ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ಶಿಕ್ಷಣದ ಉನ್ನತೀಕರಣ ಅಗತ್ಯ

ಕಲಾ ಅಧ್ಯಯನವು ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವ ಶಿಕ್ಷಣ.ಯಾವ ಕಾರಣಕ್ಕೂ ಕಲಾ ಶಿಕ್ಷಣವನ್ನು ಕಡೆಗಣಿಸಬಾರದು
Last Updated 11 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಪದವಿ ಶಿಕ್ಷಣದಲ್ಲಿ ಇತ್ತಿಚಿನ ವರ್ಷಗಳಲ್ಲಿ ಕಲಾ ವಿಷಯಕ್ಕೆ ವಿದ್ಯಾರ್ಥಿಗಳ ಪ್ರವೇಶ, ಅಧ್ಯಯನ, ಮತ್ತುಉತ್ತೀರ್ಣತೆ ಗಣನೀಯವಾಗಿ ಕುಸಿಯುತ್ತಿದೆ ಎಂಬುದು ಕಳವಳಕಾರಿ ಸಂಗತಿ. 2000ನೇ ಸಾಲಿನಲ್ಲಿ ಒಟ್ಟು ವಿದ್ಯಾರ್ಥಿಗಳಲ್ಲಿ ಸುಮಾರು ಶೇ 50ರಷ್ಟು ಮಂದಿ ಕಲಾ ವಿಷಯಗಳಿಗೆ ಪ್ರವೇಶ ಪಡೆಯುತ್ತಿದ್ದರೆ, ಈಗ ಅದರ ಪ್ರಮಾಣ ಶೇ 30ಕ್ಕೆ ಕುಸಿದಿದೆ.

ಮಹಾವಿದ್ಯಾಯಗಳಲ್ಲಿ ವಿಜ್ಞಾನ, ವಾಣಿಜ್ಯ ವಿಷಯಗಳು ಇರುವಂತೆ ಕಲಾ ವಿಷಯಗಳಿವೆ. ಕಲಾ ನಿಕಾಯದಲ್ಲಿ ಮತ್ತೆ ಭಾಷೆ ಮತ್ತುಸಮಾಜ ವಿಜ್ಞಾನದ ವಿಷಯಗಳಿವೆ. ಭಾಷೆಯಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ, ಸಂಸ್ಕೃತ ಮುಂತಾದ ಭಾಷೆಗಳಲ್ಲದೆ ವಿದೇಶಿ ಭಾಷೆಗಳೂ ಇವೆ. ಸಮಾಜ ವಿಜ್ಞಾನಗಳಲ್ಲಿ ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮಾನವಶಾಸ್ತ್ರ, ಮನೋವಿಜ್ಞಾನ, ಅರ್ಥಶಾಸ್ತ್ರ, ಮುಂತಾದ ವಿಭಾಗಗಳಿವೆ. ಪದವಿ ಶಿಕ್ಷಣದಲ್ಲಿ ಹಲವಾರು ವಿಷಯಗಳ ಗುಂಪುಗಳಿದ್ದು, ಅಲ್ಲಿ ಸರಳವಾದ ಆಯ್ಕೆ ಇರುತ್ತದೆ. ಒಬ್ಬ ವಿದ್ಯಾರ್ಥಿಯು ತನಗೆ ಬೇಕಾದ ಒಂದು ಗುಂಪನ್ನು ಮತ್ತು ಎರಡು ಭಾಷೆಗಳನ್ನು ಒಳಗೊಂಡ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಕಲಾ ವಿಭಾಗದಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಅವಕಾಶವಿದೆ. ಎನ್‍ಸಿಸಿ, ಎನ್‍ಎಸ್‍ಎಸ್, ರೆಡ್ ಕ್ರಾಸ್... ಹೀಗೆ ಎಲ್ಲವೂ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿರುತ್ತವೆ.

ಪದವಿ ಮಹಾವಿದ್ಯಾಲಯಗಳಲ್ಲಿರುವ ಕಲಾ ವಿಷಯಗಳ ಶಿಕ್ಷಣದ ಗುಣಮಟ್ಟ ಉತ್ತಮವಾಗಿಲ್ಲಎಂಬ ಅಭಿಪ್ರಾಯ ಇದೆ. ಇದರಲ್ಲಿ ಸತ್ಯಾಂಶ ಇಲ್ಲದಿಲ್ಲ. ಕಟ್ಟಡಗಳ ಕೊರತೆ, ಮೂಲ ಸೌಕರ್ಯಗಳು ಇಲ್ಲದಿರುವುದು, ಬೋಧಕರ ಕೊರತೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಶಿಸ್ತು ಮತ್ತು ಸಿದ್ಧತೆಯ ಅಭಾವ, ಆಧುನಿಕ ತಂತ್ರಜ್ಞಾನದ ಅಳವಡಿಕೆ ಆಗದಿರುವುದು... ಇಂಥ ಹಲವು ಸಮಸ್ಯೆಗಳು ಕಲಾ ನಿಕಾಯದ ಶಿಕ್ಷಣದ ಕೊರತೆಯನ್ನು ಎತ್ತಿ ತೋರಿಸುತ್ತವೆ. ಇದರ ಪರಿಣಾಮ ‘ಕಲಾ ಶಿಕ್ಷಣದಿಂದ ಒಳ್ಳೆಯ ಉದ್ಯೋಗ ಲಭಿಸುವುದಿಲ್ಲ’ ಎಂಬ ಭಯ ವಿದ್ಯಾರ್ಥಿಗಳನ್ನು ಕಾಡುತ್ತದೆ. ಈಚಿನ ಕೆಲವು ವರ್ಷಗಳಲ್ಲಿ ಕಲಾ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಕನ್ನಡ ಮಾಧ್ಯಮದಲ್ಲಿ ಕಲಿತವರು ಮತ್ತು ಗ್ರಾಮೀಣ ಭಾಗದವರು.

ಇಂಥ ವಿದ್ಯಾರ್ಥಿಗಳು ಏನಾದರೂ ಕೇಳಿದರೆ ‘ನಾವು ಹಳ್ಳಿಗರು. ನಮಗೆ this and that ಎಂದರೆ ಗೊತ್ತಾಗದು’ ಎನ್ನುತ್ತಾರೆ. ಕಲಾ ಶಿಕ್ಷಣದ ಉನ್ನತೀಕರಣಕ್ಕೆ ಇದೂ ಒಂದು ಅಡ್ಡಿಯಾಗಿದೆ. ಇಂಥ ವಿದ್ಯಾರ್ಥಿಗಳಿಗೆ ಮೂಲದಿಂದಲೇ ಕಲಿಸುವುದೆಂದರೆ ಕಷ್ಟದ ಕೆಲಸವೇ. ಹಲವು ಸಮಸ್ಯೆಗಳೊಂದಿಗೆ ಬರುವ ಇಂಥ ವಿದ್ಯಾರ್ಥಿಗಳು ಪಠ್ಯಗಳನ್ನು ಬೇಗನೆ ಕರಗತ ಮಾಡಿಕೊಳ್ಳುವುದಿಲ್ಲ. ಇನ್ನು ಪಠ್ಯೇತರ ಓದು, ಬರಹ, ಪ್ರಯೋಗಶೀಲತೆ, ನಾಯಕತ್ವ ಗುಣ ಬೆಳೆಸುವುದು, ಕೌಶಲಗಳನ್ನು ತಿಳಿಹೇಳುವುದು ಸುಲಭವಲ್ಲ. ಅವರ ಅಧ್ಯಯನವು ಪರೀಕ್ಷೆ ಬರೆಯುವುದು ಮತ್ತು ಪದವೀಧರರಾಗುವುದಕ್ಕೆ ಸೀಮಿತವಾಗಿರುತ್ತದೆ. ಒಟ್ಟಾರೆಯಾಗಿ ಕಲಾ ಶಿಕ್ಷಣದಲ್ಲಿ, ಶಿಕ್ಷಕ– ವಿದ್ಯಾರ್ಥಿ ಮತ್ತು ಪೋಷಕರ ಮುಖಾಮುಖಿ ಇರುವುದೇ ಇಲ್ಲ ಎಂಬುದು ಬಹುದೊಡ್ಡ ಕೊರತೆ.

ಏನು ಪರಿಹಾರ?: ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆಗೆ ಸರ್ಕಾರ, ಬುದ್ಧಿಜೀವಿಗಳು, ಶಿಕ್ಷಣ ತಜ್ಞರೂ ಸೇರಿ ಕಲಾ ಶಿಕ್ಷಣದ ಧನಾತ್ಮಕ ಬೆಳವಣಿಗೆಗೆ ಚಿಂತನೆಗಳನ್ನು ನಡೆಸಬೇಕಾಗಿದೆ. ಶಿಕ್ಷಕರು ಅಗತ್ಯ ತರಬೇತಿ ಪಡೆದು, ಶಿಸ್ತು ಮತ್ತು ಬದ್ಧತೆಯೊಂದಿಗೆ ಬೋಧನೆ ಮಾಡಬೇಕು. ವಿದ್ಯಾರ್ಥಿಗಳಲ್ಲೂ ಕಲಾ ಶಿಕ್ಷಣದ ಅಗತ್ಯ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು. ಅವರು ಭಾಷಾ ಜ್ಞಾನ, ಕಂಪ್ಯೂಟರ್ ಜ್ಞಾನ, ಸಾಮಾನ್ಯ ಜ್ಞಾನ... ಹೀಗೆ ಉದ್ಯೋಗ ಪಡೆಯಲು ಅಗತ್ಯವಿರುವ ಎಲ್ಲ ಕೌಶಲಗಳನ್ನು ಪಡೆದುಕೊಳ್ಳುವಂತಾಗಬೇಕು. ಕ್ಷೇತ್ರಕಾರ್ಯ, ಶೈಕ್ಷಣಿಕ ಪ್ರವಾಸ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳಬೇಕು. ಪದವಿ ಶಿಕ್ಷಣದಲ್ಲಿ ಯುಜಿಸಿಯವರು ಅನುಷ್ಠಾನಕ್ಕೆ ತಂದ ಸಿಸಿಎಸ್ ಪದ್ಧತಿ ಆದಷ್ಟು ಬೇಗ ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಂಡರೆ ಈ ನಿಟ್ಟಿನಲ್ಲಿ ಹೆಚ್ಚಿನ ಲಾಭವಾಗುತ್ತದೆ.

ಸರ್ಕಾರವು ಕಾಲಕಾಲಕ್ಕೆ ಅಧ್ಯಾಪಕರ ನೇಮಕಾತಿ ಮಾಡಬೇಕು. ಕಾಲೇಜುಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಹೀಗಾದರೆ ಮಾತ್ರ ಕಲಾ ವಿಷಯಗಳ ಶಿಕ್ಷಣವು ಅರ್ಥಪೂರ್ಣವಾಗುತ್ತದೆ.

ಕಲಾ ಶಿಕ್ಷಣವು ವಿಜ್ಞಾನ ಮತ್ತು ವಾಣಿಜ್ಯ ಶಿಕ್ಷಣದಷ್ಟೇ ಮಹತ್ವದ್ದು ಮತ್ತು ಅಗತ್ಯವಾದುದು. ಮಾನವನ ಬೆಳವಣಿಗೆಯಲ್ಲಿ ಸಂಸ್ಕೃತಿ ಮತ್ತು ನಾಗರಿಕತೆಗಳು ಎರಡು ಕಣ್ಣುಗಳಿದ್ದಂತೆ. ವಿಜ್ಞಾನ, ವಾಣಿಜ್ಯ, ಔಷಧಶಾಸ್ತ್ರ, ತಂತ್ರಜ್ಞಾನದ ಶಿಕ್ಷಣ ಎಷ್ಟು ಮುಖ್ಯವೋ, ಕಲಾ ನಿಕಾಯದ ಶಿಕ್ಷಣವೂ ಅಷ್ಟೇ ಮುಖ್ಯ. ಇಂಗ್ಲಿಷ್‌ ಸಂಸ್ಕೃತಿ ಚಿಂತಕ ಮ್ಯಾಥ್ಯೂ ಅರ್ನಾಲ್ಡ್‌ ಹೇಳುವಂತೆ, ನಾಗರಿಕತೆಯಷ್ಟೆ, ಸಂಸ್ಕೃತಿಯ ಅಧ್ಯಯನವೂ ಅಗತ್ಯವಾಗಿದೆ. ಕಲಾ ಅಧ್ಯಯನವು ಸಂಸ್ಕೃತಿಯ ಅಧ್ಯಯನವಾಗಿದ್ದು, ಅದು ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವ ಶಿಕ್ಷಣ, ಹಾಗೂ ತರಬೇತಿಯಾಗಿದೆ. ರಷ್ಯಾದ ಚಿಂತಕ ಟ್ರಾಟ್‌ಸ್ಕಿ ಹೇಳುವಂತೆ, ಶಿಕ್ಷಣವು carry over value ಅನ್ನು ಹೊಂದಿದೆ. ಕಲಾ ಅಧ್ಯಯನವು ಸಾಕಷ್ಟು ಉದ್ಯೋಗ ಸೃಷ್ಟಿಗೂ, ವ್ಯಾಪಾರ- ವಾಣಿಜ್ಯದ ಅಭಿವೃದ್ಧಿಗೂ ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ಯಾವ ಕಾರಣಕ್ಕೂ ಕಲಾ ಶಿಕ್ಷಣವನ್ನು ಕಡೆಗಣಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT