ಪ್ರಜಾಪ್ರಭುತ್ವ ದೇಶದಲ್ಲಿ ಮೌಲ್ಯಗಳನ್ನು ಅರಿತು ಬಾಳುವುದೇ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಭೂಮಿಯ ಋಣವನ್ನು ನಾವು ತೀರಿಸಬೇಕಿದೆ. ಗ್ರಾಮೀಣ ಪ್ರದೇಶದ ಎಲ್ಲರೂ ಒಂದಾಗಿ ದೋಣಿ ಮೂಲಕ ನಗರವನ್ನು ತಲುಪುವ ಕಾಲವಿತ್ತು. ಕಷ್ಟದ ದಿನಗಳಲ್ಲಿ ಎಲ್ಲರೂ ಪರಸ್ಪರ ಕೊಡುಕೊಳ್ಳುವಿಕೆಯಿಂದ ಜೀವನ ನಡೆಸುವುದು ನಮ್ಮ ಪದ್ಧತಿ. ಮನುಷ್ಯತ್ವ ಒಂದೇ ಧರ್ಮ. ಎಲ್ಲರೂ ಒಗ್ಗಟ್ಟಾಗಿರುವುದೇ ಸಮಾಜದ ಸುಂದರ ನೋಟ. ಬಡ ಮಕ್ಕಳಿಗೆ ಶಿಕ್ಷಣ ನೀಡುವ, ಸಾಮಾಜಿಕ ಮೌಲ್ಯಗಳನ್ನು ಬಿತ್ತುವುದು ನಮ್ಮೆಲ್ಲರ ಆದ್ಯತೆಯಾಗಬೇಕು.ಹರೇಕಳ ಹಾಜಬ್ಬ, ಅಕ್ಷರಸಂತ, ಪದ್ಮಶ್ರೀ ಪುರಸ್ಕೃತರು
ಧರ್ಮದ ಸಮಸ್ಯೆ ಇಲ್ಲ; ಧರ್ಮ ಇಲ್ಲಿ ಮುಖವಾಡ ಅಷ್ಟೇ. ಹಿಂದೂಗಳಲ್ಲಿ ಕೋಮುವಾದಿಗಳು ಇದ್ದಂತೆ ಮುಸ್ಲಿಮರಲ್ಲಿಯೂ ಇದ್ದಾರೆ. ಇದು ಆಗಬಾರದಿತ್ತು. ಆದರೆ, ಇದು ದೊಡ್ಡ ದುರಂತ. ಮುಸ್ಲಿಂ ಕೋಮುವಾದ ಬೆಳೆದಂತೆ ಹಿಂದು ಕೋಮುವಾದ ಬಲವಾಗುತ್ತದೆ. ಇಲ್ಲಿ ಜಾತ್ಯತೀತ ಪಕ್ಷಗಳಿಗೆ ಬದ್ಧತೆ ಇಲ್ಲ. ಬಿಜೆಪಿಯ ಹಿಂದುತ್ವವನ್ನು ಧೈರ್ಯವಾಗಿ ಪ್ರಶ್ನಿಸುವ ನಾಯಕತ್ವ ಇಲ್ಲ. ಪ್ರಗತಿಪರರ ಧ್ವನಿ ಕ್ಷೀಣಿಸಿದೆ. ಎಲ್ಲವೂ ಕೋಮುವಾದೀಕರಣಗೊಂಡಿದೆ. ಇದು ಕೋಮುವಾದಿಗಳು ಬೆಳೆಯಲು ಕಾರಣವಾಗುತ್ತಿದೆ. ಜಾತ್ಯತೀತರು ಮತ್ತು ಬುದ್ಧಿಜೀವಿಗಳು ಬಲಗೊಳ್ಳಬೇಕು. ಎರಡೂ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬಲ್ಲ ರಾಜಕೀಯ ನಾಯಕತ್ವ ಬೆಳೆಯಬೇಕು. ಸಾಹಿತ್ಯ ಮತ್ತು ಶೈಕ್ಷಣಿಕ ವಲಯ ಸಂವಿಧಾನಬದ್ಧವಾಗಿ ಇದ್ದರೆ ಸಾಕು. ಇಲಾಖೆಗಳು ಸಮರ್ಥವಾಗಿ ಕೆಲಸ ಮಾಡಬೇಕು. ಕರಾವಳಿಯ ಸೌಹಾರ್ದ ಮರುಸ್ಥಾಪನೆಗೆ ತಕ್ಷಣದ, ದೂರಗಾಮಿ ಕಾರ್ಯಯೋಜನೆ ಬೇಕು.ಮೊಹಮ್ಮದ್ ಕುಂಞಿ, ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮಿ ಹಿಂದ್
ಇಲ್ಲಿ ವಿದ್ಯಾರ್ಥಿ ಚಳವಳಿ ಬಲಾಢ್ಯವಾಗಿತ್ತು. ಎಸ್ಎಫ್ಐ, ಎನ್ಎಸ್ಯುಐ, ಡಿವೈಎಫ್ಐ ಮತ್ತು ಇವುಗಳ ವಿರುದ್ಧ ಸಿದ್ಧಾಂತದ ಎಬಿವಿಪಿ ಪ್ರಬಲವಾಗಿದ್ದವು. ಹೀಗಾಗಿ ವೈಚಾರಿಕತೆ, ಸಾಮರಸ್ಯ ಎಂಬುದು ಸಮತೋಲನವಾಗುತ್ತಿತ್ತು. ಶೈಕ್ಷಣಿಕ ವ್ಯವಸ್ಥೆ ವ್ಯಾಪಾರೀಕರಣಗೊಂಡ ಕಾರಣ ವಿದ್ಯಾರ್ಥಿ ಸಂಘಟನೆಗಳು ದುರ್ಬಲಗೊಂಡವು. ಒಂದು ಕಡೆ ಮಾತ್ರ ಯುವಕರನ್ನು ಸೆಳೆಯಲಾಯಿತು. ಯುವಕರಲ್ಲಿ ಮತೀಯ ಭಾವನೆ ಹೆಚ್ಚಿತು. ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಬೆಳೆಸಬೇಕಿದೆ. ಇಲ್ಲಿ ಅವೈದಿಕ ಪದ್ಧತಿ ಇತ್ತು. ದೈವಾರಾಧನೆಯಲ್ಲಿ ಧರ್ಮಗಳ ಕಟ್ಟುಪಾಡು ಇರಲಿಲ್ಲ. ಇದು ಕೋಮುಸಾಮರಸ್ಯಕ್ಕೆ ಕಾರಣವಾಗಿತ್ತು.ಗಣನಾಥ ಎಕ್ಕಾರು, ನಿವೃತ್ತ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.