುರುತಿಸಿ ಸರಿಯಾದ ರೀತಿಯಲ್ಲಿ ತರಬೇತಿ ನೀಡುತ್ತೇವೆ. ನಮ್ಮ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಬಡ ಕುಟುಂಬದ ಮಕ್ಕಳು.
* ಈ ಬಾರಿ ನಿಮ್ಮ ಕಾಲೇಜಿನಆರು ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಅತಿಹೆಚ್ಚು ಅಂಕಗಳಿಸಲು ಕಾರಣವೇನು?
ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಸತತ ಪರಿಶ್ರಮ ಅಷ್ಟೇ.
* ವಿದ್ಯಾರ್ಥಿಗಳನ್ನು ಹೇಗೆ ಸಜ್ಜುಗೊಳಿಸುತ್ತೀರಿ? ವಾರ್ಷಿಕ ಬೋಧನೆ ಪ್ರಕ್ರಿಯೆ ಹೇಗಿರುತ್ತದೆ?
ಬೇರೆಲ್ಲ ಕಾಲೇಜುಗಳಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಜೂನ್ನಿಂದ ತರಗತಿಗಳು ಆರಂಭವಾದರೆ ನಮ್ಮಲ್ಲಿ ಮಾರ್ಚ್ನಿಂದಲೇ ಆರಂಭವಾಗುತ್ತವೆ. ಡಿಸೆಂಬರ್ವರೆಗೆ ಹತ್ತು ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸುತ್ತೇವೆ. ಪ್ರತಿಯೊಂದರಲ್ಲೂ ವಿದ್ಯಾರ್ಥಿಗಳು ಮಾಡಿದ ತಪ್ಪುಗಳನ್ನು ವಿವರಿಸಿ ಸರಿಪಡಿಸಿಕೊಳ್ಳಲು ಹೇಳುತ್ತೇವೆ. ಅಂತಿಮ ಪರೀಕ್ಷೆ ಹೊತ್ತಿಗೆ ಸಂಪೂರ್ಣವಾಗಿ ಸಜ್ಜಾಗಿರುತ್ತಾರೆ. ಅಷ್ಟೊಂದು ಪರೀಕ್ಷೆ ನಡೆಸುವುದು ಸುಲಭದ ಮಾತಲ್ಲ.
* ನಿಮ್ಮ ವಿದ್ಯಾರ್ಥಿಗಳು ಕನ್ನಡದೊಂದಿಗೆ ಇಂಗ್ಲಿಷ್ ಬದಲು ಸಂಸ್ಕೃತ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದೂ ಹೆಚ್ಚಿನ ಫಲಿತಾಂಶಕ್ಕೆ ಕಾರಣ. ಇಂಗ್ಲಿಷ್ ಆಯ್ಕೆ ಮಾಡಿಕೊಂಡಿದ್ದರೆ, ಅತಿಹೆಚ್ಚು ಅಂಕ ಪಡೆಯುವುದು ಕಷ್ಟವಾಗುತ್ತಿತ್ತು ಎನ್ನುತ್ತಾರಲ್ಲಾ ನಿಜವೇ?
ಸಂಸ್ಕೃತವನ್ನು ಭಾಷೆಯಾಗಿ ಆಯ್ಕೆ ಮಾಡಿ ಕೊಂಡಿರುವುದೂಅತಿಹೆಚ್ಚು ಅಂಕ ಬರಲು ಕಾರಣ ಎಂಬ ಹೇಳಿಕೆ ಮೂರ್ಖತನದ್ದು. ಸಂಸ್ಕೃತ ಪ್ರಶ್ನೆಪತ್ರಿಕೆಗೆ ವಿದ್ಯಾರ್ಥಿಗಳು ಸಂಸ್ಕೃತದ ಜೊತೆಗೆ ಕನ್ನಡ, ಇಂಗ್ಲಿಷ್ನಲ್ಲೂ ಉತ್ತರಿಸಿದ್ದಾರೆ. ಭಾಷೆ ಯಾವುದಾದರೂ, ಮುಖ್ಯ ವಿಷಯಗಳಿಗೆ ಉತ್ತಮ ರೀತಿಯಲ್ಲಿ ಉತ್ತರಿಸುವುದೂ ಮುಖ್ಯ.
* ಕಾಲೇಜಿನಲ್ಲಿ ಇತಿಹಾಸ, ರಾಜಕೀಯ ಶಾಸ್ತ್ರ, ಐಚ್ಛಿಕ ಕನ್ನಡ ಮತ್ತು ಶಿಕ್ಷಣ, (ಎಚ್ಪಿಕೆಇ) ಹಾಗೂ ಇತಿಹಾಸ, ಸಮಾಜಶಾಸ್ತ್ರ, ಐಚ್ಛಿಕ ಕನ್ನಡ ಮತ್ತು ಶಿಕ್ಷಣ (ಎಚ್ಎಸ್ಕೆಇ) ಸಂಯೋಜನೆ ಮಾತ್ರ ಇದೆ. ಐಚ್ಛಿಕ ಕನ್ನಡ ಸಾಮಾನ್ಯವಾಗಿದೆ. ಇದೂ ಫಲಿತಾಂಶ ಹೆಚ್ಚಲು ಕಾರಣವಾಗಬಹುದಲ್ಲಾ?
ಸಂಯೋಜನೆ ಯಾವುದಾದರೂ ಅದರಲ್ಲಿನ ವಿಷಯಗಳನ್ನು ವಿದ್ಯಾರ್ಥಿಗಳು ಅರಗಿಸಿಕೊಳ್ಳುವುದು ಮುಖ್ಯ. ಅದು ಹೇಗೆ ಎಂಬುದನ್ನು ನಾವು ಹೇಳಿಕೊಡುತ್ತೇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.