ಇತ್ತೀಚೆಗೆ ‘ಪ್ರಜಾವಾಣಿ’ಯಲ್ಲಿ ಪ್ರೌಢಶಾಲಾ ಮಕ್ಕಳಿಗೆ ಸರ್ಕಾರದಿಂದಲೇ ‘ಮನುಸ್ಮೃತಿ’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು. ಈ ಸಂಬಂಧದ ಹಿ.ಶಿ.ರಾಮಚಂದ್ರೇಗೌಡರ ಪತ್ರದಲ್ಲಿ ‘ಬಿ.ಜೆ.ಪಿ. ಸರ್ಕಾರ ನೇಮಿಸಿದ ಆಯ್ಕೆ ಸಮಿತಿ ಅಧ್ಯಕ್ಷರನ್ನೇ ಉಳಿಸಿಕೊಂಡಿದ್ದರಿಂದ ಈ ಅನುಮಾನ ಉಂಟಾಗಿದೆ’ ಎಂಬ ಉಲ್ಲೇಖವೂ ಇತ್ತು. ಬಳಿಕ ಮೈಸೂರಿನಲ್ಲಿ ಹೋರಾಟವೂ ನಡೆಯಿತು.
ಹಿಂದೂ ಧರ್ಮವನ್ನು ಟೀಕಿಸುವ ಮೂಲಕ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವವರು ತಮ್ಮ ಹೆಸರಿನಲ್ಲಿರುವ ‘ಜಾತಿ ವಾಚಕ’ವನ್ನೂ ಕಳೆದುಕೊಳ್ಳಲು ಸಾಧ್ಯವಾಗದವರ ವೈಚಾರಿಕತೆಯೂ ಅರ್ಥವಾಯಿತು. ಆದರೆ ಪ್ರೊ.ಎ.ಕೆ. ಹಂಪಣ್ಣ ಅವರು ತಮ್ಮ ಜೀವನದುದ್ದಕ್ಕೂ ದೀನದಲಿತರ ಪರವಾಗಿ ಹೋರಾಡುತ್ತಾ ಬಂದವರು. ಚಿತ್ರದುರ್ಗ ಜಿಲ್ಲೆಯ ಮಾದನಾಯಕನಹಳ್ಳಿಯ ದಲಿತರ ಕೇರಿಯಿಂದ ಕಡು ಬಡತನದಿಂದ ಬಂದು ಕನ್ನಡದ ಪ್ರಾಧ್ಯಾಪಕರಾದವರು.
ಹಂಪಣ್ಣ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಿರುವ 849 ಪುಸ್ತಕಗಳನ್ನು ವಿಚಾರವಾದಿಗಳು ನೋಡಿದ್ದಾರೆಯೇ? ಕೊನೇಪಕ್ಷ ‘ಪ್ರಜಾವಾಣಿ’ ವರದಿಯಲ್ಲಿರುವ 26 ಪುಸ್ತಕಗಳನ್ನಾದರೂ ನೋಡಿ ಪರಾಮರ್ಶಿಸಿ ಪ್ರತಿಕ್ರಿಯಿಸಿದ್ದಾರೆಯೇ? ಎಂದು ನೋಡಿದರೆ ನಿರಾಶೆಯಾಗುತ್ತದೆ. ‘ಎತ್ತು ಈತು ಅಂದ್ರೆ ಕೊಟ್ಟಿಗೆಯಲ್ಲಿ ಕಟ್ಟು ಅಂದ್ರಂತೆ’ ಅನ್ನೋ ಮಟ್ಟಕ್ಕೆ ನಮ್ಮ ಬೌದ್ಧಿಕವಲಯ ಬಂದು ಬಿಡುತ್ತದೆಯಲ್ಲಾ ಎಂದು ಬೇಸರವಾಗುತ್ತದೆ.
ಪತ್ರಿಕೆಯಲ್ಲಿನ ಪಟ್ಟಿಯಲ್ಲಿರುವ ‘ಭಗವದ್ಗೀತೆ ಬೆಳಕು ನೀಡುವುದೇ?’ ಎಂಬ ಕೃತಿಯನ್ನು ಎನ್. ಶಂಕರಪ್ಪ ತೋರಣಗಲ್ಲು ಅವರು ಬರೆದಿದ್ದಾರೆ. ನಾಡಿನ ವೈಚಾರಿಕ ಸ್ವಾಮೀಜಿ ಎಂದೇ ಹೆಸರಾದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ವೈಜ್ಞಾನಿಕ ಹಿನ್ನೆಲೆಯಲ್ಲಿ ಭಗವದ್ಗೀತೆಯು ಬೆಳಕು ನೀಡುವುದಿಲ್ಲ ಎಂದು ವಾದಿಸುವ ನಾಸ್ತಿಕವಾದಿ ಪುಸ್ತಕವಿದು.
ಆದರೆ ಅದರ ಶೀರ್ಷಿಕೆಯನ್ನು ನೋಡಿಯೇ ಇದೂ ಹಿಂದೂ ಧರ್ಮವನ್ನು ಸಾರುವ ಕೋಮುವಾದಿ ಪುಸ್ತಕವೆಂಬ ಪಟ್ಟಿಗೆ ಸೇರಿಸಿರುವುದನ್ನು ನೋಡಿದರೆ ನಮ್ಮ ಬೌದ್ಧಿಕ ವಲಯದ ದಾರಿದ್ರ್ಯ ಹಾಗೂ ಕಾಮಾಲೆ ದೃಷ್ಟಿಕೋನ ಅರ್ಥವಾಗುತ್ತದೆ. ಇನ್ನು ‘ವೈದಿಕ ಧರ್ಮದಲ್ಲಿ ಆತ್ಮ ಮತ್ತು ಬ್ರಹ್ಮ’ ಎಂಬ ಕೃತಿಯನ್ನು ವಿದ್ವಾಂಸರಾದ ಎಚ್.ವಿ. ನಾಗರಾಜರಾವ್ ಬರೆದಿದ್ದಾರೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. ಇದೂ ನಮ್ಮ ಚಿಂತಕರ ಕಣ್ಣಿಗೆ ಕೋಮುವಾದಿ ಕೃತಿ!
ಶಾಕ್ತಪಂಥ ಶಕ್ತಿದೇವತೆಯ ಆರಾಧನೆಯ ಪಂಥ. ಆದಿಶಕ್ತಿ, ತಂತ್ರಗಳು ಎಲ್ಲಾ ತಳಸಮುದಾಯಗಳ ಆಧ್ಯಾತ್ಮಿಕತೆಯ, ಸೈದ್ಧಾಂತಿಕತೆಯ, ಅನುಭಾವದ ಕೇಂದ್ರ. ಶಾಕ್ತ ಧರ್ಮದ ಬಗೆಗಾಗಲೀ, ತಂತ್ರಗ್ರಂಥಗಳ ಬಗೆಗಾಗಲೀ, ನಮ್ಮ ಹಿ.ಶಿ.ರಾ. ಅವರು ಅಥವಾ ಅಂಥವರ ಪಂಥದವರು ಬರೆದು ತೋರಿಸಲಿ ಎಂಬ ಸವಾಲಿನ ಪ್ರಶ್ನೆಯನ್ನು ಅತ್ಯಂತ ವಿನಮ್ರವಾಗಿ ಕೇಳಬೇಕೆನಿಸುತ್ತದೆ. ಸಾಂಖ್ಯದರ್ಶನ, ಶಾಕ್ತಪಂಥ, ತಂತ್ರಗ್ರಂಥಗಳ ಬಗ್ಗೆ ಕನ್ನಡದಲ್ಲಿ ಆಳವಾದ ಅಧ್ಯಯನ ಮಾಡುತ್ತಿರುವ ಅರಬಿಂದೋ ಕಪಾಲಿಶಾಸ್ತ್ರಿ ವೇದ ಸಂಸ್ಕೃತಿ ಸಂಸ್ಥೆ ಪ್ರಕಟಿಸಿರುವ ಆರ್.ಎಲ್. ಕಶ್ಯಪ್ ರಚಿಸಿರುವ ‘ತಂತ್ರಸಾಧನೆ’, ‘ವೇದದ ಬೆಳಕಿನಲ್ಲಿ ಆಧುನಿಕ ಸವಾಲುಗಳ ನಿರ್ವಹಣೆ’ ಎಂಬ ಕೃತಿಗಳ ಆಯ್ಕೆಯೂ ಬಿಜೆಪಿ ಸರ್ಕಾರದ ಸ್ಮರಣೆಗೆ ಕಾರಣವಾಗುತ್ತೆ, ದಲಿತ ಕವಿ ಹಂಪಣ್ಣನವರನ್ನು ಕೋಮುವಾದಿ, ಜಾತಿವಾದಿಯನ್ನಾಗಿ ಬಿಂಬಿಸುವಂತೆ ಮಾಡುತ್ತದೆ ಎಂಬುದನ್ನು ಸಾಂಸ್ಕೃತಿಕ ಪರಿವೇಷದಲ್ಲಿರುವ ಜಾತೀವಾದದ, ರಾಜಕೀಯ ಸೋಗಲಾಡಿತನವೆಂದು ಕರೆಯಬೇಕೋ ಏನೋ ಅರ್ಥವಾಗುತ್ತಿಲ್ಲ.
‘ವೇದ’ ಎಂದ ತಕ್ಷಣ ಬ್ರಾಹ್ಮಣರದ್ದು, ಕೋಮುವಾದದ್ದು, ಹಿಂದೂಗಳದ್ದು ಎಂದು ಬಡಬಡಿಸುವ ಇವರು ಋಗ್ವೇದದ ಹತ್ತನೆಯ ಕಾಂಡವನ್ನು ಬರೆದವನು ಶ್ವಪಚ ವಾಮದೇವ ಎಂಬುದನ್ನು ಅರಿತಿಲ್ಲವೇ? ‘ಸಂಸ್ಕೃತ’ ಎಂದೊಡನೆ ಬ್ರಾಹ್ಮಣರ ಭಾಷೆ ಎಂದು ಅರ್ಥೈಸುವ ಇವರು, ಕುರುಬ ಕಾಳಿದಾಸನೂ ಸಂಸ್ಕೃತದಲ್ಲಿ ಕಾವ್ಯ ರಚಿಸಿದ್ದಾನೆ. ಸಂಸ್ಕೃತ ಸಮಸ್ತ ಭಾರತೀಯರದ್ದಾಗಿತ್ತು.
ಕಾಲಾನಂತರದಲ್ಲಿ ಜಾತೀಯ ಸ್ವಾರ್ಥಿಗಳಿಂದ ಬ್ರಾಹ್ಮಣರಷ್ಟೇ ಕಲಿಯುವಂತಾಗಿ ಬ್ರಾಹ್ಮಣರದ್ದೆನಿಸುವಂತಾಗಿದೆ ಎಂಬ ಸತ್ಯ ತಿಳಿಯದ ಮುಗ್ಧರೆಂದು ನಾವು ನೀವು ನಂಬಬೇಕೇ? ಅಥವಾ ಸಮಾಜವನ್ನು ಬೌದ್ಧಿಕತೆಯ ಹೆಸರಿನ ಆಯುಧದಿಂದಲೂ ಒಡೆಯಬಹುದೆಂಬ ಹುನ್ನಾರದ ಭಾಗವೆಂದು ತಿಳಿಯಬೇಕೇ? ಪ್ರಾಜ್ಞರು ಚಿಂತಿಸಬೇಕು. ಹಂಪಣ್ಣನವರ ಸಮಿತಿ ಆಯ್ಕೆ ಮಾಡಿರುವ ‘ಭಗವದ್ಗೀತೆಯಲ್ಲಿ ಏನಿದೆ’ (ವೈಚಾರಿಕ ಚರ್ಚೆ) ಎಂಬ ಪುಸ್ತಕವನ್ನು ಎ.ಐ.ಡಿ.ಎಸ್.ಒ ಸಂಘಟನೆ ಪ್ರಕಟಿಸಿದೆ. ಅದನ್ನೂ ಕೋಮುವಾದಿ ಪುಸ್ತಕವೆಂದು ಭ್ರಮಿಸಿ ಮೈಸೂರಿನ ಎ.ಐ.ಡಿ.ಎಸ್.ಒ ಸಂಘಟನೆಯವರೂ ಹೋರಾಡಿದ್ದಾರೆಂದರೆ ಎತ್ತು ಈದ್ರೆ ಕೊಟ್ಟಿಗೆಯಲ್ಲಿ ಕಟ್ಟೋ ಮಂದಿ ಹೇಗಿದ್ದಾರೆಂಬುದು ಬಟ್ಟಂಬಯಲಾಯಿತು.
ಆಯ್ಕೆ ಸಮಿತಿಯು ಒಬ್ಬರೇ ಪ್ರಕಾಶಕರ ಹತ್ತು ಸಂಸ್ಥೆಗಳ ಪುಸ್ತಕಗಳನ್ನು ಆಯ್ಕೆ ಮಾಡಿದೆ ಎಂಬುದೇ ಈ ವರದಿಗಳ ಹಿಂದಿರುವ ಚರ್ಚೆಯ ಕೇಂದ್ರ. ಪ್ರಕಾಶಕರ ಅತೃಪ್ತಿಯ ಮೇಲಾಟಕ್ಕೆ ಮೈಸೂರಿನ ಬುದ್ಧಿಜೀವಿಗಳು ‘ಮನುಸ್ಮೃತಿ’ಯ ಶೀರ್ಷಿಕೆಯ ಅಮಲು ಹತ್ತಿಸಿದ್ದು ನಿಜಕ್ಕೂ ವ್ಯಾಪಾರೀ ವಲಯ ಎಂಥ ಪ್ರಭಾವಶಾಲಿ ಎಂಬುದನ್ನು ಮನದಟ್ಟು ಮಾಡಿದೆ. ಅದಕ್ಕೆ ಹಂಪಣ್ಣಅವರ ಆಯ್ಕೆ ಸಮಿತಿಯು ‘ಹತ್ತು ಸಂಸ್ಥೆಗಳಿಂದ ಪುಸ್ತಕಗಳು ಬಂದಾಗ ಹತ್ತು ಸಂಸ್ಥೆಗಳ ಪುಸ್ತಕಗಳೆಂದು ತಿಳಿಯುತ್ತದೆ.
ಅವೆಲ್ಲವೂ ಒಬ್ಬ ಪ್ರಕಾಶಕನದು ಎಂಬುದು ತಿಳಿದಿರುವುದಿಲ್ಲ’ ಎಂದು ಸ್ಪಷ್ಟನೆಯನ್ನೂ ನೀಡಿದೆ. ನಾನೂ ಈ ಹಿಂದೆ ಈ ಸಮಿತಿಯ ಸದಸ್ಯನಾಗಿ ಎರಡು ವರ್ಷ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷನಾಗಿ ಎರಡು ವರ್ಷ ಕೆಲಸ ಮಾಡಿದ್ದೇನೆ. ಪ್ರಕಾಶಕರು ತಮ್ಮ ಪುಸ್ತಕಗಳು ಆಯ್ಕೆಯಾದಾಗ ಸಂತಸಪಡುತ್ತಾರೆ. ಆಯ್ಕೆಯಾಗದಿದ್ದಾಗ ಸಮಿತಿಯನ್ನೇ ಕಟಕಟೆಗೇರಿಸುತ್ತಾರೆ.
ಆದರೂ ಉತ್ತಮ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರಿಗೇನೂ ಕೊರತೆಯಿಲ್ಲ. ಶೇ 10 ರಷ್ಟು ಕಳಪೆ ಪ್ರಕಾಶಕರುಗಳಿಂದಾಗಿ ಇಡೀ ಪ್ರಕಾಶನ ಉದ್ಯಮವೇ ಕಳಂಕವನ್ನು ಹೊರಬೇಕಾದ ದುಃಸ್ಥಿತಿಯಿದೆ. ರಾಜ್ಯ ಸರ್ಕಾರ ತುರ್ತಾಗಿ ಒಂದು ‘ಪುಸ್ತಕ ನೀತಿ’ ಯನ್ನೂ ಪ್ರಕಾಶಕರ ನೋಂದಣಿಯ ಬಿಗಿಯಾದ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ. ಕೃತಿ ಚೌರ್ಯ, ನಕಲಿ ಮುದ್ರಣ ಮಾರಾಟವನ್ನು ನಿಯಂತ್ರಿಸಬೇಕಾಗಿದೆ.
ತಜ್ಞತೆಯು ಬೇಡವೇ ಬೇಡವೆಂಬಂತೆ ಮಾಹಿತಿ ಸಂಗ್ರಹಿಸಿ ಪುಸ್ತಕ ರಚಿಸುವ ಯಂತ್ರಗಳಂತೆ ಎಲ್ಲಾ ವಿಷಯಗಳಲ್ಲಿಯೂ ಅವೇ ಅವೇ ಕೃತಿಗಳನ್ನು ಬೇರೆ ಬೇರೆ ಹೆಸರುಗಳಲ್ಲಿ ಪ್ರಥಮ ಮುದ್ರಣವೆಂದು ನೀಡುವ ಲೇಖಕ, ಪ್ರಕಾಶಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಸಾಹಸವನ್ನು ಆಯಾ ಇಲಾಖೆಯ ಮುಖ್ಯಸ್ಥರು, ಸರ್ಕಾರ ಮಾಡಬೇಕಾದ ಜರೂರಿದೆ. ಏಕೆಂದರೆ ಜ್ಞಾನಗಂಗೆ ಮಲಿನವಾಗಬಾರದು.
ಪ್ರೊ. ಹಂಪಣ್ಣ ನೇತೃತ್ವದ ಆಯ್ಕೆ ಸಮಿತಿಯು ಸಪ್ನ ಬುಕ್ ಹೌಸಿನ 47, ಕುವೆಂಪು ಭಾಷಾಭಾರತಿ ಪ್ರಾಧಿಕಾರದ 34, ಅನ್ನಪೂರ್ಣ ಪ್ರಕಾಶನದ 20, ಮಹಿಮಾ ಪ್ರಕಾಶನದ 21, ಬಸವತತ್ವ ಪ್ರಕಾಶನದ 19, ವಸಂತ ಪ್ರಕಾಶನದ 16, ಕಣ್ವ ಪ್ರಕಾಶನದ 14, ತಳುಕಿನ ವೆಂಕಣ್ಣಯ್ಯ ಪ್ರಕಾಶನದ 12 ಪುಸ್ತಕಗಳನ್ನು ಆಯ್ಕೆ ಮಾಡಿದೆ. ಉಳಿದ ಅನೇಕ ಪ್ರಕಾಶಕರ 12 ಕ್ಕಿಂತ ಕಡಿಮೆ ಪುಸ್ತಕಗಳು ಆಯ್ಕೆಯಾಗಿವೆ. ವರ್ಷಕ್ಕೆ ನೂರಿನ್ನೂರು ಪುಸ್ತಕಗಳನ್ನು ಮುದ್ರಿಸುವ ಸಪ್ನದ 47 ಪುಸ್ತಕಗಳ ಆಯ್ಕೆ ಎಂದಿಗೂ ಹೆಚ್ಚು ಎನ್ನಿಸಲಾರದು.
ವೈಚಾರಿಕ, ಪ್ರಗತಿಪರ, ಸುಸಂಸ್ಕೃತ ಪುಸ್ತಕಗಳನ್ನು ಆಯ್ಕೆ ಮಾಡಿಯೂ ಮೈಸೂರಿನ ಹಿ.ಶಿ.ರಾ., ಸಿದ್ಧಾಶ್ರಮ, ಹೊರೆಯಾಲ ದೊರೆಸ್ವಾಮಿಯಂಥವರ ಅನುಮಾನಕ್ಕೆ ಆಹಾರವಾದಂಥ, ಜಾತ್ಯತೀತವಾದಿ ಪ್ರೊ. ಹಂಪಣ್ಣ ಅವರನ್ನು ಬಿ.ಜೆ.ಪಿ. ಸರ್ಕಾರ ನೇಮಿಸಿತ್ತು ಎಂಬ ಒಂದೇ ಕಾರಣಕ್ಕೆ ಪೂರ್ವಗ್ರಹ ದಿಂದ ನೋಡುವುದು ಜ್ಞಾನವೆಂದಾ ಗಲೀ ಸತ್ಯವೆಂದಾಗಲೀ ಅನ್ನಿಸುವುದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.