ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾಧಿಕಾರ ಮತ್ತು ಸಾಂಸ್ಕೃತಿಕ ಅನನ್ಯತೆ

ನಮ್ಮ ಸಂಸ್ಕೃತಿಯ ಕನ್ನಡಿಗಳು ಛಿದ್ರಗೊಂಡಿವೆ, ಗತಕಾಲದ ನೆರಳುಗಳಿಂದ ವಿರೂಪಗೊಂಡಿವೆ
Last Updated 8 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಯಾವ ಸಂಸ್ಕೃತಿಯೂ ರಾಷ್ಟ್ರೀಯವಾದಿ ಸಂಗತಿಯಲ್ಲ. ಸಾಂಸ್ಕೃತಿಕ ಅನನ್ಯತೆಯ ನೆಪದಲ್ಲೇ ಸರ್ವಾಧಿಕಾರಿಗಳು ಹುಟ್ಟಿದ್ದು. ಮೇಲು– ಕೀಳು ಎಂದು ಸಂಸ್ಕೃತಿಗಳನ್ನು ವಿಂಗಡಿಸಿದ್ದರಲ್ಲೇ ಜಾತಿ ಮತ್ತು ಜನಾಂಗ ಭೇದಗಳ ಮೋಸವಿದೆ. ರಾಷ್ಟ್ರೀಯವಾದಿ ನಾಜಿ ಸಿದ್ಧಾಂತ ತನ್ನ ಸಾಂಸ್ಕೃತಿಕ ಶ್ರೇಷ್ಠತೆಯನ್ನು ಜನಾಂಗಿಕವಾಗಿ ಹೇರಿ ಹೇಗೆ ಯಹೂದಿ ಸಂಸ್ಕೃತಿಯ ಸಮುದಾಯವನ್ನು ಹೊಸಕಿ ಹಾಕಲು ಯುದ್ಧಗಳ ನೆಪದಲ್ಲಿ ಮುಂದಾಗಿತ್ತು ಎಂಬುದು ಕೇವಲ ಚರಿತ್ರೆಯ ವಿಷಯ ಅಲ್ಲ; ಅದು ವರ್ತಮಾನದ ಸುಪ್ತ ರಾಷ್ಟ್ರೀಯವಾದಿ ಚಿಂತನೆಗಳ ಪ್ರಕ್ರಿಯೆಯೂ ಹೌದು.

ಸಾಂಸ್ಕೃತಿಕ ಅನನ್ಯತೆಯೂ ಧಾರ್ಮಿಕ ಅನನ್ಯತೆಯೂ ಆಯಾ ದೇಶದ ಗುಣಗಳಾಗಿವೆ. ಈ ಗುಣಗಳು ಅವರವರ ಜೀವನ ವಿಧಾನಗಳು ಎಂದು ನವುರಾಗಿ ಹೇಳಿದರೆ ಚೆನ್ನಾಗಿರುತ್ತದೆ. ಒರಟಾಗಿ ಬಿಡಿಸಿ ನೋಡಿದರೆ, ಈ ಅವಳಿ ಸಂಗತಿಗಳು ಮೂಲತಃ ಒಂದು ದೇಶದ ಇಡಿಯಾದ ರಾಜಕಾರಣವಾಗಿವೆ. ರಾಷ್ಟ್ರಗಳು ಹುಟ್ಟಿದ್ದೇ ಸ್ವ ಚಹರೆಯ ಧರ್ಮ, ಸಂಸ್ಕೃತಿಯ ಅಹಂಕಾರ ವ್ಯಸನದಿಂದ. ಅದನ್ನು ಕಾಯ್ದುಕೊಳ್ಳಲು ಒಂದು ಸ್ವತಂತ್ರ ಪ್ರಭುತ್ವ, ಗಡಿ, ಭಾಷೆ, ಏಕರೂಪಿ ಸಮಾಜ, ತನ್ನದೇ ಆರ್ಥಿಕ, ರಾಜಕೀಯ ತತ್ವಗಳು ಹಾಗೂ ಸೈನ್ಯಬಲ ಯಾವತ್ತೂ ಇರಬೇಕು. ಸಾಂಸ್ಕೃತಿಕ ರಾಷ್ಟ್ರೀಯತೆಯ ಮಾತುಗಳನ್ನು ವಾಜಪೇಯಿ ಅವರೇ ಆಡಿದ್ದರು. ಅವನ್ನು ಹಿಂದೆ ನಾಜಿವಾದಿಗಳೂ ಆಡಿದ್ದರು. ಎಲ್ಲ ರಾಜಕೀಯ ಪಕ್ಷಗಳ ತತ್ವ, ಸಿದ್ಧಾಂತ ಪ್ರಣಾಳಿಕೆಗಳಲ್ಲಿ ಸಾಂಸ್ಕೃತಿಕ ರಾಷ್ಟ್ರೀಯತೆಯ ಅಜೆಂಡಾ ಬಲವಾಗಿದೆ.

ಹೀಗಾಗಿ, ಸಂಸ್ಕೃತಿಗಳ ಬಹುರೂಪಿ ಅನನ್ಯತೆಗಳನ್ನು ಸುಗಮ ಸಂಗೀತದಂತೆ ಹಾಡಬಾರದು. ಎಷ್ಟೋ ಸಲ ಆಯಾ ಜಾತಿಗಳ ಸಂಸ್ಕೃತಿಗಳೇ ಅವರವರ ಅನನ್ಯ ಸಂಕೋಲೆಗಳಾಗಿವೆ. ಮಹಿಳಾ ಸಂಸ್ಕೃತಿ ಎನ್ನುತ್ತೇವೆ, ಆದರೆ ಆ ಸಂಸ್ಕೃತಿಯಲ್ಲಿ ಅವಳ ಅಸ್ತಿತ್ವವೇ ಇಲ್ಲ. ಭಾರತದ ಎಲ್ಲ ಗ್ರಾಮ ಸಂಸ್ಕೃತಿಯ ದೈವಗಳು ಮಹಿಳೆಯರೇ; ಆದರೆ ಆ ಯಾವ ದೈವಗಳೂ ದಿಕ್ಕೆಟ್ಟ ಮಹಿಳೆಯರ ಪರವಾಗಿಲ್ಲ. ದಲಿತ ಸಂಸ್ಕೃತಿ ಎಂದು ಉದಾತ್ತವಾಗಿ ವ್ಯಾಖ್ಯಾನಿಸುತ್ತೇವೆ. ವಾಸ್ತವದಲ್ಲಿ ಅದು ಹಾಗೆ ಇರುವುದಿಲ್ಲ. ಬೆತ್ತಲೆ ಸೇವೆಯನ್ನೂ, ಮಲ ಹೊರುವ ಪದ್ಧತಿಯನ್ನೂ ಅವರವರ ಸಾಂಸ್ಕೃತಿಕ ಅನನ್ಯತೆ ಎಂದು ಬಿಗಿದು ಹಾಕಿದರೆ, ಅದು ಮಾನವ ಸಂಸ್ಕೃತಿ ಅಲ್ಲ.

ಮನುಷ್ಯತ್ವವೇ ಸಂಸ್ಕೃತಿ... ದಯೆಯೇ ಧರ್ಮದ ಮೂಲವಯ್ಯಾ... ಇವೆಲ್ಲ ವ್ಯಾಖ್ಯಾನ ಮಾತ್ರ. ವಾಸ್ತವದಲ್ಲಿ, ಚರಿತ್ರೆಯನ್ನು ಅವಲೋಕಿಸಿದರೆ ಸಾಂಸ್ಕೃತಿಕ ಅನನ್ಯತೆಗಳ ಸಲುವಾಗಿಯೇ ಅಪಾರ ಮಾನವ ಕಗ್ಗೊಲೆ ಘಟಿಸಿದೆ. ಆಫ್ರಿಕಾದ ಕಪ್ಪು ಜನಾಂಗ ಬಣ್ಣದಿಂದ ಒಂದೇ ಆದರೂ; ಜೈವಿಕ ದತ್ತಾಂಶಗಳಿಂದ ಭೌಗೋಳಿಕವಾಗಿ ಒಂದೇ ಆಗಿದ್ದರೂ; ಬುಡಕಟ್ಟು ಅನನ್ಯತೆಯ ಹೆಸರಲ್ಲಿ ಮಾನವ ರಕ್ತಪಾತ ಬಹಳಷ್ಟು ಆಗಿದೆ. ಭಾರತದಲ್ಲಿ ಒಂದೊಂದು ಜಾತಿಗೂ ಒಂದೊಂದು ಕಸುಬಿನ, ದಾಸ್ಯದ ಬಲವಂತದ ಸಂಸ್ಕೃತಿಗಳಿವೆ. ಇವು ನಿರ್ಬಂಧಿತ ಸಂಸ್ಕೃತಿಗಳು. ಹಾಗೆಯೇ ಸ್ವಯಂ ನಿಯಂತ್ರಣದ ಅಘೋಷಿತ ಸರ್ವಾಧಿಕಾರದ ಸಂಸ್ಕೃತಿಗಳು. ಅವುಗಳ ದೈವ ಮಹಿಮೆ ಬ್ರಾಹ್ಮಣ್ಯ... ಜಾತಿಗಳ ಸ್ವಯಂ ಸಾಂಸ್ಕೃತಿಕ ನಿರ್ವಹಣೆಯಿಂದಾಗಿ ಏನಾಗಿರಬಹುದು...

ಆಯಾ ಜಾತಿ ಸಂಸ್ಕೃತಿಗಳು ಅವರವರ ಕೇರಿಗೆ ಮರಳಿ ತಮ್ಮ ಸಂಸ್ಕೃತಿಯ ಕನ್ನಡಿಗಳಲ್ಲಿ ತಮ್ಮ ಭ್ರಾಮಕ ಇರುವಿಕೆಯ ಅನನ್ಯತೆ ಕಂಡುಕೊಂಡು, ಅದಕ್ಕೆ ತಕ್ಕಂತೆ ಹಿಂದೂ ಧರ್ಮದ ಸಹಾಯ ಪಡೆದು, ಒಪ್ಪಂದ ಮಾಡಿಕೊಂಡು ತಮ್ಮನ್ನು ಪ್ರತಿಫಲಿಸಿಕೊಂಡಿವೆ. ವಿಷಾದವೆಂದರೆ ಈ ಸಂಸ್ಕೃತಿಯ ಕನ್ನಡಿಗಳೆಲ್ಲ ಛಿದ್ರಗೊಂಡಿವೆ, ರಕ್ತಸಿಕ್ತವಾಗಿ ಕಲೆಗಟ್ಟಿವೆ, ಗತಕಾಲದ ನೆರಳುಗಳಿಂದ ತುಕ್ಕು ಹಿಡಿದಿವೆ. ಈ ದಮನಿತರ ಸಂಸ್ಕೃತಿಗಳಿಗೆ ಯಾವ ದೈವವೂ ರಕ್ತವಾಗಿ ಕಾಣಲಿಲ್ಲ. ನಿಸರ್ಗವನ್ನು ಅರ್ಥಮಾಡಿಕೊಳ್ಳುತ್ತ ಮುಗ್ಧವಾದ ಸಂಸ್ಕೃತಿಗಳನ್ನು ಆಯಾ ಸಮಾಜಗಳು ಬೆಳೆಸಿದವು. ನಾಗರಿಕತೆಯ ಸಮಾಜಗಳು ತಮ್ಮ ಅಸ್ತಿತ್ವಕ್ಕೆ ಬೇಕಾದ ಸ್ವ ಚಹರೆಯ ಜೀವನ ಕ್ರಮಗಳನ್ನು ಸಂಸ್ಕೃತಿಯನ್ನಾಗಿಸಿದವು. ಮೂರನೇ ಹಂತವೇ ಅಪಾಯಕಾರಿ ಸಾಂಸ್ಕೃತಿಕ ಜಗತ್ತು. ಆಧುನಿಕ ರಾಷ್ಟ್ರೀಯವಾದಿ ರಾಷ್ಟ್ರಗಳು ತಲೆ ಎತ್ತಿದ್ದು ಜನಾಂಗಿಕ ಸಂಸ್ಕೃತಿಗಳ ಅಸ್ಪೃಶ್ಯತೆಯ ಯಜಮಾನಿಕೆ ಸ್ಥಾಪಿಸಿರುವುದರಿಂದ. ಎರಡನೇ ಮಹಾಯುದ್ಧದಲ್ಲಿ ಜಾತಿವಾದ ಅದನ್ನು ಹೇಯವಾಗಿ ಪ್ರತಿಪಾದಿಸಿತು. ನಾಜಿಗಳು ಯುರೋಪಿನ ಎಲ್ಲ ಯಹೂದಿಗಳನ್ನು ಬಂಧಿಸಿ ಕಾನ್ಸಂಟ್ರೇಷನ್ ಕ್ಯಾಂಪ್‍ಗಳಲ್ಲಿ ತುರುಕಿ, ಜಗತ್ತು ಎಂದೆಂದೂ ಕಾಣದಂತಹ ತವಕವನ್ನು, ವ್ಯವಸ್ಥಿತ ಕೊಲೆ ಉದ್ಯಮವನ್ನು ಸ್ಥಾಪಿಸಿ ಲಕ್ಷಾಂತರ ಜನರನ್ನು ತರಾವರಿಯಾಗಿ ಕೊಂದದ್ದು ರಾಷ್ಟ್ರೀಯವಾದಿ ಜನಾಂಗಿಕ ದ್ವೇಷದಿಂದ.

ಜನಾಂಗೀಯ ವಾಸನೆಗಳಿಂದಲೇ ಜಗತ್ತಿನ ಎಲ್ಲ ಸಂಸ್ಕೃತಿಗಳನ್ನೂ 19 ಮತ್ತು 20ನೇ ಶತಮಾನಗಳು ತಮಗೆ ಬೇಕಾದಂತೆ ಅಧ್ಯಯನ ಮಾಡಿದವು. ಭಾರತೀಯ ವಿಶ್ವವಿದ್ಯಾಲಯಗಳು ಈಗಲೂ ಈ ಬಗೆಯ ವಾಸನೆಗಳಿಂದ ಮುಕ್ತವಾಗಿಲ್ಲ. ಯುರೋಪಿನ ಸರ್ವಾಧಿಕಾರಿ ಸಂಸ್ಕೃತಿ ಇದಾಗಲೇ ಒಂದು ಶತಮಾನ ದಾಟಿದೆ. ಈಗಲೂ ಜಗತ್ತಿನಲ್ಲಿ ಸರ್ವಾಧಿಕಾರಿ ರಾಜಕಾರಣದ ಜನಾಂಗಿಕ ಸಂಘಟನೆಗಳು ಅಸ್ತಿತ್ವದಲ್ಲಿವೆ. ಜರ್ಮನಿಯಲ್ಲಿ ಹಿಟ್ಲರ್ ಸಂಸ್ಕೃತಿಯ ಗುಪ್ತ ಸಂಘಟನೆಗಳಿವೆ. ಅಂತಹವು ಅಮೆರಿಕದಲ್ಲೂ ಇವೆ, ಭಾರತದಲ್ಲೂ ಇವೆ. ಈ ಸ್ಥಿತಿಯಲ್ಲಿ ಸಂಸ್ಕೃತಿ ಎಂಬುದು ಕೇವಲ ಅಧ್ಯಯನ ಸಂಗತಿ ಅಲ್ಲ; ಅದು ಒಂದು ಬಗೆಯಲ್ಲಿ ಜೈವಿಕ ಮನೋಗತಿ ಹಾಗೆಯೇ ಜೈವಿಕ ರಾಜಕಾರಣ. ಈ ಎರಡೂ ಸಾಂಸ್ಕೃತಿಕ ಅನನ್ಯತೆಗಳು 19ನೇ ಶತಮಾನದಲ್ಲಿ ಹುಟ್ಟಿ, 20ನೇ ಶತಮಾನದಲ್ಲಿ ಬೀಜ ಬಿತ್ತಿ ಸತ್ತು ಹೋಗಿರುವಂಥವು. ಈಗ ಅವು ಅತ್ಯುನ್ನತ ತಂತ್ರಜ್ಞಾನದ ಸಂವಹನ ಯುಗದಲ್ಲಿ ಒಳಗಿಂದಲೇ ಬಲವಾಗುತ್ತಿವೆ. ನಾಜಿ ಕಾಲದ ರೇಡಿಯೊ ಮಾತುಗಳಿಗೂ ಈಗಿನ ಟಿ.ವಿ ಚಾನೆಲ್‌ಗಳ ಮಾತುಗಳಿಗೂ ಅಂತಹ ವ್ಯತ್ಯಾಸವಿಲ್ಲ. 20ನೇ ಶತಮಾನ ಸರ್ವಾಧಿಕಾರಿಗಳ ತೊಟ್ಟಿಲು. ಬಲಪಂಥೀಯ ಸರ್ವಾಧಿಕಾರಿಗಳು ಒಂದೆಡೆ, ಎಡಪಂಥೀಯ ಸರ್ವಾಧಿಕಾರಿಗಳು ಇನ್ನೊಂದೆಡೆ. ಮಾರ್ಕ್ಸ್ ವಾದವೂ ಸರ್ವಾಧಿಕಾರಿ ಏಕಾಯಿತು ಎಂದು ಯೋಚಿಸಬೇಕು. ಲೆನಿನ್, ಮಾವೊ ತ್ಸೆ ತುಂಗ್ ಕೂಡ ತತ್ವದ ಹೆಸರಲ್ಲಿ ಸಾಮೂಹಿಕ ಹತ್ಯೆ ಮಾಡಿದರು. ಹಿಟ್ಲರನೂ ತನ್ನ ತತ್ವದಲ್ಲಿ ಮಾಡಿದ. ಇಬ್ಬರ ತಕ್ಕಡಿಯಲ್ಲೂ ಹಿಂಸೆ ಸಮನಾಗಿದೆ, ಅಮಾಯಕ ಸಂಸ್ಕೃತಿಗಳು ನೆಲಸಮ ಆಗಿವೆ.

ಈ ಸ್ಥಿತಿಯಲ್ಲಿ ದಲಿತ ಸಂಸ್ಕೃತಿಯನ್ನು ಹೇಗೆಂದು ಹೇಳುವುದು? ಪಂಜರ ಸಂಸ್ಕೃತಿಗಳು ಭಾರತೀಯ ಸಂಸ್ಕೃತಿಗಳು. ಈ ಪಂಜರಗಳ ಪ್ರಭುತ್ವವೇ ಹಿಂದುತ್ವ. ನಾಜಿಯ ಕಾನ್ಸಂಟ್ರೇಷನ್ ಕ್ಯಾಂಪ್‍ಗಳ ಜೊತೆ ಈ ಪಂಜರ ಸಂಸ್ಕೃತಿಗಳನ್ನು ಹೋಲಿಸಬಹುದು. ಅನಾದಿಯಿಂದಲೂ ಅಸ್ಪೃಶ್ಯರ ಕೇರಿಗಳು ತಣ್ಣನೆಯ ಬಹಿಷ್ಕೃತ ಕ್ಯಾಂಪ್‍ಗಳಾಗಿದ್ದವು. ನಾಜಿಯ ಜನಾಂಗಿಕ ದ್ವೇಷದ ಹಿಂಸೆಯ ಕಗ್ಗೊಲೆಯನ್ನು ನೋಡಿದರೆ ಹಿಂದೂವಾದಿಗಳಿಗೆ ನಾಜಿವಾದದ ಬಗ್ಗೆ ಅಭಿಮಾನವಿದೆ. ಜೆನೊಸೈಡ್ ಎಂದರೆ ತನಗಾಗದವರ ಸರ್ವನಾಶದ ರಾಜಕೀಯ ರಣತಂತ್ರ. ಹಿಂದೂ ಸಂಸ್ಕೃತಿಯ ಪ್ರತಿಪಾದನೆಯಲ್ಲಿ ಆ ಗುಣಗಳಿವೆ. ಅದೊಂದು ಪ್ರಭುತ್ವದ ದುರ್ವರ್ತನೆ.

ಚಿಂತಕರು ನಾನಾ ನಮೂನೆಯ ಸಂಸ್ಕೃತಿಗಳ ಲೆಕ್ಕ ಹೇಳುತ್ತಲೇ ಇದ್ದಾರೆ. ಸಂಸ್ಕೃತಿಗಳು ಅಂತಹ ಪುನರುಜ್ಜೀವನ ಯುಗದ ಅರಿವನ್ನೂ ಧರ್ಮ ಮತ್ತು ಸಂಸ್ಕೃತಿಗಳ ದವಡೆಗಳಲ್ಲಿ ಈಗ ಇಟ್ಟುಕೊಂಡು ಜಿಗಿಯುತ್ತಿವೆ. ಹಾಗೆ ನೋಡಿದರೆ, ಸಂಸ್ಕೃತಿಗಳು ಜೈವಿಕ ಮನೋ ನಡವಳಿಕೆಗಳು. ಅವರವರ ನಡವಳಿಕೆ ಅವರವರ ಅಸ್ತಿತ್ವ. ಅದೇ ನೈಸರ್ಗಿಕ ಒಪ್ಪಂದ. ಜೈವಿಕತೆ ಜನಾಂಗಿಕ ಸಂಗತಿ ಅಲ್ಲ; ಅದೊಂದು ಸರಳ ಕ್ರಮದಲ್ಲಿ ವಂಶವಾಹಿ ಕೌಟುಂಬಿಕ ಅನನ್ಯತೆ. ಇದೇ ಜಗತ್ತಿನ ಸಂಸ್ಕೃತಿಗಳಲ್ಲಿ ಅಮಾನವೀಯವಾಗಿ ಅನಾದಿಯಿಂದ ಯುದ್ಧ ಮಾಡುತ್ತಲೇ ಬಂದಿರುವುದು. ಈ ಹಂತವನ್ನು 21ನೇ ಶತಮಾನ ಈಗಲೇ ದಾಟಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT