ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಘಟಕ ಮತ್ತು ಜಿಲ್ಲೆಯ ಅಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಆದರೆ ಶೇ 80ರಷ್ಟು ಮಂದಿ ಐವತ್ತು ವರ್ಷ ದಾಟಿರುವ ಮತದಾರರೇ ಇರುವ ಪರಿಷತ್ತಿಗೆ, ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಚುನಾವಣೆ ನಡೆಸುವುದು ಸೂಕ್ತವೇ?
ಪರಿಷತ್ತಿನ ಆಜೀವ ಸದಸ್ಯರು ಮತ ಚಲಾಯಿಸಲು ಹೆಚ್ಚಾಗಿ ತಾಲ್ಲೂಕು ಕೇಂದ್ರಕ್ಕೆ ಬರಬೇಕಿದೆ. ಬಹುತೇಕರ ವಾಸಸ್ಥಳ ಬದಲಾಗಿದ್ದರೂ ಮತದಾರರ ಹೆಸರಿನ ಪಟ್ಟಿ ಇರುವುದು ಸದಸ್ಯತ್ವ ಪಡೆದಾಗ ಕೊಟ್ಟ ವಿಳಾಸದಲ್ಲಿಯೇ. ಹೀಗಾಗಿ ಮತದಾನ ಮಾಡುವವರು ಬೇರೆ ಬೇರೆ ಕಡೆ ಹಂಚಿಹೋಗಿದ್ದಾರೆ. ಕೋವಿಡ್ ರಣವೇಗದಲ್ಲಿ ಹಬ್ಬುತ್ತಿರುವ ಈ ಸಮಯದಲ್ಲಿ ನಿಗದಿತ ಸ್ಥಳಕ್ಕೆ ಬಂದು ಮತ ಚಲಾಯಿಸುವುದು ಅವರಿಗೆ ಕಷ್ಟವಾಗುತ್ತದೆ. ಹೀಗಾಗಿ ಕೊರೊನಾ ಸೋಂಕಿನ ಸ್ಥಿತಿಯು ರಾಜ್ಯದಲ್ಲಿ ಒಂದು ಹಂತಕ್ಕೆ ಬಂದು ನಿಲ್ಲುವವರೆಗಾದರೂ ಚುನಾವಣೆಯನ್ನು ಮುಂದೂಡುವುದು ಸೂಕ್ತ.