ತೈಲಾಗಾರ ವಿರುದ್ಧ ಚಳವಳಿ: ಉದ್ರಿಕ್ತ ಗುಂಪಿನ ಮೇಲೆ ಗುಂಡು ಮಂಗಳೂರು, ಡಿ. 21– ಮಂಗಳೂರು ತೈಲಾಗಾರ (ಎಂಆರ್ಪಿಎಲ್) ತ್ಯಾಜ್ಯ ವಸ್ತುಗಳನ್ನು ಸಮುದ್ರಕ್ಕೆ ಬಿಡಲು ಹಾಕುತ್ತಿರುವ ಪೈಪ್ಲೈನ್ ಅನ್ನು ಕೀಳಬೇಕು ಎಂದು ಒತ್ತಾಯಿಸಿ ರಸ್ತೆತಡೆ ಚಳವಳಿ ನಡೆಸುತ್ತಿದ್ದ ಮೀನುಗಾರರು ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆಯಂತಹ ಹಿಂಸಾಕೃತ್ಯಕ್ಕೆ ಇಳಿದಿದ್ದರಿಂದ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ 9 ಜನರು ಗಾಯಗೊಂಡಿದ್ದಾರೆ.
ಗೋಲಿಬಾರ್ ಪ್ರತಿಭಟಿಸಿ ನಾಳೆ ದಕ್ಷಿಣ ಕನ್ನಡ ಜಿಲ್ಲೆ ಬಂದ್ಗೆ ಕರೆ ನೀಡಲಾಗಿದೆ.
ಪಾಲಿಕೆ, ಪುರಸಭೆ ಮೀಸಲಾತಿ ನಿಗದಿ ಬೆಂಗಳೂರು, ಡಿ. 21– ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳಿಗೆ ಮೊದಲ ವರ್ಷದ ಅವಧಿಗೆ ಅನ್ವಯವಾಗುವಂತೆ ಮೀಸಲಾತಿ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆರು ಮಹಾನಗರಪಾಲಿಕೆಗಳಲ್ಲಿ ಹಿಂದುಳಿದ ವರ್ಗದ ‘ಎ’ ಗುಂಪಿಗೆ ಎರಡು, ‘ಬಿ’ ಗುಂಪಿಗೆ ಒಂದು, ಪರಿಶಿಷ್ಟ ಜಾತಿಯವರಿಗೆ ಒಂದು ಹಾಗೂ ಸಾಮಾನ್ಯ ವರ್ಗಕ್ಕೆ ಎರಡು ಮೇಯರ್ ಸ್ಥಾನಗಳು ಮೀಸಲಾಗಿವೆ. ಇದರಲ್ಲಿ ಹಿಂದುಳಿದ ವರ್ಗದ ‘ಎ’ ಗುಂಪಿಗೆ ನೀಡಿರುವ ಒಂದು ಸ್ಥಾನ ಮಹಿಳೆಗೆ ಮೀಸಲು.