ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ರಾಜೀನಾಮೆ: ‘ಕೇಳುವ ಹಕ್ಕು’ ಮತದಾರನಿಗೆ ಇದೆ

ಕಾಯ್ದೆ, ತೀರ್ಪು, ವಿವೇಚನೆ ಮತ್ತು ಜನಹಿತದ ಸುತ್ತ...
Last Updated 15 ಜುಲೈ 2019, 4:03 IST
ಅಕ್ಷರ ಗಾತ್ರ

ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವುದು ಪಕ್ಷಾಂತರವನ್ನು ಪ್ರೋತ್ಸಾಹಿಸಲು ಇಲ್ಲವೇ ಪಕ್ಷಾಂತರಿ
ಗಳಿಗೆ ನೆರವಾಗಲು ಅಲ್ಲ. ಅದನ್ನು ಜಾರಿಗೆ ತಂದಿರುವುದು ಪಕ್ಷಾಂತರವನ್ನು ತಡೆಯಲು ಮತ್ತು ಪಕ್ಷಾಂತರಿಗಳನ್ನು ಶಿಕ್ಷಿಸಲು ಎನ್ನುವುದನ್ನು ಬಹಳ ಮಂದಿ ಮರೆತೇ ಬಿಟ್ಟಿದ್ದಾರೆ. ರಾಜೀನಾಮೆ ನೀಡುವುದು ಶಾಸಕರ ಮೂಲಭೂತ ಹಕ್ಕು ಎಂದು ವಾದಿಸುವವರು, ಈ ಕಾಯ್ದೆಯ ಮೂಲ ಆಶಯವನ್ನು ಅರ್ಥಮಾಡಿಕೊಂಡಂತಿಲ್ಲ.

1985ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು ಪಕ್ಷಾಂತರವನ್ನು ನಿಷೇಧಿಸಲು ಸಂವಿಧಾನಕ್ಕೆ 52ನೇ ತಿದ್ದುಪಡಿ ಮಾಡಲು ಹೊರಟಿದ್ದಾಗ, ಶಾಸಕರ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯ ಮುಂದಿಟ್ಟು ವಿರೋಧಿಸಿದ್ದವರು ಹಿರಿಯ ಸಮಾಜವಾದಿ ಮಧು ಲಿಮಯೆ ಮತ್ತು ಸಂವಿಧಾನ ತಜ್ಞ ನಾನಿ ಪಾಲ್ಖಿವಾಲಾ.

‘ತಮ್ಮ ನಂಬಿಕೆಗೆ ಅನುಗುಣವಾಗಿ ಸದನದಲ್ಲಿ ಮತ ಚಲಾಯಿಸಲು ಸದಸ್ಯರಿಗೆ ಅವಕಾಶ ನಿರಾಕರಿಸಿದರೆ, ಅವರನ್ನು ಆಯ್ಕೆ ಮಾಡಿದ ಮತದಾರರ ತೀರ್ಪನ್ನು ಪ್ರಶ್ನಿಸಿದಂತಾಗುತ್ತದೆ. ಸೈದ್ಧಾಂತಿಕ ನೆಲೆಯಲ್ಲಿ ಪಕ್ಷ ವಿಭಜನೆಗೆ ಅವಕಾಶ ನೀಡಬೇಕು, ಇಲ್ಲವಾದರೆ ಪಕ್ಷದಲ್ಲಿ ಕೆಲವು ನಾಯಕರ ಒಡೆತನಕ್ಕೆ ಉಳಿದವರು ಬಲಿಯಾಗುತ್ತಾರೆ’ ಎಂದು ಅವರಿಬ್ಬರೂ ಗುಡುಗಿದ್ದರು. ‘ಪಕ್ಷಾಂತರ ನಿಷೇಧ ಎನ್ನುವುದು ಪಕ್ಷದೊಳಗಿನ ಪ್ರಜಾಪ್ರಭುತ್ವವನ್ನು ಮಾತ್ರವಲ್ಲ, ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನಾಶ ಮಾಡುತ್ತದೆ’ ಎಂದು ಆ ಮಹಾನುಭಾವರು ನಂಬಿದ್ದರು. ಈ ಕಾರಣಕ್ಕಾಗಿಯೇ, ರಾಜೀವ್ ಗಾಂಧಿಯವರು ಮೂಲ ಮಸೂದೆಯಲ್ಲಿ ಬದಲಾವಣೆ ಮಾಡಿ, ಮೂರನೇ ಎರಡರಷ್ಟು ಸದಸ್ಯರ ಪಕ್ಷಾಂತರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿರುವ ಅತೃಪ್ತ ಶಾಸಕರು ಪಕ್ಷಾಂತರ ತಮ್ಮ ಮೂಲಭೂತ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೆಲ್ಲ ಮಾತನಾಡುತ್ತಿರುವಾಗ, ಲಿಮಯೆ ಮತ್ತು ಪಾಲ್ಖಿವಾಲಾ ಬದುಕಿದ್ದರೆ ತಮಗೆ ತಾವೇ ನಾಚಿಕೆಪಟ್ಟು ತಮ್ಮ ಆಕ್ಷೇಪವನ್ನು ಹಿಂದಕ್ಕೆ ಪಡೆಯುತ್ತಿದ್ದರೋ ಏನೋ?

