ನವದೆಹಲಿ, ಫೆ, 4 (ಪಿಟಿಐ)– ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸುವ ಬಗ್ಗೆ ಪ್ರಧಾನಿ ಪಿ.ಎ. ನರಸಿಂಹರಾವ್ ಅವರು ಒಂದೆರಡು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಅದನ್ನು ತಕ್ಷಣವೇ ಚುನಾವಣಾ ಆಯೋಗಕ್ಕೆ ತಿಳಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.
ಗಲಭೆಗ್ರಸ್ತ ರಾಜ್ಯದಲ್ಲಿ ಚುನಾವಣೆ ನಡೆಸುವ ಬಗ್ಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಹಾಗೂ ಗೃಹ ಸಚಿವರ ನಡುವೆ ಎರಡು ದಿನಗಳ ಹಿಂದೆ ನಡೆದ ಸಭೆಯ ಹಿನ್ನೆಲೆಯಲ್ಲಿ ಇಂದಿನ ಬೆಳವಣಿಗೆ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ಅಂತಿಮ ನಿರ್ಧಾರವನ್ನು ಪ್ರಧಾನಿಯವರಿಗೆ ಬಿಡಲಾಗಿದೆ.
ಮೂರು ದಶಕದ ಕನಸು ನನಸಾಗುವ ಭರವಸೆ?
ಬೆಂಗಳೂರು, ಫೆ.4– ಬರಪೀಡಿತ ಜಿಲ್ಲೆಗಳಾದ ವಿಜಾಪುರ, ಕಲ್ಬುರ್ಗಿ ಹಾಗೂ ರಾಯಚೂರು ಜಿಲ್ಲೆಗಳ ಬರಡು ಭೂಮಿಯಲ್ಲಿ ಹಸಿರು ಚಿಮ್ಮಿಸುವ ಉದ್ದೇಶದಿಂದ ರೂಪುಗೊಂಡ ಕೃಷ್ಣಾ ಮೇಲ್ದಂಡೆ ಯೋಜನೆ ಕನಸು ಮೂರು ದಶಕಗಳ ನಂತರ ಈಗ ನನಸಾಗುವ ಭರವಸೆ ಹುಟ್ಟಿದೆ.
ಬಚಾವತ್ ತೀರ್ಪಿನಲ್ಲಿ ಕರ್ನಾಟಕಕ್ಕೆ ನೀಡಿರುವ ಒಟ್ಟು 734 ಟಿಎಂಸಿ ನೀರಿನ ಪಾಲಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಂಚಲಾಗಿರುವ 173 ಟಿಎಂಸಿ ನೀರನ್ನು ಬಳಸಿಕೊಳ್ಳಲು ಕ್ರಿ.ಶ. 2000ದವರೆಗೆ ಕಾಲಾವಧಿ ನೀಡಲಾಗಿದ್ದು, ನೀರಿನ ಮೇಲಿನ ಹಕ್ಕನ್ನು ಉಳಿಕೊಳ್ಳುವ ರಾಜ್ಯದ ಶತಾಯಗತಾಯ ಪ್ರಯತ್ನ ಆರಂಭವಾಗಿದೆ.