ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಅಂತರವಿರಲಿ... ಅದು ಅಂತರಂಗದ ಸಂಗತಿ!

ಅಧ್ಯಾತ್ಮ ಎನ್ನುವುದು ಸಾವಿರಾರು ಜನರ ನಡುವೆ ಕುಳಿತು ಸಾಧಿಸುವ ಸಾಧನೆಯಲ್ಲ
Last Updated 29 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಬೆಳಗಿನ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿರುವಾಗ ನನ್ನೆದುರು ನಡೆದುಕೊಂಡು ಹೋಗುತ್ತಿದ್ದ ಮಹನೀಯರಿಬ್ಬರು ಗಹನವಾದ ಮಾತುಕತೆಯಲ್ಲಿ ತೊಡಗಿಕೊಂಡಿದ್ದರು. ಅವರ ಇಡೀ ಮಾತಿನುದ್ದಕ್ಕೂ ಬೇರೆ ವ್ಯಕ್ತಿಯ ಕುರಿತು ಅಸಹನೆ, ದ್ವೇಷ, ಸಿಟ್ಟು, ಭರ್ತ್ಸನೆ ವ್ಯಕ್ತವಾಗುತ್ತಿದ್ದವು. ತಮ್ಮ ಕೋಪಕ್ಕೆ ಕಾರಣನಾದ ವ್ಯಕ್ತಿಯನ್ನು ಅಪಮಾನಗೊಳಿಸಲು ಸೂಕ್ತ ಸಂದರ್ಭಕ್ಕಾಗಿ ಅವರು ಕಾಯುತ್ತಿದ್ದದ್ದು ಅವರಿಬ್ಬರ ಸಂಭಾಷಣೆಯಿಂದ ಅರ್ಥವಾಗುತ್ತಿತ್ತು. ಅವರಿಬ್ಬರೂ ಅದೇ ಆಗ ಅಧ್ಯಾತ್ಮದ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳಿ ಬರುತ್ತಿರುವರೆಂದು ಮಾತಿನ ನಡುವೆ ಗೊತ್ತಾಯಿತು. ಕೆಲವು ಕ್ಷಣಗಳ ಹಿಂದಷ್ಟೇ ಅಧ್ಯಾತ್ಮದ ವಿಚಾರಗಳನ್ನು ಆಲಿಸಿದವರು ಎಷ್ಟು ಬೇಗ ಲೌಕಿಕ ಬದುಕಿನ ತಾಮಸ ಗುಣಗಳಿಗೆ ಮರಳಿದರೆಂದು ನನಗೆ ದುಃಖವಾಯಿತು.

ನನ್ನ ಸ್ನೇಹಿತನ ಊರಿನಲ್ಲಿ ಅಧ್ಯಾತ್ಮ ಪ್ರಸಾರ ಮಂಡಳಿಯೊಂದು ಇತ್ತೀಚೆಗೆ ಹತ್ತು ದಿನಗಳ ಅಧ್ಯಾತ್ಮ ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು. ಊರ ಮಧ್ಯದ ವಿಶಾಲವಾದ ಶಾಲಾ ಮೈದಾನದಲ್ಲಿ ಬೃಹತ್ ಸಭಾಂಗಣವನ್ನು ನಿರ್ಮಿಸಿ, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕರಿಗೆ ಉಚಿತ ಅಧ್ಯಾತ್ಮ ತರಬೇತಿ ನೀಡಲಾಯಿತು. ದಿನದ ತರಬೇತಿಯ ಕೊನೆಯಲ್ಲಿ ಸಭಾಂಗಣದ ಪ್ರವೇಶದ್ವಾರದ ಹತ್ತಿರದ ಮಳಿಗೆಯಲ್ಲಿ ಜನರು ಅಧ್ಯಾತ್ಮ ಸಂಬಂಧಿತ ಪುಸ್ತಕಗಳು ಮತ್ತು ಸಿ.ಡಿ.ಗಳನ್ನು ಮುಗಿಬಿದ್ದು ಖರೀದಿಸಿದರು. ಜೊತೆಗೆ ಮಾರಾಟಕ್ಕಿಟ್ಟಿದ್ದ ತರಹೇವಾರಿ ತಿಂಡಿಗಳನ್ನು ಸವಿದರು. ಸಾರ್ವಜನಿಕರು ಈ ತರಬೇತಿ ಕಾರ್ಯಕ್ರಮದಿಂದ ಅಧ್ಯಾತ್ಮವನ್ನು ಅದೆಷ್ಟು ಪ್ರಮಾಣದಲ್ಲಿ ಮೈಗೂಡಿಸಿಕೊಂಡರು ಎಂಬುದಕ್ಕಿಂತ ಆಯೋಜಕರು ಮಾತ್ರ ನಿವ್ವಳ ಲಾಭದೊಂದಿಗೆ ಮುಂದಿನ ಊರಿಗೆ ಪ್ರಯಾಣ ಬೆಳೆಸಿದರು ಎನ್ನುವುದು ಚರ್ಚೆಯ ಸಂಗತಿಯಾಗಿತ್ತು.

ಇಂದು ಅಧ್ಯಾತ್ಮ ಮತ್ತು ಯೋಗಕ್ಕೆ ಮಾರುಕಟ್ಟೆಯ ಮೌಲ್ಯ ಪ್ರಾಪ್ತವಾಗಿದೆ. ಒಂದರ್ಥದಲ್ಲಿ ಈ ಸಂಗತಿಗಳು ಬಿಕರಿಗಿಟ್ಟ ಮಾರಾಟದ ಸರಕುಗಳಾಗಿವೆ. ಅದಕ್ಕೆಂದೇ ಇಲ್ಲಿ ಢೋಂಗಿ ಬಾಬಾಗಳು ಮತ್ತು ಝಟಕಾ ಸ್ವಾಮಿಗಳು ಹುಟ್ಟಿಕೊಳ್ಳುತ್ತಾರೆ. ಪಂಚತಾರಾ ಹೋಟೆಲುಗಳನ್ನೂ ಮೀರಿಸುವ ಐಷಾರಾಮಿ ಸವಲತ್ತುಗಳ ಯೋಗ ಮತ್ತು ಅಧ್ಯಾತ್ಮ ಕೇಂದ್ರಗಳು ಅಸ್ತಿತ್ವಕ್ಕೆ ಬರುತ್ತವೆ. ಸಾವಿರಾರು ರೂಪಾಯಿ ಪಾವತಿಸಿ ಸಾರ್ವಜನಿಕರು ಅಧ್ಯಾತ್ಮವನ್ನು ಮೈಗೂಡಿಸಿಕೊಳ್ಳಲು ಹಪಹಪಿಸುತ್ತಾರೆ.

ಅರಿವೇ ಗುರು ಎಂದಿರುವರು ಅನುಭಾವಿಗಳು. ಈ ನಾಡಿನಲ್ಲಿ ಶರಣರು, ಸಂತರು, ಸೂಫಿಗಳು ಲೌಕಿಕ ಬದುಕಿನ ನಡುವೆಯೂ ಅಲೌಕಿಕವನ್ನು ಸಾಧಿಸಿದರು. ದಿನನಿತ್ಯದ ಕಾಯಕದಲ್ಲೇ ಶರಣತ್ವವನ್ನು ಪಾಲಿಸಿದರು. ಕಳಬೇಡ/ ಕೊಲಬೇಡ/ ಹುಸಿಯ ನುಡಿಯಲುಬೇಡ/ ಮುನಿಯಬೇಡ/ ಅನ್ಯರಿಗೆ ಅಸಹ್ಯಪಡಬೇಡ/ ತನ್ನ ಬಣ್ಣಿಸಬೇಡ/ ಇದಿರ ಹಳಿಯಲುಬೇಡ/ ಇದೇ ಅಂತರಂಗಶುದ್ಧಿ/ ಇದೇ ಬಹಿರಂಗಶುದ್ಧಿ ಎಂದು ಇಡೀ ಬದುಕನ್ನೇ ಅಧ್ಯಾತ್ಮದ ನೆಲೆಯಲ್ಲಿ ನೋಡಿದರು. ಅಂತರಂಗ ಮತ್ತು ಬಹಿರಂಗ ಎಂದು ಎರಡು ಪ್ರತ್ಯೇಕ ಬದುಕುಗಳನ್ನು ಬದುಕದೆ ಎರಡನ್ನೂ ಏಕತ್ರವಾಗಿಸಿ ಇಹ ಮತ್ತು ಪರ ಎರಡನ್ನೂ ಒಂದಾಗಿಸಿದರು.

ಬದುಕಿನ ಪಯಣ ಎನ್ನುವುದು ಹೂವು ಹಾಸಿದ ಹಾದಿಯ ಮೇಲಿನ ನಡಿಗೆಯಲ್ಲ. ಕಲ್ಲು ಮುಳ್ಳುಗಳನ್ನು ಬದಿಗೆ ಸರಿಸಿ ತಾನು ನಡೆಯಬೇಕಾದ ದಾರಿಯನ್ನು ಪಥಿಕ ತಾನೇ ಸೃಷ್ಟಿಸಿಕೊಳ್ಳಬೇಕು. ಬದುಕೆಂದ ಮೇಲೆ ಸವಾಲುಗಳು, ಸಮಸ್ಯೆಗಳು ಸಹಜ. ಕಥೆಗಾರ್ತಿ ಕಸ್ತೂರಿ ಬಾಯರಿ ಸಂದರ್ಶನವೊಂದರಲ್ಲಿ ಬದುಕಿನ ಕುರಿತು ತುಂಬ ಅರ್ಥಪೂರ್ಣವಾದ ಮಾತು ಹೇಳಿರುವರು- ‘ಅಸಹಾಯಕತೆ, ಹಸಿವು ನಮಗೆ ಕಾಡಲಿಲ್ಲ ಅಂದರೆ, ಹೌ ಮಚ್ ವಿ ಆರ್ ಸ್ಟ್ರಾಂಗ್‍ ಇನ್ ಫ್ರಂಟ್‍ ಆಫ್ ಹಂಗರ್ ಅಂತ ಹ್ಯಾಂಗ ಗೊತ್ತಾಗೋದು? ಯಾರು ನಮ್ಮನ್ನು ನೋಡಿದರೂ ಒಂದು ಕೆಟ್ಟ ಭಾವ ಬರದಂಗ ಘನತೆಯ ಬದುಕು ಬದುಕೀವಿ ಅಂದರ ಅದು ಸಣ್ಣ ಮಾತಲ್ಲ’. ಯಾವ ಆಧ್ಯಾತ್ಮಿಕ ತರಬೇತಿ ಕೇಂದ್ರದಲ್ಲೂ ಕೇಳಲು ಸಿಗದ ಬದುಕಿನ ಅರ್ಥ ಮತ್ತು ಅನ್ವೇಷಣೆ ಇದು.

ಅಧ್ಯಾತ್ಮಕ್ಕೆ ಮಾರುಕಟ್ಟೆ ಮೌಲ್ಯ ಪ್ರಾಪ್ತವಾಗಿರು ವುದಕ್ಕೆ ಸಾರ್ವಜನಿಕರ ಕೊಡುಗೆ ಬಹಳಷ್ಟಿದೆ. ಬದಲಾಗುತ್ತಿರುವ ಕುಟುಂಬ ಘಟಕ ಮತ್ತು ಬದುಕಿನ ಮೌಲ್ಯಗಳು ಜೀವನದ ರೀತಿ ನೀತಿಗಳನ್ನು
ನಿಯಂತ್ರಿಸುತ್ತಿವೆ. ಕೂಡುಕುಟುಂಬಗಳಿಂದ ದೂರವಾಗುತ್ತಿರುವ ಮನುಷ್ಯ ಒಂಟಿಯಾಗುತ್ತಿದ್ದಾನೆ. ಜೊತೆಗೆ ಉದ್ಯೋಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅನಿಶ್ಚಿತತೆ ಮತ್ತು ಸ್ಪರ್ಧೆ ಬಹುದೊಡ್ಡ ಸವಾಲಾಗಿ ಪರಿಣಮಿ
ಸುತ್ತಿವೆ. ಏಕಮುಖವಾದ ಬದುಕಿನ ಪಯಣದಲ್ಲಿ ಕಿಂಚಿತ್ ಏರುಪೇರಾದರೂ ಮನುಷ್ಯ ಹತಾಶೆ, ಖಿನ್ನತೆ, ಉದ್ವಿಗ್ನತೆಯತ್ತ ವಾಲುತ್ತಿದ್ದಾನೆ. ಜನರ ಇಂಥ ಮಾನಸಿಕ ದೌರ್ಬಲ್ಯವನ್ನೇ ಬಂಡವಾಳವಾಗಿಸಿಕೊಂಡು
ಕೆಲವು ಅಧ್ಯಾತ್ಮದ ಕೇಂದ್ರಗಳು ಹಣ ಮಾಡುತ್ತಿವೆ.

ಅಧ್ಯಾತ್ಮ ಎನ್ನುವುದು ಸಾವಿರಾರು ಜನರ ನಡುವೆ ಕುಳಿತು ಸಾಧಿಸುವ ಸಾಧನೆಯಲ್ಲ. ನಿಶ್ಶಬ್ದ, ನೀರವ ವಾತಾವರಣದಲ್ಲಿ ಒಬ್ಬಂಟಿಯಾಗಿ ಕುಳಿತು ಮನಸ್ಸನ್ನು ನಿಗ್ರಹಿಸಿಕೊಳ್ಳುವ ಸಾಧನೆಯದು. ಆತ್ಮಪರೀಕ್ಷೆ, ಆತ್ಮವಿಮರ್ಶೆಗೆ ಇವತ್ತು ಮನುಷ್ಯ ಒಳಗಾಗುತ್ತಿಲ್ಲ. ಭೌತಿಕವೇ ಪ್ರಧಾನವಾದ ಬದುಕಿನಲ್ಲಿ ಅಂತರಂಗ
ಕ್ಕಿಳಿಯುವ ಸಮಯವಾಗಲೀ ಸಂಯಮವಾಗಲೀ ಇವತ್ತಿನ ಮನುಷ್ಯನಿಗಿಲ್ಲ. ಎಲ್ಲವನ್ನೂ ಬಹಿರಂಗದಲ್ಲೇ ಹುಡುಕುತ್ತಿದ್ದಾನೆ. ಅದಕ್ಕೆಂದೇ ಅಧ್ಯಾತ್ಮದಂಥ ಅಂತರಂಗದ ಸಂಗತಿ ಕೂಡ ಇಂದು ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಸರಕಿನಂತೆ ಗೋಚರಿಸುತ್ತಿದೆ.

ಬದುಕಿನ ಅರ್ಥವನ್ನು ವಿಶ್ಲೇಷಿಸಲು, ಬದುಕಿಗೆ ಅಧ್ಯಾತ್ಮದ ರೂಪ ನೀಡಲು ಕುವೆಂಪು, ಕಾರಂತ, ಚಿತ್ತಾಲ, ಬೇಂದ್ರೆ ಅಂತಹವರ ಸಾಹಿತ್ಯ ಕೃತಿಗಳಿಗಿರುವ ಶಕ್ತಿಯು ಮಾರಾಟಕ್ಕಿಟ್ಟ ಈ ಆಧ್ಯಾತ್ಮಿಕ ಸರಕಿಗಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT