ನವದೆಹಲಿ, ಜೂನ್ 13 (ಪಿಟಿಐ, ಯುಎನ್ಐ)– ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜನತಾದಳದ ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.
ಹೆಗಡೆ ಅವರ ಉಚ್ಚಾಟನೆಯನ್ನು ಪಕ್ಷದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರು ಇಂದು ಇಲ್ಲಿ ಪ್ರಕಟಿಸಿದರು. ‘ಕಳೆದ 5 ವರ್ಷಗಳಿಂದ ಹೆಗಡೆ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಪ್ರಧಾನಿ ಸ್ಥಾನಕ್ಕೆ ಎಚ್.ಡಿ. ದೇವೇಗೌಡ ಅವರನ್ನು ಆಯ್ಕೆ ಮಾಡಿದ ನಂತರ ಹೆಗಡೆ ಅವರು ಪಕ್ಷವನ್ನು ದುರ್ಬಲಗೊಳಿಸುವ ಯತ್ನವನ್ನು ಇನ್ನಷ್ಟು ಹೆಚ್ಚಿಸಿದರು ಎಂದು ಲಾಲೂ ಆರೋಪಿಸಿದ್ದಾರೆ.
ಹೆಗಡೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಕರ್ನಾಟಕ ಜನತಾದಳ ಘಟಕದ ಅಧ್ಯಕ್ಷಮತ್ತು ನಾಗರಿಕ ವಿಮಾನಯಾನ ಸಚಿವ ಸಿ.ಎಂ. ಇಬ್ರಾಹಿಂ ಅವರು ಜೂನ್ 10ರಂದು ನೀಡಿದ ದೂರಿನ ಅನ್ವಯ ಹೆಗಡೆ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಯಿತು.
ಉದ್ಯಮಗಳಲ್ಲಿ ‘ಮಾಲಿನ್ಯ ತಡೆ ಇನ್ಸ್ಪೆಕ್ಟರ್’ಗಳ ನೇಮಕಕ್ಕೆ ಶಾಸನ
ಬೆಂಗಳೂರು, ಜೂನ್ 13– ರಾಜ್ಯದ ಬೃಹತ್ ಕೈಗಾರಿಕೆಗಳು ಸೃಷ್ಟಿಸುತ್ತಿರುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸರ್ವ ಸಿದ್ಧತೆ ನಡೆಸಿದೆ.
ಪರಿಸರ ಮಾಲಿನ್ಯ ಸೃಷ್ಟಿಸುತ್ತಿರುವ ರಾಜ್ಯದ ಬೃಹತ್ ಉದ್ಯಮಗಳಲ್ಲಿ, ಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದ ಉದ್ಯಮ ದೊಳಗೇ ‘ಪರಿಸರ ಮಾಲಿನ್ಯ ತಡೆ ಇನ್ ಸ್ಪೆಕ್ಟರ್’ಗಳನ್ನು ನೇಮಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.