ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಯ ಹಾದಿ ತಪ್ಪಿಸುವ ತಂತ್ರಗಾರಿಕೆ

ಚರ್ಚೆ
Last Updated 12 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಬಿ.ವಿ.ವಸಂತಕುಮಾರ್‌ ಅವರು ಒಂದು ತಾತ್ವಿಕ ಚರ್ಚೆಯನ್ನು ವೈಯ­ಕ್ತಿಕ, ವ್ಯಕ್ತಿನಿಂದನೆಯ ನೆಲೆಗೆ ಎಳೆದು ತಂದಿದ್ದಾರೆ (ಪ್ರ.ವಾ. ಅಭಿಮತ ಪುಟದ ಚರ್ಚೆ ಅಂಕಣ, ಮಾ. 11). ಈ ಕಾರಣ­ಕ್ಕಾಗಿ ಅವರ ನಡೆಯೇ ಸಂದೇಹಾಸ್ಪದ. ಹಿ.ಶಿ.ರಾಮ­ಚಂದ್ರೇ­ಗೌಡರ ಬಗ್ಗೆ ಬರೆಯುತ್ತಾ ‘... ತಮ್ಮ ಹೆಸರಿ­ನಲ್ಲಿ­ರುವ ಜಾತಿವಾಚಕವನ್ನೂ ಕಳೆದು­ಕೊಳ್ಳಲು ಸಾಧ್ಯ­­ವಾಗದವರ ವೈಚಾರಿ­ಕತೆಯೂ ಅರ್ಥ­­ವಾಯಿತು’ ಎಂದಿರು­ವುದು ಕುಹುಕದ ಮಾತಲ್ಲದೆ ಬೇರೇನೂ ಅಲ್ಲ.

ನಾನಾಗಲೀ, ಹಿ.ಶಿ.ರಾ ಅವರಾ­ಗಲೀ, ಹೊರೆಯಾಲ ದೊರೆಸ್ವಾಮಿ ಅವರಾಗಲೀ ನಮ್ಮ ಪ್ರತಿಕ್ರಿಯೆಗಳಲ್ಲಿ ಜಾತಿಯ ಪ್ರಸ್ತಾಪವನ್ನು ಮಾಡಿ­ರಲಿಲ್ಲ. ಅದು ನಮಗೆ ಪ್ರಸ್ತುತವೂ ಆಗಿರ­ಲಿಲ್ಲ. ಒಂದು ಪಕ್ಷ, ಸಂಘಟನೆ­ಯನ್ನು ಸಮರ್ಥಿಸಲು ಹೋಗಿ ತಾತ್ವಿಕ ಚರ್ಚೆಯನ್ನು ವ್ಯಕ್ತಿ­ನಿಂದನೆಯ ನೆಲೆಗೆ ತಂದು ಚರ್ಚೆಯ ಹಾದಿ ತಪ್ಪಿಸುವ ತಂತ್ರಗಾರಿಕೆ ಇದು.

ಹಂಪಣ್ಣ ಅವರ ಬಗ್ಗೆ ವಸಂತ­ಕುಮಾರ್ ತೋರಿರುವ ಅಭಿಮಾನ, ಪ್ರೀತಿಯ ಬಗೆಗೂ ನನಗೆ ಸಹಜವಾ­ಗಿಯೇ ಸಂದೇಹ ಮೂಡಿದೆ. ಹಂಪಣ್ಣ­ನವರು  ದಲಿತರು, ಬಡವರು, ಕವಿ­ಗಳು ಎಂದು ಒತ್ತಿ ಹೇಳು­ವಲ್ಲಿಯೇ ಇದು ಗೋಚರಿ­ಸುತ್ತದೆ. ಮಾತ್ರ­ವಲ್ಲ, ಇದು ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿ ಕಟ್ಟುವ ಮತ್ತು ಆ ಮೂಲಕ ತಮ್ಮ ಬೇಳೆ ಬೇಯಿಸಿ­ಕೊಳ್ಳುವ ಮೂಲ­ಭೂತವಾದಿಗಳ ಕುತಂತ್ರವೂ ಆಗಿದೆ ಎನ್ನುವುದರಲ್ಲಿ ಅನುಮಾನ­ವಿಲ್ಲ.

ನಾವು ಮೂವರೂ ದಲಿತ ವಿರೋಧಿ­­ಗಳಾಗಿರದೆ ಜೀವನದ ಉದ್ದಕ್ಕೂ ದಲಿತಪರ ಕಾಳಜಿಯನ್ನು ಬದುಕು-–ಬರಹದಲ್ಲಿ ಪ್ರಕಟಪಡಿಸುತ್ತ ಅವ­ರೊಂದಿಗೆ ಸಹ­ಚಿಂತನೆ,- ಸಹಬಾಳ್ವೆ­ಯಲ್ಲಿ ಸಾಗಿಬಂದಿ­ದ್ದೇವೆ. ಹಂಪಣ್ಣ­ನವರು ವೈಯಕ್ತಿಕವಾಗಿ ನನಗೆ ಮೂರು ದಶಕಗಳಿಂದಲೂ ಪರಿ­ಚಿತರು ಮಾತ್ರ­ವಲ್ಲ; ಪ್ರೀತಿಯ ಸ್ನೇಹಿತರೂ ಹೌದು. ಹಂಪಣ್ಣನವರ ಬಗ್ಗೆ ನಮ­ಗ್ಯಾ­ರಿಗೂ ವೈಯಕ್ತಿಕವಾಗಿ ಬೇಸರ, ಭಿನ್ನಮತ­ವಿಲ್ಲ. ಆಯ್ಕೆ ಸಮಿತಿ ಅಧ್ಯಕ್ಷ­ರೊಬ್ಬರು ಮಾತ್ರ ಪುಸ್ತಕಗಳನ್ನು ಆಯ್ಕೆ ಮಾಡು­ವುದಿಲ್ಲ, ಸದಸ್ಯರೂ ಇಲ್ಲಿ ಭಾಗಿಗಳಾಗಿ­ರುತ್ತಾರೆಂಬ ಅರಿವೂ ನಮಗಿದೆ. ಆದರೆ ಆಯ್ಕೆ ವಿಧಾ­ನದ ಬಗೆಗೆ ತಾತ್ವಿಕ ವಿರೋಧ­ವಿದೆ. ಅದನ್ನು ನಾವು ವ್ಯಕ್ತಪಡಿಸಿದ್ದೇವೆ.

ವಸಂತಕುಮಾರ್ ತಮ್ಮ ವಾದದ ಸಮರ್ಥನೆಗಾಗಿ ‘ವೈದಿಕ ಧರ್ಮದಲ್ಲಿ ಆತ್ಮ ಮತ್ತು ಬ್ರಹ್ಮ’, ‘ತಂತ್ರಸಾಧನೆ’, ‘ವೇದದ ಬೆಳಕಿನಲ್ಲಿ ಆಧುನಿಕ ಸವಾಲುಗಳ ನಿರ್ವ­ಹಣೆ’, ‘ಭಗವದ್ಗೀತೆ ಬೆಳಕು ನೀಡುವುದೇ?’- ಎಂಬ ನಾಲ್ಕು ಧರ್ಮಸಂಬಂಧಿ ಪುಸ್ತಕ­ಗಳನ್ನು ಮಾತ್ರ ಇಟ್ಟುಕೊಂಡು ಚರ್ಚಿಸಿ­ರುವುದು ಇವರ ಮಿತಿ ಮತ್ತು ಇಬ್ಬಂದಿ­ತನವನ್ನು ತೋರಿಸುತ್ತದೆ. ಸಮಿತಿ ಆಯ್ಕೆ ಮಾಡಿರುವ ೮೪೯ ಪುಸ್ತಕಗಳನ್ನು ವಿಚಾರ­ವಾದಿಗಳು ನೋಡಿದ್ದಾರೆಯೇ ಎಂದು ಪ್ರಶ್ನಿಸಿರುವ ಇವರು, ತಾವಾದರೂ ನೋಡಿ­ದ್ದಾರೆಯೇ ಎಂದು ಮರುಪ್ರಶ್ನೆ ಹಾಕಬೇಕಾಗುತ್ತದೆ.

ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ನೋಡುವ ಚಪಲ ಹೊಂದಿರುವ ಇವರು ಸುಳ್ಳಿನ ತಂತ್ರವನ್ನು ಹೆಣೆದು ಸತ್ಯವನ್ನು ಸಮಾಧಿ ಮಾಡುವ ಹುನ್ನಾರಕ್ಕೆ ಇಳಿದಿರುವುದು ಸ್ಪಷ್ಟ­ವಾ­ಗುತ್ತದೆ. ತಮ್ಮ ವಾದ ಸಮರ್ಥನೆಗೆ ಬಳಸಿ­ಕೊಂಡಿರುವ ಮೇಲಿನ ರೀತಿಯ ಧಾರ್ಮಿಕ ನೆಲೆಯ ಗ್ರಂಥಗಳು ಪ್ರೌಢ­ಶಾಲಾ ವಿದ್ಯಾರ್ಥಿಗಳ ಓದಿಗೆ ಎಷ್ಟು ಸಮಂಜಸ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ.

ಪ್ರತಿಕ್ರಿಯೆಯ ಕೊನೆಯಲ್ಲಿ ‘ವೈಚಾರಿಕ, ಪ್ರಗತಿಪರ, ಸುಸಂಸ್ಕೃತ ಪುಸ್ತಕಗಳನ್ನು ಆಯ್ಕೆ ಮಾಡಿಯೂ...’ ಎಂಬಂಥ ಮಾತನ್ನು ಆಡಿರುವ ಇವರು ಆಯ್ಕೆ­ಯಾದ ಒಟ್ಟು ೮೪೯ ಪುಸ್ತಕಗಳಲ್ಲಿ ವೈಚಾ­ರಿಕವಾದವು ಎಷ್ಟು? ಅವೈಚಾರಿಕ­ವಾ­ದವು ಎಷ್ಟು? ಸುಸಂಸ್ಕೃತವಾದವು ಎಷ್ಟು? ಸುಸಂಸ್ಕೃತ­ವಲ್ಲದವು ಎಷ್ಟು? ಎಂಬುದನ್ನು ತಿಳಿಸುವರೇ?

ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕೊಂಡ್ರಂತೆ ಎಂಬ ಗಾದೆ­ಯನ್ನು ನೆನಪಿಸುತ್ತದೆ ವಸಂತಕುಮಾರ್ ಪ್ರತಿಕ್ರಿಯೆ. ಎಳೆಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಬೇಕಾಗುವ ಭೇದಭಾವ ರಹಿತ ಸರ್ವಸಮಾನತೆಯ ಆಶಯವುಳ್ಳ ಉತ್ತಮ ಅಭಿರುಚಿಯ ಪುಸ್ತಕಗಳನ್ನು ಅವರ ಓದಿಗೆ ನೀಡುವುದು ಇಂದಿನ ತುರ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT