ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಕ್ಕಳಲ್ಲಿ ಮೂಡಲಿ ತನ್ಮಯ ಭಾವ

ಮಂಕಾಗಿರುವ ಮಕ್ಕಳಲ್ಲಿ ಈ ಹಿಂದಿನಂತೆ ಪುನಃ ಚೈತನ್ಯ ಉಕ್ಕಿಸುವ, ಕಲಿಕೆಯಲ್ಲಿ ತನ್ಮಯತೆ ಮೂಡಿಸುವ ಬಗೆ ಹೇಗೆ?
Last Updated 21 ಜುಲೈ 2022, 19:30 IST
ಅಕ್ಷರ ಗಾತ್ರ

ಮಂಕಾಗಿರುವ ಮಕ್ಕಳಲ್ಲಿ ಈ ಹಿಂದಿನಂತೆ ಪುನಃ ಚೈತನ್ಯ ಉಕ್ಕಿಸುವ, ಕಲಿಕೆಯಲ್ಲಿ ತನ್ಮಯತೆ ಮೂಡಿಸುವ ಬಗೆ ಹೇಗೆ?

***

ನಾನೊಬ್ಬ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ. ಮಕ್ಕಳಲ್ಲಿರುವ ಸೂಕ್ಷ್ಮ ಸಂವೇದನೆಗಳು ಎಚ್ಚರ ಇದ್ದಾಗ ಮಾತ್ರ ನನ್ನ ತರಗತಿ ಜೀವಂತವಾಗಿರ ಬಲ್ಲದು ಎಂಬುದನ್ನು ನಂಬುವವ. ಇತ್ತೀಚೆಗೆ ನನಗೆ ವಯಸ್ಸಾಯಿತೋ ವಿದ್ಯಾರ್ಥಿಗಳ ಮನಸು ಹಾಳಾಯಿತೋ ಗೊತ್ತಿಲ್ಲ. ಪ್ರತಿ ತರಗತಿಯಲ್ಲೂ ಈ ಮಕ್ಕಳಿಗೆ ಏನಾಗಿದೆ? ಯಾಕೆ ಈ ನಿಷ್ಕ್ರಿಯತೆ, ಯಂತ್ರಸ್ಥಿತಿ ಎಂಬ ಆತಂಕ ಕಾಡುತ್ತಿದೆ. ಪಂಪ, ಬಸವ, ಬೇಂದ್ರೆ, ತೇಜಸ್ವಿ ಅವರ ಮೂಲಕ ಪಠ್ಯದ ದಾರಿಯಲ್ಲಿ ಈ ಮಕ್ಕಳನ್ನು ಯಂತ್ರಸ್ಥಿತಿಯಿಂದ ಎಬ್ಬಿಸಲು ನಾನು ಪಡುವ ಪ್ರಯತ್ನ ಬರೀ ನನ್ನೊಬ್ಬನದ್ದಲ್ಲ, ಬೇರೆ ಶಾಲಾ– ಕಾಲೇಜುಗಳಲ್ಲಿ ಇದೇ ಸ್ಥಿತಿ ಎದುರಿಸುತ್ತಿರುವ ಮೇಷ್ಟ್ರುಗಳದ್ದು ಕೂಡಾ.

ಕೊರೊನಾ ತೀವ್ರವಾಗಿ ಬಾಧಿಸಿದ ಅವಧಿಯಲ್ಲಿ ಈ ಸೋಂಕಿನ ಕುರಿತುಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಯಾಗಿದೆ. ಪತ್ರಿಕೆಗಳಲ್ಲಿ ಸಾವಿರಾರು ಲೇಖನಗಳು ಪ್ರಕಟವಾಗಿವೆ. ಆರೋಗ್ಯ– ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗಳಾಗಿವೆ. ಲಸಿಕೆ, ಔಷಧಗಳು ಬಂದವು. ಆದರೆ, ಕೊರೊನಾ ಕಾಣಿಸಿಕೊಂಡ ನಂತರದಲ್ಲಿ ಮಕ್ಕಳ ಮನಸ್ಸಿನಲ್ಲಿ ಆಗಿರುವ ಪಲ್ಲಟಗಳ ಕುರಿತು ಪ್ರಕಟವಾದ ವೈಜ್ಞಾನಿಕ ಬರಹಗಳು ಕಡಿಮೆ.

ಪ್ರೌಢಶಾಲೆ, ಪಿಯುಸಿ, ಪದವಿ ತರಗತಿ ಯಾವುದೇ ಇರಲಿ, ಅಲ್ಲಿರುವ ಮಕ್ಕಳ ತಾಳ್ಮೆ, ಗ್ರಹಣಶಕ್ತಿ, ಒಳಗೊಳ್ಳುವ, ಕೇಳುವ, ಬರೆಯುವ, ಭಾವಿಸುವ, ಉತ್ತರಿಸುವ- ಹೀಗೆ ಎಲ್ಲದರಲ್ಲೂ ಕುಸಿತ, ಅಸ್ಥಿರತೆ ಕಣ್ಣಿಗೆ ರಾಚುವಂತಿದೆ. ಶಾಲಾ- ಕಾಲೇಜಿಗೆಂದು ಬೆಳಿಗ್ಗೆ ಹೊರಡುವ ವಿಚಾರದಲ್ಲಿ ವಿದ್ಯಾರ್ಥಿಗಳಲ್ಲಿ ಅದೇ ಉಲ್ಲಾಸ, ಖುಷಿ ಇದೆ. ಆದರೆ, ತರಗತಿಯ ಒಳಗಡೆ ನೆಟ್ಟಗೆ ಕೂತು ಪಾಠ ಕೇಳುವುದು, ಆಲಿಸುವುದು ತೀರಾ ಸಹಿಸಲು ಅಸಾಧ್ಯದಂತೆ ಗೋಚರಿಸುತ್ತಿದೆ. ಇವರೆಲ್ಲರೂ ಈಗ ಆನ್‍ಲೈನ್‌ಗಿಂತ ಆಫ್‍ಲೈನ್‌ ಇಷ್ಟಪಡುವವರೇ!

ಕೊರೊನಾ ಕಾಲಿಡುವುದಕ್ಕೆ ಮೊದಲು ತರಗತಿಯಲ್ಲಿ ಭೌತಿಕವಾಗಿ ಹಾಜರಿರುವ ಮಕ್ಕಳು ಮತ್ತು ನಿಜವಾಗಿ ಮನಸ್ಸಿಟ್ಟು ಪಾಠ ಕೇಳುವ ಮಕ್ಕಳ ಸಂಖ್ಯೆಯಲ್ಲಿ ವ್ಯತ್ಯಾಸ ಇರಲಿಲ್ಲ. ಈಗ ಸ್ಥಿತಿ ಪೂರ್ತಿ ಬದಲಾಗಿದೆ. ಮಕ್ಕಳೆಲ್ಲಾ ಪಾಠ ಕೇಳುತ್ತಾರೆಂಬುದು ಶಿಕ್ಷಕರಲ್ಲಿನ ಪೂರ್ವಕಲ್ಪಿತ ಭ್ರಮೆಯೇ ವಿನಾ ನಿಜವಲ್ಲ.

ಈ ಹಿಂದೆ, ಬರೆಯುವ ಪರೀಕ್ಷೆಯಲ್ಲಿ ಸಿಗುವ ಅಂಕಗಳೇ ಭವಿಷ್ಯಕ್ಕೆ ನಿರ್ಧಾರಕವಾಗಿದ್ದವು. ಅಷ್ಟೇ ಅಲ್ಲ, ಬದುಕುವ ಪರೀಕ್ಷೆಗೆ ಪೂರಕವಾಗಿ ಮಕ್ಕಳಿಗೆ ತರಗತಿಯ ಓದು, ಪಾಠ– ಪ್ರವಚನವು ಗುಣಾತ್ಮಕ ನಿರ್ಬಂಧವಾಗಿ ಕಾಡುತ್ತಿತ್ತು. ಕೊರೊನಾ ಯಾವಾಗ ಪರೀಕ್ಷೆಯನ್ನೇ ಕೊಂದು ಹಾಕಿ ಸುಲಭ ಬಡ್ತಿ ಸಾಧ್ಯವಾಯಿತೋ ಆಗಲೇ ಅಧ್ಯಯನದ ಶಿಸ್ತು ಆಯ ತಪ್ಪಿತು. ‍ಪಠ್ಯದಾಚೆಗೆ, ಬದುಕುವ ಪರೀಕ್ಷೆಗೆ ಪೂರಕವಾಗುವ ಜೀವನಾನುಭವ, ಕಥೆ, ದೃಷ್ಟಾಂತ, ಉಪಮೆಗಳನ್ನು ಹೇಳುವಾಗ ಆಲಿಸುವ, ಸಂಭ್ರಮಿಸುವ ಒಂದಷ್ಟು ಮನಸ್ಸುಗಳು ಆಗ ನಮ್ಮಂಥ ಶಿಕ್ಷಕರಿಗೆ ಸಿಗುತ್ತಿದ್ದವು.ಆಫ್‍ಲೈನ್‌ ಅಥವಾ ಸಮ್ಮುಖ ಶಿಕ್ಷಣದ ಬಹುದೊಡ್ಡ ಸಾಧ್ಯತೆ ಅಥವಾ ಸುಖವೇ ಅದು.

ಕೊರೊನಾ ಅವಧಿಯಲ್ಲಿ ಮಕ್ಕಳು ಖಾಲಿ ಬೀಳದಂತೆ ಆನ್‍ಲೈನ್‌ನಲ್ಲಿ ಪಾಠಗಳಾದವೇ ಹೊರತು ಮನೋವಿಕಸನದ ಯಾವುದೇ ಪಠ್ಯೇತರ ಕಾರ್ಯಕ್ರಮಗಳು ನಡೆಯಲಿಲ್ಲ. ಅದೇ ದೊಡ್ಡ ಕೊರತೆ. ಶಿಕ್ಷಣ- ವಿಕಸನವೆಂದರೆ ಪಾಠ-ಪಠ್ಯಗಳು ಮಾತ್ರವಲ್ಲ, ಶಿಕ್ಷಣಾಲಯಗಳಲ್ಲಿ ನಡೆಯುವ ಕಲೆ, ಸಂಗೀತ, ಕ್ರೀಡೆ, ಗೋಷ್ಠಿ, ನಾಟಕ, ಭಾಷಣ, ಪ್ರದರ್ಶನಗಳು ಕೂಡಾ ಮನೋವಿಕಸನದ ಚೋದಕ ಗಳೇ. ಈ ಎರಡೂವರೆ ವರ್ಷಗಳ ಅವಧಿಯಲ್ಲಿ ಗುಂಪು ಸೇರಬಾರದು, ಕಾರ್ಯಕ್ರಮ ಮಾಡಬಾರದು, ಬರೀ ಪಾಠ- ಪರೀಕ್ಷೆಗಳಿಗಷ್ಟೇ ಚಟುವಟಿಕೆ ಸೀಮಿತವಾಗಿರಲಿ ಎಂಬ ಕೋವಿಡ್ ನಿಯಮಗಳು ಮಕ್ಕಳ ಮನಸ್ಸನ್ನು ಮಂಕಾಗಿಸಿದವು.

ಇಲಾಖೆ, ಶಿಕ್ಷಕರು, ಪೋಷಕರು ಒಪ್ಪಿ ಆನ್‍ಲೈನ್‍ಗಾಗಿಯೇ ಮಕ್ಕಳ ಕೈಗಿತ್ತ ಮೊಬೈಲ್‍ಗಳು, ಟ್ಯಾಬ್‍ಗಳು ಪಾಠದಾಚೆ ಅವರಿಗೆ ಏನೇನೋ ಮನಸ್ಸಿ ನೊಳಗೆ ತೂರಿಸಿದವು. ಶೈಕ್ಷಣಿಕ ಕೂಡುಕೂಟ ರಂಜನೆ ಯಾಚೆಯ ಅಂತರ್ಜಾಲ ವಿಕೃತಿಗಳು, ಆಟಗಳು ಮಕ್ಕಳ ಮನಸ್ಸು ಕೆಡಿಸಿದವು. ಖಾಸಗಿ ಕಾಲೇಜೊಂದರಲ್ಲಿ ಪಾಠ ಮಾಡುವ ಉಪನ್ಯಾಸ ಗೆಳೆಯರೊಬ್ಬರು ನೋವಿನಿಂದ ನನಗೆ ಹೇಳಿದ ಮಾತಿದು... ‘ನಾನೀಗ ನಿವೃತ್ತಿಯ‌ ಅಂಚಿನಲ್ಲಿದ್ದೇವೆ. ದಿನಾ ಕಾಲೇಜು ಕ್ಯಾಂಪಸ್ಸಿನೊಳಗೆ ಬಂದಾಗ ಮಕ್ಕಳಿಂದ ಒಂದಷ್ಟು ಪ್ರೀತಿ, ಗೌರವದ ನಮಸ್ಕಾರಗಳಾದರೂ ಸಿಗುತ್ತಿತ್ತು. ಅದು ಕೃತಕದ್ದೇ ಇರಲಿ, ನಕಲಿ ಮುಖವಾಡವೇ ಇರಲಿ ಅದು ಪ್ರೀತಿಯದ್ದೇ ಎಂದು ನಾನಂತೂ ನಂಬುತ್ತಿದ್ದೆ. ಈಗ ಗುರುಗಳಿಗೆ ನಮಸ್ಕರಿಸದ ಮಕ್ಕಳೇ ನಮ್ಮ ಕ್ಯಾಂಪಸ್ಸು ತುಂಬಾ ಇದ್ದಾರೆ. ನಮ್ಮ ಮಕ್ಕಳಿಗೆ ಈಗ ಏನಾಗಿದೆ’ ಎಂಬ ಪ್ರಶ್ನೆ ಅವರದ್ದು.

ಕಲಿಕೆಯ ಬಗೆಗೆ ನಿರಾಸಕ್ತಿ ಇರುವ ಮಕ್ಕಳನ್ನು ದಂಡಿಸಿ ಸರಿಮಾಡುವ ಕಾಲವೂ ಇದಲ್ಲ.
ಭೌತಿಕವಾಗಿ ಶಿಕ್ಷಣ ಕೇಂದ್ರಗಳಲ್ಲಿ, ಇಲಾಖೆಯ ಹಂತದಲ್ಲಿ ಬಹಳಷ್ಟು ಸುಧಾರಣೆಯಾಗಿರಬಹುದು. ಇವೆಲ್ಲವೂ ಕಲಿಕೆಯ ಗುಣಮಟ್ಟವನ್ನು ಉನ್ನತೀಕರಿ ಸುತ್ತವೆಯೇ? ಅಂತಹ ನಂಬಿಕೆಯಲ್ಲಿನ ನಿಜಾಂಶ ಎಷ್ಟು? ಮಂಕಾಗಿರುವ ಮಕ್ಕಳಲ್ಲಿ ಈ ಹಿಂದಿನಂತೆ ಪುನಃ ಚೈತನ್ಯ ಉಕ್ಕಿಸುವ, ಕಲಿಕೆಯಲ್ಲಿ ತನ್ಮಯತೆ ಮೂಡಿಸುವ ಬಗೆ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT