ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗೆ ಮೋಕ್ಷ ಎಂದು?

ಅಕ್ಷರ ಗಾತ್ರ

ಕರ್ನಾಟಕದಲ್ಲಿ ಆಗ ಎಂ.ವೀರಪ್ಪ ಮೊಯಿಲಿ ಅವರ ಸರ್ಕಾರ. ಅವರ ಸರ್ಕಾರದಲ್ಲಿ ಎಸ್.ಎಂ.­ ಕೃಷ್ಣ ಅವರು ಪ್ರಮುಖ ಖಾತೆಯನ್ನು ಹೊಂದಿದ ಸಚಿವರಾಗಿದ್ದರು. ಭೀಮಸಮುದ್ರ­ದಲ್ಲಿ ಮಾಜಿ ಶಾಸಕರಾದ ಶಿವಪ್ಪನವರ ಸ್ಮರ­ಣಾ­ರಾಧನೆಗೆ ಕೃಷ್ಣ ಮತ್ತು ಕೇಂದ್ರ ರೈಲ್ವೆ ಸಚಿವ­ರಾಗಿದ್ದ ಜಾಫರ್ ಷರೀಫ್‌ ಅವರು ಭಾಗವಹಿ­ಸಿ­ದ್ದರು.

ಆ ಖಾಸಗಿ ಕಾರ್ಯಕ್ರಮದಲ್ಲಿ ನಾನು ಈ ಭಾಗದ (ಮಧ್ಯ ಕರ್ನಾಟಕ) ಒಂದು ಸಮಸ್ಯೆ­ಯನ್ನು ಪ್ರಸ್ತಾಪಿಸಿದೆ. ಆಗಿನ್ನೂ ಯಾವುದೇ ನೀರಾ­ವರಿ ಹೋರಾಟ ಸಮಿತಿ ರಚನೆ ಆಗಿರಲಿಲ್ಲ. ನಾನ­ದನ್ನು ಪ್ರಸ್ತಾಪಿಸುತ್ತ - ಈ ಭಾಗದ ಬಹು­ಜನರ ಮತ್ತು ಬಹುದಿನಗಳ ಬೇಡಿಕೆಯಾಗಿ­ರುವ ತುಂಗ­ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೊಳಿ­ಸಲು ಆಗ್ರಹಿಸಿದೆ. ಈ ವಿಚಾರದಲ್ಲಿ ಸರ್ಕಾರವು ನಿಧಾನ ಮಾಡಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆಂಬ ಎಚ್ಚರಿಕೆ­ಯನ್ನು ನೀಡಿದೆ.

ಈ ಮಾತಿಗೆ ಪ್ರತಿಕ್ರಿಯಿಸಿದ ಕೃಷ್ಣರವರು - ‘ಸ್ವಾಮೀಜಿಯವರೇ, ಸರ್ಕಾರ ಈ ಯೋಜನೆಯ ಬಗೆಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ತಾವು ಬೀದಿಗೆ ಇಳಿಯದಂತೆ ನೋಡಿಕೊಳ್ಳುತ್ತದೆ’ ಎಂದರು. ಅದೇ ಅವಧಿ­ಯಲ್ಲಿ ಪ್ರಧಾನಮಂತ್ರಿ­ಗಳಾದ ಪಿ.ವಿ. ನರಸಿಂಹ­ರಾವ್ ಅವರು ಶ್ರೀಮಠ­ವನ್ನು ಸಂದರ್ಶಿಸಿದರು. ಅವರಿಗೂ ನಾನು- ನೀರಾ­ವರಿ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಮನವಿ ಪತ್ರವನ್ನು ನೀಡಿದೆ. ಯಾವುದೇ ಖಾಸಗಿ ಮಾತುಕತೆಯನ್ನು ಅವರೊಂದಿಗೆ ಆಡಲಿಲ್ಲ.

ನಿಜಲಿಂಗಪ್ಪನವರು ಈ ಭಾಗದವರಾಗಿದ್ದು­ಕೊಂಡು ಮುಖ್ಯಮಂತ್ರಿಯಾಗಿಯೂ ನೀರಾವರಿ ಯೋಜನೆಯನ್ನು ಜಾರಿಗೊಳಿಸಲಿಲ್ಲವೆಂಬ ಆರೋಪ ಕೆಲವರದು. ಆ ಕಾಲದಲ್ಲಿ ಯಾವುದು ತೊಡಕಾಗಿತ್ತೊ ತಿಳಿಯದು. ತಾನು ಇದೇ ಭಾಗ­ದಲ್ಲಿ ಜನಿಸಿದ ಮತ್ತು ಆಯ್ಕೆಯಾದ ವ್ಯಕ್ತಿ­ಯೆಂದು, ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟರೆಂಬ ಸಂಕುಚಿತ ಭಾವನೆ ಬರದಿರಲೆಂದು ಹಾಗೆ ನಡೆದುಕೊಂಡಿದ್ದಿರಬಹುದು.

ಅವರ ನಂತ­ರದ ರಾಜಕಾರಣದಲ್ಲಿ ಏನೆಲ್ಲ ಸಂಕುಚಿತ ಹಾಗೂ ಸೀಮಿತವಾದ ಭಾವನೆಗಳು ಕೆಲಸ ಮಾಡುತ್ತ ಬಂದಿವೆ. ಇತ್ತೀಚಿನ ರಾಜಕಾರಣದಲ್ಲಿ ಅದ­ರಲ್ಲೂ ವಿವಿಧ ಖಾತೆಗಳನ್ನು ನಿಭಾಯಿಸುತ್ತ ಬಂದಿರುವವರಿಗೆ ತಮ್ಮ ಮತಕ್ಷೇತ್ರ ಮಾತ್ರ ಕಂಡಿದೆ. ಇಡೀ ರಾಜ್ಯಕ್ಕೆ ಸಂಬಂಧಿಸಿದ ಯೋಜನೆ­ಗಳನ್ನು ಜಾರಿಗೊಳಿಸದೆ ತಮ್ಮ ಮತಕ್ಷೇತ್ರ ಮತ್ತು ತಮ್ಮ ಜಿಲ್ಲೆಗೆ ಸಂಬಂಧಿಸಿದ ಯೋಜನೆಗಳಿಗೆ ಆದ್ಯತೆ ನೀಡುತ್ತ ಬರಲಾಗಿದೆ. ಇಲ್ಲಿ ಸಮಗ್ರ ದೃಷ್ಟಿ­ಕೋನದ ಕೊರತೆ ಎದ್ದುಕಾಣುತ್ತದೆ. ಮತ­ಕ್ಷೇತ್ರದ ಕುಂದು ಕೊರತೆಗಳತ್ತ ಗಮನಹರಿಸ­ಬೇಕಾದುದು ಪ್ರತಿಯೊಬ್ಬ ಜನಪ್ರತಿನಿಧಿಯ ಆದ್ಯಕರ್ತವ್ಯ.

ಅದರೊಟ್ಟಿಗೆ ಬೇರೆ ಮತಕ್ಷೇತ್ರ ಮತ್ತು ಜಿಲ್ಲೆ­ಗಳತ್ತಲೂ ಗಮನಹರಿಸದಿದ್ದರೆ, ಒಂದು ಜಿಲ್ಲೆಗೆ ಮಾತ್ರ ಆತ ಸಚಿವನೆನಿಸಿ­ಕೊಳ್ಳ­ಬೇಕಾಗುತ್ತದೆ. ಯಾವುದೇ ಖಾತೆಯನ್ನು ನಿರ್ವ­ಹಿಸುವ ಜನಪ್ರತಿ­ನಿಧಿಗೆ ಸಮಗ್ರ ದೃಷ್ಟಿ­ಕೋನದ ಬಗೆಗೆ ಅರಿವು ಇರಬೇಕಾಗುತ್ತದೆ. ಅಂಥ ಅರಿವನ್ನು ಹೊಂದಿದ­ವರು ಮಾತ್ರ ಇಡೀ ಸಮೂಹವನ್ನು  ಪ್ರತಿನಿಧಿಸ­ಬಲ್ಲ­ವರಾಗಿರುತ್ತಾರೆ. ಇಲ್ಲದಿದ್ದರೆ, ಅವನು ಒಂದು ಜಾತಿಯ ಅಥವಾ ಒಂದು ಮತಕ್ಷೇತ್ರದ ಪ್ರತಿನಿಧಿ  ಅನಿಸಿಕೊಳ್ಳು­ತ್ತಾನೆ.

ನಿಜಲಿಂಗಪ್ಪನವರ ಉದ್ದೇಶ, ತನ್ನ ಕ್ಷೇತ್ರದ ಯೋಜನೆಯನ್ನು ಮುಂಬರುವ ಸರ್ಕಾರ ಜಾರಿ­ಗೊಳಿಸಲೆಂಬ ನಿಸ್ವಾರ್ಥತೆಯು ಇಂದಿನ ರಾಜಕಾರಣಿ­ಗಳಿಗೆ ಒಂದು ಮಾದರಿ. ತಮ್ಮ ಕ್ಷೇತ್ರಕ್ಕೇ ನೂರಾರು ಕೋಟಿ ಖರ್ಚು ಮಾಡಿ, ಒಂದು ಕ್ಷೇತ್ರವನ್ನು ಕಾಯ್ದುಕೊಳ್ಳುವ ಹಿತಾಸ­ಕ್ತರಿಗೆ ನಿಜಲಿಂಗಪ್ಪ­ನವರ ಸೂಕ್ಷ್ಮತೆ ಅರ್ಥವಾಗ­ಬೇಕಾಗುತ್ತದೆ.

ಜೆ.ಎಚ್.ಪಟೇಲರು ಮುಖ್ಯಮಂತ್ರಿ­ಯಾ­ದಾಗ ಅವರು ಹುಟ್ಟಿದ ಊರಿಗೆ ಹೋಗುವ ರಸ್ತೆಯು ತುಂಬ ಕೆಟ್ಟುಹೋಗಿತ್ತು. ನಾವೆಲ್ಲ ಆ ಭಾಗದಲ್ಲಿ ಸಂಚರಿಸುವಾಗ ತಮ್ಮದೇ ಊರಿನ ಮುಖ್ಯಮಂತ್ರಿ ಇದ್ದರೂ ತಮ್ಮ ಊರಿನ ರಸ್ತೆಗಳು ಸುಧಾರಣೆ ಆಗಿಲ್ಲವೆಂಬ ಭಾವನೆಗಳು ವ್ಯಕ್ತವಾಗುತ್ತಿತ್ತು.  ಆದರೆ ತಮ್ಮ ಊರಿಗೆ ರಸ್ತೆ ಮಾಡಿಸಲು ತಾವು ಮುಖ್ಯಮಂತ್ರಿ ಆಗಿದ್ದೇನೆಂದು ಮುಖ್ಯಮಂತ್ರಿಗಳು  ಭಾವಿಸುವುದೂ ಸರಿಯಲ್ಲ. ಎಲ್ಲ ಸಂದರ್ಭ­ದಲ್ಲೂ ಈ ಧೋರಣೆಯು ಸರಿಯಲ್ಲ.

ನಿಜ­ಲಿಂಗ­ಪ್ಪ­ನವರ ಆಡಳಿತವು ಬೇರೆ ಬೇರೆ ಭಾಗದ ಯೋಜ­­ನೆಗಳನ್ನು ಜಾರಿಗೊಳಿಸಿದೆ. ಅದರಂತೆ ಕರ್ನಾಟಕ­ವನ್ನು ಆಳಿದವರು ನಿಜ­ಲಿಂಗಪ್ಪನವರ ಕ್ಷೇತ್ರವನ್ನು, ಜನ್ಮಭೂಮಿ­ಯನ್ನು ಮರೆತಂತೆ ಕಾಣುತ್ತಿದೆ. ಯೋಜನೆಯನ್ನು ಜಾರಿಗೊಳಿಸಿ  ಅವರಿಗೆ ಹೆಚ್ಚಿನ ಗೌರವವನ್ನು ಸಲ್ಲಿಸ­ಬಹುದಿತ್ತು. ಅಂಥ ಉದಾರ­ತನ ಬಂದು­ಬಿಟ್ಟರೆ ಎಲ್ಲರೂ ನಿಜಲಿಂಗಪ್ಪನವರೇ ಆಗಿಬಿಡು­ತ್ತಾರೆ. ದೇವರಾಜ ಅರಸು ಅವರಲ್ಲಿ ಸಮಗ್ರ ದೃಷ್ಟಿ­ಕೋನವು ಕೆಲಸ ಮಾಡಿದೆ. ಅವರೇನು ದಲಿತ, ಶೋಷಿತ ವರ್ಗಕ್ಕೆ ಸೇರಿದವರಲ್ಲ. ಆದರೂ ಅವರು ಸಮಗ್ರತೆಯನ್ನು ಮೆರೆದು, ಬಹಳ ಜನರಿಗೆ ಆದರ್ಶವಾಗಿ ನಿಲ್ಲುತ್ತಾರೆ.

ನಿಜಲಿಂಗಪ್ಪನವರ ಕಾಲದಿಂದಲೂ ನನೆಗುದಿಗೆ ಬಿದ್ದಿದೆ ನೀರಾವರಿ ಯೋಜನೆ. ಜೆ.ಎಚ್.­ಪಟೇಲರು ಮುಖ್ಯಮಂತ್ರಿ ಆದಾಗ ಶ್ರೀಮಠದ ಸಮಾ­­ರಂಭಕ್ಕೆ ಬಂದಿದ್ದರು. ನಾನು ಅವರಿ­ಗಿಂತಲೂ ಮೊದಲು ಮಾತನಾಡಿ ನೀರಾವರಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿದಾಗ ಅವರು - ಯಾರು ನೀರಾವರಿ ಯೋಜನೆ ಜಾರಿ ಆಗ­ಬೇಕೆನ್ನುತ್ತಾರೋ, ಅವರೇ ನಾಳೆಯಿಂದ ಸಲಿಕೆ-–ಗುದ್ದಲಿ ತೆಗೆದುಕೊಂಡು ನೆಲ ಅಗೆಯಲು ಹೋಗಲಿ ಎಂಬ ಉಡಾಫೆಯ ಮಾತನಾಡಿದರು.

ಮುಂದೆ ಅವರ ಸರ್ಕಾರವೇ ಆತುರಾತುರವಾಗಿ ಯೋಜನೆಗೆ ಅಡಿಗಲ್ಲು ಹಾಕುವ ನಾಟಕ­ವಾ­ಡಿತು. ಎಚ್.ಡಿ. ದೇವೇಗೌಡರು ಪ್ರಧಾನ­ಮಂತ್ರಿ­­ಯಾ­ಗಿದ್ದ ದಿನಗಳಲ್ಲಿ ಅವರಲ್ಲಿಗೆ ಹೋಗಿ ನೀರಾವರಿ ಯೋಜನೆಯನ್ನು ಜಾರಿಗೊಳಿಸ­ಬೇಕೆಂದು ಒತ್ತಾಯಿಸಲಾಯಿತು. ಈ ನಡುವೆ ನೀರಾ­ವರಿ ಹೋರಾಟವು ರೂಪುಗೊಂಡು, ಈ ಭಾಗದ ರೈತಮುಖಂಡರು ಮತ್ತು ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಹೋರಾಟ ಮುಂದು­ವ­ರಿ­ಯುತ್ತ ಬಂದಿದ್ದು, ಬಂಜಗೆರೆ ಜಯಪ್ರಕಾಶ್ ಮತ್ತಿತರರು ಮುನ್ನಡೆಸಿದ್ದಾರೆ.

ಕೋದಂಡ­ರಾಮಯ್ಯ­ನವರ ನೇತೃತ್ವದಲ್ಲಿ ಅನೇಕ ಒತ್ತಾಯ­ಗಳನ್ನು ಮಾಡುತ್ತ ಬರಲಾಗಿದೆ. ಅವರು ರಾಜ­ಕಾರಣಕ್ಕೆ ಹೋದ ಸಂದರ್ಭದಲ್ಲಿ ನನಗೆ ಕೆಲವರು ನೀರಾವರಿ ಯೋಜನೆ ಹೋರಾಟದ ಅಧ್ಯಕ್ಷ­ರಾಗುವಂತೆ ವಿನಂತಿಸಿದಾಗ, ‘ಎಂ.ಜಯಣ್ಣ­ನವರು ಅಧ್ಯಕ್ಷರಾಗಲಿ, ನನಗೆ ಯಾವ ಪದ­ವಿಯೂ ಬೇಡ. ಹೋರಾಟದ ಹೊಣೆಯನ್ನು ಹೊತ್ತು­ಕೊಳ್ಳುತ್ತೇನೆ’ ಎಂದು ಹೇಳಿ, ಅದರಂತೆ ನಡೆದು­ಕೊಳ್ಳುತ್ತ ಬಂದಿದ್ದೇನೆ. ಜಯಣ್ಣನವರ ಮುಂದಾ­ಳುತನದಲ್ಲಿ ಎಸ್.ಎಂ. ಕೃಷ್ಣ ಅವರನ್ನು ಭೇಟಿ­ಮಾಡಿ ಯೋಜನೆಗೆ ಹಣ­ವನ್ನು ಬಿಡುಗಡೆ ಮಾಡಲು ಒತ್ತಾಯಿಸ­ಲಾ­ಯಿತು.

ಎಚ್.ಡಿ. ಕುಮಾರಸ್ವಾಮಿ ಅವರನ್ನು ಖುದ್ದು ವಿಧಾನ­ಸೌಧ­ದಲ್ಲಿ ಭೇಟಿಯಾಗಿ ಯೋಜ­­ನೆಗೆ ಬಜೆಟ್‌­ನಲ್ಲಿ ಹೆಚ್ಚಿನ ಹಣವನ್ನು ಮೀಸಲಿ­ರಿಸಲು ಕೋರ­ಲಾ­ಯಿತು. ಇಬ್ಬ­ರಿಂದಲೂ ಸಕಾ­ರಾತ್ಮಕವಾದ ಪ್ರತಿ­ಕ್ರಿಯೆ. ಬಿ.ಎಸ್.­ ಯಡಿಯೂ­ರಪ್ಪ­ನವರ ಸರ್ಕಾ­­ರಕ್ಕೂ   ಈ ಬಗ್ಗೆ ಪ್ರಸ್ತಾಪಿ­ಸಿ­ದಾಗ ಬಜೆಟ್‌­ನಲ್ಲಿ ಯೋಜ­ನೆಗೆಂದು ಹಣ­ವನ್ನು ತೆಗೆದಿಡ­ಲಾ­ಯಿತು.

ನಂತರ ಕಾಮಗಾರಿಗೆ ಚಾಲನೆ ದೊರ­ಕಿದೆ. ಸಿದ್ದರಾಮಯ್ಯ­ನವರ ನೇತೃತ್ವದ ಈಗಿನ ಸರ್ಕಾರವು ಈ ಯೋಜನೆಯ ಬಗೆಗೆ ಹೆಚ್ಚಿನ ಕಾಳಜಿಯನ್ನು ಹೊಂದಿದ್ದು, ಕೇಂದ್ರ ಸರ್ಕಾರದ ಸಂಗಡ ಮಾತನಾಡಿ ಅರಣ್ಯ ಒತ್ತು­ವರಿ ಬಗೆಗೆ  ಅನುಮೋದನೆ   ತೆಗೆದು­ಕೊಳ್ಳ­ಬೇಕಾಗಿದೆ. ಅದರ ಪ್ರಕ್ರಿಯೆ ಪೂರ್ಣಗೊಂಡು ಮತ್ತಷ್ಟು ಹಣ­ವನ್ನು ಬಿಡುಗಡೆಗೊಳಿಸಿದರೆ, ಹೆಚ್ಚೆಂದರೆ ನಾಲ್ಕು ವರ್ಷ; ತ್ವರಿತಗತಿಯಲ್ಲಿ ಕಾಮಗಾರಿಗಳು ನಡೆ­ದರೆ, ಒಂದೂವರೆ ವರ್ಷದಲ್ಲೇ ಯೋಜನೆಯು ಪೂರ್ಣವಾಗುವ ಸಾಧ್ಯತೆಯಿದೆ.

ಈಗಾಗಲೇ ಶೇ ೪೦ರಷ್ಟು ಕಾಮಗಾರಿಯು ಪೂರ್ಣಗೊಂಡಿದ್ದು, ಶೇ ೬೦ರಷ್ಟು ಬಾಕಿ ಇದೆ. ವಿಳಂ­ಬವಾದಷ್ಟೂ ಕಾಮಗಾರಿಯ ವೆಚ್ಚವು ಅಧಿಕ­­ಗೊಳ್ಳುತ್ತದೆ. ಈ ಕಾರಣದಿಂದ ಯೋಜ­ನೆಯು ತ್ವರಿತಗತಿಯಲ್ಲಿ ನಡೆದು, ಮುಕ್ತಾಯ­ವಾಗಲೆಂಬ ಆಶಯವು ಈ ಭಾಗದ ಜನರು, ನೀರಾವರಿ ಹೋರಾ­ಟಗಾರರು, ಧಾರ್ಮಿಕ ನೇತಾ­ರರು ಮತ್ತು ಜನಪ್ರತಿನಿಧಿಗಳ ಅಪೇಕ್ಷೆ­ಯಾಗಿ­­ರು­ತ್ತದೆ. ಇತ್ತೀಚೆಗಷ್ಟೇ ಕಾಮಗಾರಿ ನಡೆದಿರುವ ೪-೫ ಜಾಗ­ಗಳಿಗೆ ನೀರಾವರಿ ಹೋರಾ­ಟ­ಗಾರರು ಮತ್ತು ಮಾಧ್ಯ­ಮದವ­ರೊಟ್ಟಿಗೆ ಭೇಟಿ ನೀಡಿದಾಗ ಮೇಲಿನ ಅಂಶವು ಕಂಡುಬಂದಿತು.

ನೀರು ಮಾನವನ ಹಕ್ಕು, ಜೀವವಾಹಿನಿ. ಬೇರೆ ಪ್ರಾಂತ್ಯದವರಿಗೆ ಸಿಕ್ಕಂತಹ ನೀರಿನ ಹಕ್ಕು ಈ ಪ್ರಾಂತ್ಯದವರಿಗೂ ಸಿಗುವಂತಾಗಬೇಕು. ಅದರ ಸಮಾನ ಹಂಚಿಕೆ ಆಗಬೇಕು. ಆಳಿದ ಸರ್ಕಾರ­ಗಳು ಬಯಲುಸೀಮೆ ಜಿಲ್ಲೆಗಳನ್ನು ಇಲ್ಲಿಯ­ವರೆಗೆ ಯಾಕೆ ತಾತ್ಸಾರ ಮಾಡುತ್ತ ಬಂದಿವೆ? ಈ ಭಾಗದ ಜನರು ಕೂಡ ಎಚ್ಚೆತ್ತು­ಕೊಳ್ಳಬೇಕಾಗು­ತ್ತದೆ. ಯೋಜನೆಯನ್ನು ಪೂರ್ಣಗೊಳಿಸಿದ­ವ­ರನ್ನು ಹಾರ್ದಿಕವಾಗಿ ಸ್ವಾಗತ ಮಾಡೋಣ; ಇಲ್ಲದಿದ್ದರೆ ಹೋರಾಟಕ್ಕೆ ಸಿದ್ಧರಾಗೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT