ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸಮಾನತೆ: ಅಂತರಾತ್ಮ ತಟ್ಟಲಿ

ಅಸಹಾಯಕ ಹೆಣ್ಣಿನ ಮೇಲಿನ ಕ್ರೌರ್ಯಕ್ಕೆ ಕಾರಣ ಕಂಡುಹಿಡಿದು, ಔಷಧಿ ಹುಡುಕಬೇಕಾಗಿದೆ
Last Updated 23 ಡಿಸೆಂಬರ್ 2019, 20:07 IST
ಅಕ್ಷರ ಗಾತ್ರ

ದೇಶದಲ್ಲಿ ಈಗ ಎತ್ತ ನೋಡಿದರೂ ಪ್ರತಿಭಟನೆಗಳು. ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆ ಪರ– ವಿರೋಧದ ನಿಲುವುಗಳು ನಾಗರಿಕ ಸಮಾಜದ ನೆಮ್ಮದಿ ಕದಡಿವೆ. ಆದರೆ, ಕೆಲವೇ ವಾರಗಳ ಹಿಂದೆ ಜನರ ಮನದಲ್ಲಿ ಹೊತ್ತಿದ್ದ ಆಕ್ರೋಶದ ಕಿಡಿ ಇನ್ನೂ ಆರಿಲ್ಲ, ನಮ್ಮ ಎದೆ ಸುಡುವುದನ್ನೂ ನಿಲ್ಲಿಸಿಲ್ಲ. ಹೀಗಾಗಿ, ಜನರ ಗಮನ ಈಗ ಬೇರೆ ವಿಷಯಗಳತ್ತ ಹೊರಳಿದ್ದರೂ ಈ ಬಗ್ಗೆ ಬರೆಯಲೇಬೇಕು ಅನ್ನಿಸಿತು.

ಏನೆಲ್ಲಾ ವಿದ್ಯಮಾನಗಳು ಘಟಿಸಿಹೋದವು, ಆ ಒಂದು ವಾರದಲ್ಲಿ! ಒಂದರ ಕುರಿತು ವರದಿ ಓದಿಪ್ರತಿಕ್ರಿಯಿಸುವಷ್ಟರಲ್ಲಿ ಇನ್ನೊಂದು, ಅದನ್ನು ನೋವಿನಿಂದ ನೋಡುವಷ್ಟರಲ್ಲಿ ಮತ್ತೊಂದು. ಸರಪಟಾಕಿಗೆ ಹತ್ತಿದ ಬೆಂಕಿಯಂತೆ ಸರಸರೆಂದು ಸುಡುತ್ತಾ ಹೋಯಿತು– ಹೊರಗಣ ಸಮಾಜವನ್ನು, ಇಲ್ಲಿ ನಮ್ಮೆದೆಯನ್ನು. ಯಾವುದು ಸರಿ, ಯಾವುದು ತಪ್ಪು ಎಂಬ ತರ್ಕಕ್ಕೆ ಸಿಗದಂತೆ ಹೊತ್ತಿ ಉರಿಯಿತು ಸಿಟ್ಟು.

ಹೈದರಾಬಾದಿನ ‘ದಿಶಾ’ ಪ್ರಕರಣ ಮತ್ತು ಅದರ ಬೆನ್ನಲ್ಲೇ ಉನ್ನಾವ್ ಪ್ರಕರಣದ ಅನುಸರಣೆ. ದಿಶಾ ಪ್ರಕರಣಕ್ಕೂ ನಿರ್ಭಯಾ ಪ್ರಕರಣಕ್ಕೂ ಸಾಮ್ಯತೆ ಇದೆ. ಓದಿದ, ಉದ್ಯೋಗಾವಕಾಶ ಸಿಕ್ಕ ಯುವತಿ, ಅವಳ ಅಸಹಾಯಕ ಪರಿಸ್ಥಿತಿ. ಆ ಪರಿಸ್ಥಿತಿಯನ್ನು ಅತ್ಯಂತ ಅಮಾನುಷವಾಗಿ, ಕ್ರೂರವಾಗಿ ಬಳಸಿಕೊಂಡ ಯುವಕರು. ಹೊಟ್ಟೆಪಾಡಿಗಾಗಿ ಹೊತ್ತುಗೊತ್ತಿಲ್ಲದೆ ದುಡಿಯುವ ಶಿಕ್ಷಣವಂಚಿತರಾದ ಆ ಯುವಕರಿಗೆ ಇಂತಹ ಕೇಡುಬುದ್ಧಿ ಹೇಗೆ ಬಂತೊ?

ವೈವಿಧ್ಯಕ್ಕೆ ಹೆಸರಾದ ದೇಶ ನಮ್ಮದು. ಆ ಬಗ್ಗೆ ಕೊಚ್ಚಿಕೊಳ್ಳುತ್ತೇವೆ. ಆದರೆ, ನಾವು ನಿಜವಾಗಿ ಸಂಭ್ರಮಿಸುವುದು ಈ ವೈವಿಧ್ಯಗಳ ಮಧ್ಯೆ ಇರುವ ಗೋಡೆಗಳನ್ನು. ನಮ್ಮಲ್ಲಿ ನೂರೊಂದು ಜಾತಿಗಳಿವೆ, ಭಾಷೆಗಳಿವೆ ನಿಜ. ಆದರೆ ನಾವು ಅವುಗಳ ಮಧ್ಯೆ ಇರುವ ತಾರತಮ್ಯವನ್ನು ಪೋಷಿಸುತ್ತೇವೆ. ನಾವೆಷ್ಟೇ ಮುಂದುವರಿದರೂ ನಮ್ಮಲ್ಲಿ ಜಾತಿಭೇದವಾಗಲೀ ವರ್ಗತಾರತಮ್ಯವಾಗಲೀ ಕಡಿಮೆ ಆಗಿಲ್ಲ. ಹೆಣ್ಣನ್ನು ವಸ್ತುವೆಂದು ತಿಳಿಯುವ ಲಿಂಗ ತಾರತಮ್ಯವಂತೂ ಉತ್ತುಂಗದಲ್ಲಿದ್ದು, ಕೆಳಗಿಳಿಯುವ ಲಕ್ಷಣವೇ ಕಾಣುತ್ತಿಲ್ಲ. ಎಲ್ಲ ವರ್ಗಗಳಲ್ಲೂ, ಜಾತಿಗಳಲ್ಲೂ, ಹೆಣ್ಣು–ಗಂಡಿನ ರಕ್ತದ ಕಣಕಣದಲ್ಲೂ ಪ್ರವಹಿಸುತ್ತಿರುವ ಗುಣವಿದು. ಮನೆಯೊಳಗೂ ಹೊರಗೂ; ಹೊರಗಿನವರಷ್ಟೇ ಏನು, ಮನೆಯೊಳಗಿನ ರಕ್ತಸಂಬಂಧಿಗಳಿಂದಲೂ ಭೇದವನ್ನು ಅನುಭವಿಸುತ್ತಿರುವವರು ಹೆಣ್ಣುಮಕ್ಕಳು. ಜಾತಿ, ವರ್ಗಗಳ ತಾರತಮ್ಯವನ್ನು ಎದುರಿಸುವಾಗ ಹೆಣ್ಣುಮಗಳು ಆ ತಾರತಮ್ಯದ ಜೊತೆಗೆ ಲಿಂಗತಾರತಮ್ಯವನ್ನೂ ಅನುಭವಿಸುತ್ತಾಳೆ. ಉಳಿದ ಎರಡು ತಾರತಮ್ಯದ ಗೋಡೆಗಳನ್ನೇನೋ ಕಷ್ಟದಿಂದ ದಾಟಬಹುದು. ಆದರೆ, ಅದಕ್ಕೆ ಅಂಟಿಕೊಂಡಿರುವ ಈ ಮೂರನೇ ತಾರತಮ್ಯವಿದೆಯಲ್ಲ, ಇದನ್ನು ಮೆಟ್ಟಹೊರಟಾಗ ಭುಸುಗುಡುವ ಹಾವು ಕಚ್ಚಿಯೇಬಿಡುತ್ತದೆ.

ಜಾತಿ-ಜಾತಿಗಳ ಮಧ್ಯೆ, ಹೆಣ್ಣು–ಗಂಡುಗಳ ಮಧ್ಯೆ ಇದ್ದ ವೈವಿಧ್ಯಕ್ಕೆ ತಾರತಮ್ಯದ ರೂಪು ಕೊಟ್ಟಿದ್ದು ಮನುಧರ್ಮಶಾಸ್ತ್ರ. ಪಂಗಡಗಳು ಮೇಲ್ಜಾತಿ, ಕೆಳಜಾತಿಗಳಾಗಿ ಉಚ್ಚ-ನೀಚವೆನಿಸಿದವು. ಹಾಗೆಯೇ ಗಂಡು-ಹೆಣ್ಣಿನ ಮಧ್ಯೆ ಸ್ಥಾನಮಾನಗಳು ನಿರ್ಧಾರವಾದವು. ಅದನ್ನು ಓದಿರಲಿ, ಬಿಡಲಿ ತಲೆತಲಾಂತರಗಳಿಂದ ನಂಬಿಕೊಂಡು, ಪಾಲಿಸಿಕೊಂಡು ಬರುತ್ತಿರುವ ಶಾಸ್ತ್ರವಿದು. ಅದನ್ನು ತೊಡೆದುಹಾಕಿ ಸಮಾನತೆಯ ತಳಹದಿಯ ಮೇಲೆ ಅಂಬೇಡ್ಕರ್‌ ಅವರು ಭಾರತದ ಸಂವಿಧಾನವನ್ನು ದೇಶಕ್ಕೆ ಕೊಟ್ಟರು. ಅದನ್ನು ನಿಜವಾಗಿ ಒಳಗೆ
ಬಿಟ್ಟುಕೊಂಡಿದ್ದೇವೆಯೇ? ಬಿಟ್ಟುಕೊಂಡೂ ಇಲ್ಲ, ಓದಿಯೂ ಇಲ್ಲ. ಅದು ಅಲ್ಲಿದೆ ಅಷ್ಟೆ.

ಹೆಣ್ಣಿಗೆ ಸಮಾನ ಶಿಕ್ಷಣವೆನ್ನುತ್ತದೆ ಸಂವಿಧಾನ. ಮೇಲ್ಜಾತಿಯ ಹೆಣ್ಣುಮಕ್ಕಳಿಗೆ ಸಿಕ್ಕಷ್ಟು ಶಿಕ್ಷಣದ ಅವಕಾಶ ಕೆಳಜಾತಿಯ ಹೆಣ್ಣುಮಕ್ಕಳಿಗಿಲ್ಲ. ಹೆಣ್ಣಿಗೆ ರಾಜಕೀಯದಲ್ಲಿ ಸಮಾನ ಸ್ಥಾನಮಾನ ಸಿಗಬೇಕು ಎನ್ನುತ್ತೇವೆ. ಸಮಾನ ಸ್ಥಾನಮಾನ ಇರಲಿ, ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು ಕಲ್ಪಿಸುವ ಉದ್ದೇಶದ ಮಸೂದೆಯು ದಶಕಗಳಿಂದ ನನೆಗುದಿಗೆ ಬಿದ್ದಿದೆ. ಶೇ 50ರಷ್ಟು ಮೀಸಲಾತಿ ಕೊಟ್ಟಿರುವ ಗ್ರಾಮ ಪಂಚಾಯಿತಿಗಳಲ್ಲಿ ಪುರುಷಾಧಿಕಾರ, ಪುರುಷ ಅಹಂಕಾರವು ಮಹಿಳೆಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನೇ ಮೊಟಕುಗೊಳಿಸಿವೆ.

ಮನದೊಳಗೆ ಮನುಧರ್ಮಶಾಸ್ತ್ರ ಗಟ್ಟಿಯಾಗಿ ಕೂತಿರುವಾಗ ಸಂವಿಧಾನದ ಸಮಾನತೆ, ಸಮಾನ ಸ್ಥಾನ ಇವೆಲ್ಲ ತಲೆಯೊಳಗೆ ಹೋಗುವುದೆಂತು? ಲಿಂಗ ಆಯ್ಕೆ, ಬಾಲ್ಯವಿವಾಹ, ವರದಕ್ಷಿಣೆ, ಮನೆಯೊಳಗಿನ ಹಿಂಸೆ, ಕೆಲಸ ಮಾಡುವಲ್ಲಿ ಹಿಂಸೆಗಳ ನಿಷೇಧದ ಎಷ್ಟು ಕಾನೂನುಗಳು? ಅನ್ಯಾಯ, ಅತ್ಯಾಚಾರಗಳನ್ನು ನಿಲ್ಲಿಸಲು ಈ ದೇಶಕ್ಕೆ ಇನ್ನೆಷ್ಟು ಕಾಯ್ದೆಗಳು ಬೇಕು? ಪೋಕ್ಸೊ, ಅದಕ್ಕೆ ತಿದ್ದುಪಡಿ...

ಒಂದೊಂದು ಅತ್ಯಾಚಾರದ ಗುಲ್ಲಾದಾಗಲೂ ಹೆಣ್ಣುಮಕ್ಕಳನ್ನು ರಕ್ಷಿಸಲು ‍ಪೊಲೀಸ್ ಸಹಾಯವಾಣಿಯೇನು, ಹೊಸ ಆ್ಯಪ್ ಏನು, ಮಹಿಳಾ ಬಸ್‍ಗಳೇನು... ಅಜೀರ್ಣವಾಗುವಷ್ಟು ನೀತಿಗಳು. ನಮಗೆಂದು ಇಷ್ಟೆಲ್ಲ ಮಾಡಬೇಕಾಗಿದೆಯಲ್ಲ ಈ ಸರ್ಕಾರ ಎಂದು ಹೆಣ್ಣುಮಕ್ಕಳೆಲ್ಲ ತಲೆತಗ್ಗಿಸಬೇಕು. ಆದರೆ ಎಲ್ಲಾ ಹೆಣ್ಣುಮಕ್ಕಳಿಗೂ, ಅವರಿಗಾಗಿ ನೊಂದುಕೊಳ್ಳುವ ಮನಸ್ಸುಗಳಿಗೂ ಗೊತ್ತಿರಲಿ, ಇನ್ನೂ ಸಾವಿರ ಕಾನೂನುಗಳನ್ನು ರಚಿಸಿದರೂ ಈ ದೇಶದಲ್ಲಿ ಹೆಣ್ಣುಮಕ್ಕಳ ರಕ್ಷಣೆ ಆಗುವುದಿಲ್ಲ. ಆಗುವುದಿದ್ದರೆ ಸರಿಯಾದ ಒಂದೇ ಕಾನೂನು ಸಾಕಿತ್ತು ಎಂದು.

ನಿರ್ಭಯಾ ಪ್ರಕರಣವಿರಲಿ, ದಿಶಾ ಪ್ರಕರಣವಿರಲಿ ಅಲ್ಲಿ ವಿಕೃತ ಕಾಮವೊಂದೇ ಕಾಣುವುದಿಲ್ಲ. ಅದರ ಜೊತೆ ಜೊತೆಗೆ ರೋಷ, ದ್ವೇಷ, ಯಾರ ವಿರುದ್ಧವೋ ತೀರಿಸಿಕೊಳ್ಳಬೇಕಾದ ಸೇಡು ಎಲ್ಲವೂ ಕಾಣುತ್ತವೆ. ಎಲ್ಲವೂ ಒಂದು ಅಸಹಾಯಕ ಹೆಣ್ಣಿನ ಮೇಲೆ. ಯಾಕೆ? ಅಷ್ಟೊಂದು ರೋಷ, ದ್ವೇಷ, ಸೇಡು, ಕ್ರೌರ್ಯ ಎಲ್ಲಿಂದ ಬಂದವು? ಅದು ಹೆಣ್ಣಿನ ಮೇಲೆಯೇ ತಿರುಗಿತೇಕೆ? ಅದಕ್ಕೆ ಕಾರಣವನ್ನು ಹುಡುಕಿ ಔಷಧ ಹುಡುಕಬೇಕಾಗಿದೆ. ಜಾತಿ ತಾರತಮ್ಯದಿಂದ ಹೊರಬರಲಾಗದೇ ಹಳ್ಳಿಬಿಟ್ಟು ಶಹರಕ್ಕೆ ಬಂದ ದಂಪತಿಗಳಿಗೆ ಹುಟ್ಟಿದ ಮಕ್ಕಳಿವು. ಮುಸುರೆ ತೊಳೆಯುತ್ತಲೋ, ಚಿಂದಿ ಆಯುತ್ತಲೋ, ದೇಹ ಮಾರುತ್ತಲೋ ಜೀವನವನ್ನು ಕಂಡುಕೊಂಡ ತಾಯಿಯ ಕಷ್ಟವನ್ನು ನೋಡುತ್ತ, ತಂದೆಯ ಪೌರುಷವನ್ನು ಮೈಗೂಡಿಸಿಕೊಂಡು ಬೆಳೆದ ಮಕ್ಕಳು ಪೆಟ್ರೋಲ್ ಬಂಕಲ್ಲೋ, ಲಾರಿ ಕ್ಲೀನರ್ ಆಗಿಯೋ, ಮೂಟೆ ಹೊರುವವನಾಗಿಯೋ ಕೆಲಸ ಗಿಟ್ಟಿಸಿಕೊಂಡಾಗ ಏನು ಮಾಡಿದರೂ ದಕ್ಕಿಸಿಕೊಳ್ಳಬಹುದೆಂಬ ಕ್ರೂರ ಪ್ರಪಂಚದ ಪರಿಚಯವಾಗುತ್ತದೆ.

ಮೊಬೈಲ್‌ ಈಗ ಸುಲಭವಾಗಿ ಕೈಗೆಟಕುತ್ತಿದೆ. ಅದರಲ್ಲಿ ಹಗಲು- ರಾತ್ರಿ ಎನ್ನದೆ ಕುಳಿತಲ್ಲಿ, ನಿಂತಲ್ಲಿ ರಂಗುರಂಗಿನ ಪ್ರಪಂಚ ತೆರೆದುಕೊಳ್ಳುತ್ತದೆ. ಜೊತೆಗೆ ನಮ್ಮ ಗೌರವಾನ್ವಿತ ನಿರ್ದೇಶಕರು ಹರಿಯಬಿಟ್ಟ ಸಿನಿಮಾ ಮತ್ತು ಜಾಹೀರಾತು. ಇದರಿಂದ ಪ್ರಚೋದನೆಗೊಳ್ಳಬಹುದು, ಕೆರಳಬಹುದು, ನಶೆ ಏರಿಸಿಕೊಳ್ಳಬಹುದು.

ಹೆಣ್ಣೆಂದರೆ ಬಳಸಿ ಬಿಸಾಡುವ ವಸ್ತುವೆನ್ನುವ, ಜಾತಿತಾರತಮ್ಯವನ್ನು ಪೋಷಿಸುತ್ತಿರುವ ರೋಗಗ್ರಸ್ತ ಸಮಾಜಕ್ಕೆ ತಿಳಿಹೇಳುವ, ಅವಳು ಗೌರವಿಸಬೇಕಾದ ಸಹಜೀವಿ ಎಂಬುದನ್ನು ಅರ್ಥ ಮಾಡಿಸುವ ಪ್ರಯತ್ನಗಳು ಅಲ್ಲಲ್ಲಿ ಸಣ್ಣದಾಗಿ ಶುರುವಾಗಿವೆ. ಶಾಲಾ ಪಾಠಗಳಲ್ಲಿ ನುಸುಳಿರುವ ತಾರತಮ್ಯದ ಪದಗಳನ್ನು ಗುರುತಿಸಿ ತೆಗೆಸಿಹಾಕುವ ಪ್ರಯತ್ನ, ಮಕ್ಕಳಿಗೆ ಲಿಂಗ ಸಮಾನತೆಯ ಪಾಠಗಳನ್ನು ಹೇಳುವ ಪ್ರಯೋಗಗಳು ನಡೆಯುತ್ತಿವೆ.

ಮಹಿಳಾ ವಿಶ್ವವಿದ್ಯಾಲಯದ ಕುಲಪತಿಡಾ. ಸಬೀಹಾ, ಲಿಂಗಸೂಕ್ಷ್ಮತೆಯನ್ನು ಬಿತ್ತುವ ಪ್ರಾಜೆಕ್ಟ್‌ಗಳನ್ನು ಪ್ರೋತ್ಸಾಹಿಸುತ್ತಾರೆ. ಅಂಥವು ಎಲ್ಲಾ ಕಾಲೇಜುಗಳಲ್ಲೂ ವಿಶ್ವವಿದ್ಯಾಲಯಗಳಲ್ಲೂ ನಡೆಯಬೇಕು. ‘ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ವು ವಿದ್ಯಾರ್ಥಿಗಳೊಂದಿಗೆ, ಸಮುದಾಯಗಳಲ್ಲಿ ಲಿಂಗಸಮಾನತೆಯ ಬಗ್ಗೆ ವ್ಯಾಪಕ ಚರ್ಚೆ ನಡೆಸುತ್ತದೆ. ಇಂಥ ಪ್ರಯತ್ನಗಳು ಎಲ್ಲೆಡೆ ಹರಡಿಕೊಳ್ಳಬೇಕು. ನಾವೆಲ್ಲರೂ ಅದರಲ್ಲಿ ಪಾಲುದಾರರಾಗಬೇಕು. ಇಲ್ಲವೆಂದರೆ ಈ ಅಪರಾಧದ ಪಾಲುದಾರರಾಗುತ್ತೇವೆ ನಾವು, ಮತ್ತು ನೀವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT