ಬಿ.ವಿ.ವಸಂತಕುಮಾರ್ ಅವರು ಒಂದು ತಾತ್ವಿಕ ಚರ್ಚೆಯನ್ನು ವೈಯಕ್ತಿಕ, ವ್ಯಕ್ತಿನಿಂದನೆಯ ನೆಲೆಗೆ ಎಳೆದು ತಂದಿದ್ದಾರೆ (ಪ್ರ.ವಾ. ಅಭಿಮತ ಪುಟದ ಚರ್ಚೆ ಅಂಕಣ, ಮಾ. 11). ಈ ಕಾರಣಕ್ಕಾಗಿ ಅವರ ನಡೆಯೇ ಸಂದೇಹಾಸ್ಪದ. ಹಿ.ಶಿ.ರಾಮಚಂದ್ರೇಗೌಡರ ಬಗ್ಗೆ ಬರೆಯುತ್ತಾ ‘... ತಮ್ಮ ಹೆಸರಿನಲ್ಲಿರುವ ಜಾತಿವಾಚಕವನ್ನೂ ಕಳೆದುಕೊಳ್ಳಲು ಸಾಧ್ಯವಾಗದವರ ವೈಚಾರಿಕತೆಯೂ ಅರ್ಥವಾಯಿತು’ ಎಂದಿರುವುದು ಕುಹುಕದ ಮಾತಲ್ಲದೆ ಬೇರೇನೂ ಅಲ್ಲ.
ನಾನಾಗಲೀ, ಹಿ.ಶಿ.ರಾ ಅವರಾಗಲೀ, ಹೊರೆಯಾಲ ದೊರೆಸ್ವಾಮಿ ಅವರಾಗಲೀ ನಮ್ಮ ಪ್ರತಿಕ್ರಿಯೆಗಳಲ್ಲಿ ಜಾತಿಯ ಪ್ರಸ್ತಾಪವನ್ನು ಮಾಡಿರಲಿಲ್ಲ. ಅದು ನಮಗೆ ಪ್ರಸ್ತುತವೂ ಆಗಿರಲಿಲ್ಲ. ಒಂದು ಪಕ್ಷ, ಸಂಘಟನೆಯನ್ನು ಸಮರ್ಥಿಸಲು ಹೋಗಿ ತಾತ್ವಿಕ ಚರ್ಚೆಯನ್ನು ವ್ಯಕ್ತಿನಿಂದನೆಯ ನೆಲೆಗೆ ತಂದು ಚರ್ಚೆಯ ಹಾದಿ ತಪ್ಪಿಸುವ ತಂತ್ರಗಾರಿಕೆ ಇದು.
ಹಂಪಣ್ಣ ಅವರ ಬಗ್ಗೆ ವಸಂತಕುಮಾರ್ ತೋರಿರುವ ಅಭಿಮಾನ, ಪ್ರೀತಿಯ ಬಗೆಗೂ ನನಗೆ ಸಹಜವಾಗಿಯೇ ಸಂದೇಹ ಮೂಡಿದೆ. ಹಂಪಣ್ಣನವರು ದಲಿತರು, ಬಡವರು, ಕವಿಗಳು ಎಂದು ಒತ್ತಿ ಹೇಳುವಲ್ಲಿಯೇ ಇದು ಗೋಚರಿಸುತ್ತದೆ. ಮಾತ್ರವಲ್ಲ, ಇದು ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿ ಕಟ್ಟುವ ಮತ್ತು ಆ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಮೂಲಭೂತವಾದಿಗಳ ಕುತಂತ್ರವೂ ಆಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ನಾವು ಮೂವರೂ ದಲಿತ ವಿರೋಧಿಗಳಾಗಿರದೆ ಜೀವನದ ಉದ್ದಕ್ಕೂ ದಲಿತಪರ ಕಾಳಜಿಯನ್ನು ಬದುಕು-–ಬರಹದಲ್ಲಿ ಪ್ರಕಟಪಡಿಸುತ್ತ ಅವರೊಂದಿಗೆ ಸಹಚಿಂತನೆ,- ಸಹಬಾಳ್ವೆಯಲ್ಲಿ ಸಾಗಿಬಂದಿದ್ದೇವೆ. ಹಂಪಣ್ಣನವರು ವೈಯಕ್ತಿಕವಾಗಿ ನನಗೆ ಮೂರು ದಶಕಗಳಿಂದಲೂ ಪರಿಚಿತರು ಮಾತ್ರವಲ್ಲ; ಪ್ರೀತಿಯ ಸ್ನೇಹಿತರೂ ಹೌದು. ಹಂಪಣ್ಣನವರ ಬಗ್ಗೆ ನಮಗ್ಯಾರಿಗೂ ವೈಯಕ್ತಿಕವಾಗಿ ಬೇಸರ, ಭಿನ್ನಮತವಿಲ್ಲ. ಆಯ್ಕೆ ಸಮಿತಿ ಅಧ್ಯಕ್ಷರೊಬ್ಬರು ಮಾತ್ರ ಪುಸ್ತಕಗಳನ್ನು ಆಯ್ಕೆ ಮಾಡುವುದಿಲ್ಲ, ಸದಸ್ಯರೂ ಇಲ್ಲಿ ಭಾಗಿಗಳಾಗಿರುತ್ತಾರೆಂಬ ಅರಿವೂ ನಮಗಿದೆ. ಆದರೆ ಆಯ್ಕೆ ವಿಧಾನದ ಬಗೆಗೆ ತಾತ್ವಿಕ ವಿರೋಧವಿದೆ. ಅದನ್ನು ನಾವು ವ್ಯಕ್ತಪಡಿಸಿದ್ದೇವೆ.
ವಸಂತಕುಮಾರ್ ತಮ್ಮ ವಾದದ ಸಮರ್ಥನೆಗಾಗಿ ‘ವೈದಿಕ ಧರ್ಮದಲ್ಲಿ ಆತ್ಮ ಮತ್ತು ಬ್ರಹ್ಮ’, ‘ತಂತ್ರಸಾಧನೆ’, ‘ವೇದದ ಬೆಳಕಿನಲ್ಲಿ ಆಧುನಿಕ ಸವಾಲುಗಳ ನಿರ್ವಹಣೆ’, ‘ಭಗವದ್ಗೀತೆ ಬೆಳಕು ನೀಡುವುದೇ?’- ಎಂಬ ನಾಲ್ಕು ಧರ್ಮಸಂಬಂಧಿ ಪುಸ್ತಕಗಳನ್ನು ಮಾತ್ರ ಇಟ್ಟುಕೊಂಡು ಚರ್ಚಿಸಿರುವುದು ಇವರ ಮಿತಿ ಮತ್ತು ಇಬ್ಬಂದಿತನವನ್ನು ತೋರಿಸುತ್ತದೆ. ಸಮಿತಿ ಆಯ್ಕೆ ಮಾಡಿರುವ ೮೪೯ ಪುಸ್ತಕಗಳನ್ನು ವಿಚಾರವಾದಿಗಳು ನೋಡಿದ್ದಾರೆಯೇ ಎಂದು ಪ್ರಶ್ನಿಸಿರುವ ಇವರು, ತಾವಾದರೂ ನೋಡಿದ್ದಾರೆಯೇ ಎಂದು ಮರುಪ್ರಶ್ನೆ ಹಾಕಬೇಕಾಗುತ್ತದೆ.
ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ನೋಡುವ ಚಪಲ ಹೊಂದಿರುವ ಇವರು ಸುಳ್ಳಿನ ತಂತ್ರವನ್ನು ಹೆಣೆದು ಸತ್ಯವನ್ನು ಸಮಾಧಿ ಮಾಡುವ ಹುನ್ನಾರಕ್ಕೆ ಇಳಿದಿರುವುದು ಸ್ಪಷ್ಟವಾಗುತ್ತದೆ. ತಮ್ಮ ವಾದ ಸಮರ್ಥನೆಗೆ ಬಳಸಿಕೊಂಡಿರುವ ಮೇಲಿನ ರೀತಿಯ ಧಾರ್ಮಿಕ ನೆಲೆಯ ಗ್ರಂಥಗಳು ಪ್ರೌಢಶಾಲಾ ವಿದ್ಯಾರ್ಥಿಗಳ ಓದಿಗೆ ಎಷ್ಟು ಸಮಂಜಸ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ.
ಪ್ರತಿಕ್ರಿಯೆಯ ಕೊನೆಯಲ್ಲಿ ‘ವೈಚಾರಿಕ, ಪ್ರಗತಿಪರ, ಸುಸಂಸ್ಕೃತ ಪುಸ್ತಕಗಳನ್ನು ಆಯ್ಕೆ ಮಾಡಿಯೂ...’ ಎಂಬಂಥ ಮಾತನ್ನು ಆಡಿರುವ ಇವರು ಆಯ್ಕೆಯಾದ ಒಟ್ಟು ೮೪೯ ಪುಸ್ತಕಗಳಲ್ಲಿ ವೈಚಾರಿಕವಾದವು ಎಷ್ಟು? ಅವೈಚಾರಿಕವಾದವು ಎಷ್ಟು? ಸುಸಂಸ್ಕೃತವಾದವು ಎಷ್ಟು? ಸುಸಂಸ್ಕೃತವಲ್ಲದವು ಎಷ್ಟು? ಎಂಬುದನ್ನು ತಿಳಿಸುವರೇ?
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕೊಂಡ್ರಂತೆ ಎಂಬ ಗಾದೆಯನ್ನು ನೆನಪಿಸುತ್ತದೆ ವಸಂತಕುಮಾರ್ ಪ್ರತಿಕ್ರಿಯೆ. ಎಳೆಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಬೇಕಾಗುವ ಭೇದಭಾವ ರಹಿತ ಸರ್ವಸಮಾನತೆಯ ಆಶಯವುಳ್ಳ ಉತ್ತಮ ಅಭಿರುಚಿಯ ಪುಸ್ತಕಗಳನ್ನು ಅವರ ಓದಿಗೆ ನೀಡುವುದು ಇಂದಿನ ತುರ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.