ಪಕ್ಷಾಂತರ ನಿಷೇಧ ಕಾಯ್ದೆಯ ಶಕ್ತಿ ಮತ್ತು ದೌರ್ಬಲ್ಯ ಸಭಾಧ್ಯಕ್ಷರ ಸ್ಥಾನ. ಈ ಕಾಯ್ದೆ ಜಾರಿಗೆ ಬಂದ ನಂತರದ ಅವಧಿಯಲ್ಲಿ ನಡೆದ ಪಕ್ಷಾಂತರದ ವಿವಾದಗಳಲ್ಲಿ ಕೇಂದ್ರ ಸ್ಥಾನದಲ್ಲಿ ಕಾಣಿಸಿಕೊಂಡದ್ದು ಇದೇ ಸಭಾಧ್ಯಕ್ಷರು. ಕರ್ನಾಟಕದ ಈಗಿನ ವಿವಾದದ ಕೇಂದ್ರ ವ್ಯಕ್ತಿ ಕೆ.ಆರ್.ರಮೇಶ್ ಕುಮಾರ್. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರದ ವಿಧಿವಿಧಾನಗಳನ್ನು ಅವರು ಮಾಧ್ಯಮದ ಮುಂದೆ ಬಿಡಿಸಿ ಹೇಳಿದ್ದಾರೆ. ರಾಜೀನಾಮೆ ಅಂಗೀಕಾರಕ್ಕೆ ಮೊದಲು ಸಾರ್ವಜನಿಕರಿಂದಲೂ ದೂರು ಸ್ವೀಕರಿಸುವ ಮಾತನ್ನು ತೇಲಿಬಿಟ್ಟಿದ್ದಾರೆ. ಪರಸ್ಪರ ಅಪನಂಬಿಕೆಯ ರಾಜಕೀಯ ವಾತಾವರಣದಲ್ಲಿ ಈ ಮಾತು ಹಲವಾರು ಬಗೆಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

‘ಶಾಸಕರ ರಾಜೀನಾಮೆ ಇತ್ಯರ್ಥದ ಪ್ರಕ್ರಿಯೆಯನ್ನು ವಿಳಂಬಿಸುವ ಮೂಲಕ ಮೈತ್ರಿ ಸರ್ಕಾರಕ್ಕೆ ನೆರವಾಗುವ ದುರುದ್ದೇಶದಿಂದಲೇ ಸಭಾಧ್ಯಕ್ಷರು ಅನಗತ್ಯ ಕ್ಯಾತೆ ತೆಗೆಯುತ್ತಿದ್ದಾರೆ’ ಎಂದು ಬಿಜೆಪಿ ನಾಯಕರು ಆರೋಪಿಸತೊಡಗಿದ್ದಾರೆ. ‘ಇಷ್ಟೊಂದು ವಿಳಂಬ ಮಾಡುವುದೇನಿದೆ? ಅತೃಪ್ತ ಶಾಸಕರು ಕ್ರಮಬದ್ಧವಾಗಿ ರಾಜೀನಾಮೆ ನೀಡಿದ್ದಾರೆ. ಮಾಧ್ಯಮಗಳ ಮುಂದೆ ಖುದ್ದಾಗಿ ಇದನ್ನು ಹೇಳಿದ್ದಾರೆ. ಇದರ ನಂತರವೂ ಪರಾಮರ್ಶೆ ಯಾಕೆ ಬೇಕು? ಕಾಯ್ದೆಯಲ್ಲಿ ಜನಾಭಿಪ್ರಾಯ ಪಡೆಯಲು ಅವಕಾಶ ಎಲ್ಲಿದೆ’ ಎಂದೆಲ್ಲ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಸಭಾಧ್ಯಕ್ಷರಲ್ಲಿ ಬಿಜೆಪಿ ಆರೋಪಿಸುವಂತಹ ದುರುದ್ದೇಶ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ತಮಗೆ ಇಲ್ಲದ ಅಧಿಕಾರವನ್ನು ಸೃಷ್ಟಿಸಿಕೊಂಡು ಜನಾಭಿಪ್ರಾಯ ಪಡೆಯುವ ಮಾತನ್ನು ಖಂಡಿತ ಹೇಳಿಲ್ಲ.

ಸಂವಿಧಾನದ ಹತ್ತನೇ ಶೆಡ್ಯೂಲಿನ ಪ್ರಕಾರ, ರಾಜೀನಾಮೆ ನೀಡಿದ ಇಲ್ಲವೇ ವಿಪ್ ಉಲ್ಲಂಘಿಸಿದ ಶಾಸಕರ ವಿರುದ್ಧ ಸಭಾಧ್ಯಕ್ಷರಿಗೆ ದೂರು ನೀಡಬಹುದು ಮತ್ತು ಅಂತಹ ದೂರುಗಳನ್ನು ಹೇಗೆ ಇತ್ಯರ್ಥಗೊಳಿಸಬೇಕು ಎಂದು ಪಕ್ಷಾಂತರ ನಿಷೇಧ ಕಾಯ್ದೆಯ ನಿಯಮ 6, ಉಪನಿಯಮ 1 ಮತ್ತು 2ರಲ್ಲಿ ಹೇಳಲಾಗಿದೆ. ದೂರುಗಳನ್ನು ಸ್ವೀಕರಿಸಿದ ಮೇಲೆ ಸಭಾಧ್ಯಕ್ಷರು ತಮ್ಮ ವಿವೇಚನೆ ಬಳಸಿಕೊಂಡು ಪರಿಶೀಲನೆ ಮಾಡಬೇಕಾಗುತ್ತದೆ. ದೂರುಗಳು ಕ್ರಮಬದ್ಧವಾಗಿದ್ದರೆ ಸಂಬಂಧಿತ ಶಾಸಕರಿಗೆ ಅವುಗಳನ್ನು ಕಳಿಸಿ ಅವರಿಂದ ಪ್ರತಿಕ್ರಿಯೆ ಪಡೆಯಬೇಕಾಗುತ್ತದೆ. ಅವರಿಂದ ಉತ್ತರ ಬಂದ ಮೇಲೆ ಸಭಾಧ್ಯಕ್ಷರು ತಾವೇ ತೀರ್ಮಾನ ಕೈಗೊಳ್ಳಬಹುದು ಇಲ್ಲವೇ ವಿಧಾನಮಂಡಲದ ಹಕ್ಕು ಬಾಧ್ಯತಾ ಸಮಿತಿಗೆ ಪ್ರಾಥಮಿಕ ತನಿಖೆಗಾಗಿ ಕಳುಹಿಸಿಕೊಡಬಹುದು. ಸಮಿತಿಯಿಂದ ವರದಿ ಪಡೆದ ಮೇಲೆ ಸಭಾಧ್ಯಕ್ಷರು ಅಂತಿಮ ತೀರ್ಮಾನ ನೀಡಬಹುದು. ಇಲ್ಲಿ ಸಾರ್ವಜನಿಕರ ದೂರು ಸ್ವೀಕಾರಕ್ಕೆ ಅವಕಾಶ ಎಲ್ಲಿದೆ ಎಂದು ಯಾರಾದರೂ ಪ್ರಶ್ನಿಸಬಹುದು. ದೂರನ್ನು ಸದನದ ಸದಸ್ಯರೇ ನೀಡಬೇಕು ಎಂದು ಎಲ್ಲಿ ಹೇಳಿದೆ ಎನ್ನುವ ಪ್ರಶ್ನೆಯೇ ಇದಕ್ಕೆ ಉತ್ತರ. ಕಾಯ್ದೆಯ ನಿಯಮ 6ರ ಉಪನಿಯಮ 2ರಲ್ಲಿ ಎಲ್ಲಿಯೂ ಅನರ್ಹತೆಯ ಕೋರಿಕೆಯನ್ನು ಕೇವಲ ಸದನದ ಸದಸ್ಯರೇ ಸಲ್ಲಿಸಬೇಕೆಂದು ಹೇಳಿಲ್ಲ.

ಶಾಸಕರ ರಾಜೀನಾಮೆಯ ಅಂಗೀಕಾರ ಮತ್ತು ಅವರ ಅನರ್ಹತೆಯ ಪ್ರಶ್ನೆಯನ್ನು ಕೇವಲ ಪಕ್ಷಾಂತರ ನಿಷೇಧ ಕಾಯ್ದೆಯ ಹತ್ತು ಸಾಲುಗಳನ್ನು ಮುಂದಿಟ್ಟುಕೊಂಡು ಇತ್ಯರ್ಥ ಮಾಡಲಾಗುವುದಿಲ್ಲ. ಇದಕ್ಕಾಗಿ, ಇದೇ ಕಾಯ್ದೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಸಾಲುಸಾಲು ತೀರ್ಪುಗಳನ್ನು ಕೂಡಾ ಜತೆಯಲ್ಲಿ ಇಟ್ಟುಕೊಂಡು ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ರಮೇಶ್ ಕುಮಾರ್ ಅವರು ಇಂತಹದ್ದೊಂದು ತಯಾರಿ ಮಾಡಿಕೊಂಡೇ ಅಖಾಡಕ್ಕೆ ಇಳಿದ ಹಾಗಿದೆ, ಅವರನ್ನು ಚಿತ್ ಮಾಡುವುದು ಕಷ್ಟ.

ರಮೇಶ್ ಕುಮಾರ್ ಅವರ ಜಾಣ ಮೆದುಳು ತನ್ನ ನಿರ್ಧಾರಕ್ಕೆ ಅವಲಂಬಿಸಿರುವುದು ‘ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಶಾಸಕಾಂಗ ಪಕ್ಷದ ನಾಯಕರು ಇಲ್ಲವೇ ವಿಧಾನಸಭಾ ಸದಸ್ಯರು ಮಾತ್ರವಲ್ಲ, ಸದನದ ಸದಸ್ಯರಲ್ಲದಿರುವವರು ಕೂಡಾ ದೂರು ಸಲ್ಲಿಸಬಹುದು...’ ಎಂದು ಒಡಿಶಾ ವಿಧಾನಸಭೆ ಮತ್ತು ಉತ್ಕಲ ಕೇಸರಿ ಪಾರಿದಾ ಪ್ರಕರಣದಲ್ಲಿ 2013ರ ಜನವರಿ ಒಂದರಂದು ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪನ್ನು.

ಈ ನಿರ್ದಿಷ್ಟ ಪ್ರಕರಣದಲ್ಲಿ ಒಡಿಶಾ ವಿಧಾನಸಭೆಯ ಎಲ್ಲ ನಾಲ್ವರು ಎನ್‌ಸಿಪಿ ಶಾಸಕರು ಬಿಜೆಡಿಗೆ ಪಕ್ಷಾಂತರ ಮಾಡಿದ್ದರು. ಅವರ ಅನರ್ಹತೆ ಕೋರಿ ಎನ್‌ಸಿಪಿಯ ರಾಜ್ಯ ಘಟಕದ ಅಧ್ಯಕ್ಷರು ದೂರು ನೀಡಿದಾಗ, ಸದನದ ಸದಸ್ಯರಲ್ಲದ ಅವರಿಗೆ ‘ಕೇಳುವ ಹಕ್ಕು’ (Locus Standi) ಇಲ್ಲವೆಂದು ಶಾಸಕರು ಆಕ್ಷೇಪ ಎತ್ತಿದ್ದರು. ಆದರೆ ದೂರುದಾರರ ಕೇಳುವ ಹಕ್ಕನ್ನು ಒಡಿಶಾ ಹೈಕೋರ್ಟ್ ಎತ್ತಿ ಹಿಡಿದಿತ್ತು. ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕೂಡಾ ಹೈಕೋರ್ಟ್ ತೀರ್ಪನ್ನು ಅನುಮೋದಿಸಿತ್ತು. ಈ ತೀರ್ಪಿನ ದಂಡವನ್ನು ಸಭಾಧ್ಯಕ್ಷರು ಎತ್ತಿಕೊಂಡ ಹಾಗಿದೆ. ಅದನ್ನು ಅವರು ಪ್ರಯೋಗಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ರಾಜೀನಾಮೆಗಳೆಲ್ಲವೂ ಕ್ರಮಬದ್ಧವಾಗಿವೆ ಎಂದು ತೀರ್ಮಾನಿಸಿ ಅವರು ಅವುಗಳನ್ನು ಅಂಗೀಕರಿಸಬಹುದು ಇಲ್ಲವೇ ತಮಗೆ ದತ್ತವಾಗಿರುವ ಅಧಿಕಾರ ಬಳಸಿ ಈ ಸುದೀರ್ಘವಾದ ಪ್ರಕ್ರಿಯೆಯನ್ನು ಶುರು ಮಾಡಬಹುದು. ಎರಡನೇ ನಿರ್ಧಾರವನ್ನು ಸಭಾಧ್ಯಕ್ಷರು ಕೈಗೊಂಡರೆ, ಅತೃಪ್ತ ಶಾಸಕರು ಸಂಕಷ್ಟಗಳ ಸರಮಾಲೆಯಲ್ಲಿ ಸಿಕ್ಕಿಹಾಕಿಕೊಳ್ಳಲಿದ್ದಾರೆ. ಇವರೆಲ್ಲ ವ್ಯವಹಾರ ಕುದುರಿಸುವ ಆಡಿಯೊ- ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಪುರಾವೆಗಳಿಗೇನು ಕೊರತೆ ಇದೆ?

ಸಭಾಧ್ಯಕ್ಷರದ್ದು ಸಾಂವಿಧಾನಿಕ ಹುದ್ದೆ. ಅವರು ಕೊನೆಗೂ ಬದ್ಧತೆ ತೋರಬೇಕಾಗಿರುವುದು ಜನರಿಗೆ. ಅವರು ತೀರ್ಮಾನ ಕೈಗೊಳ್ಳಬೇಕಾಗಿರುವುದು ಬರೀ ಕಾಯ್ದೆ, ನ್ಯಾಯಾಲಯದ ತೀರ್ಪುಗಳನ್ನು ಆಧರಿಸಿ ಅಲ್ಲ. ಶಾಸಕರು ರಾಜೀನಾಮೆ ನಿರ್ಧಾರವನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಕೈಗೊಂಡಿದ್ದಾರೆಯೇ ಇಲ್ಲವೇ ಎನ್ನುವುದನ್ನು ಆಧರಿಸಿ. ಮುಂಬೈ ಹೋಟೆಲ್‌ಗಳಲ್ಲಿ ಮೋಜು ಮಾಡುತ್ತಿರುವ ಅತೃಪ್ತ ಶಾಸಕರು, ಸಾರ್ವಜನಿಕ ಹಿತಾಸಕ್ತಿಯಿಂದ ರಾಜೀನಾಮೆ ನೀಡಿದ್ದಾರೆ ಎಂದು ಯಾವ ಮೂರ್ಖ ಹೇಳಲು ಸಾಧ್ಯ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT