ಬೆಂಗಳೂರು, ಜೂನ್ 14– ಜನತಾದಳದ ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಪರಿಣಾಮವಾಗಿ ಉದ್ಭವಿಸಿರುವ ಬಿಕ್ಕಟ್ಟು ಪರಿಹಾರಕ್ಕೆ ರಾಜಿಸೂತ್ರ ಕಂಡು ಹಿಡಿಯಲು ಇಂದು ನಡೆದ ಮಂತ್ರಿ ಮಂಡಲ ಸಭೆಯು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರಿಗೆ ಸಂಪೂರ್ಣ ಅಧಿಕಾರ ನೀಡಿತು.
ಉಚ್ಚಾಟನೆಗೆ ದೇವೇಗೌಡರೇ ಕಾರಣ: ಹೆಗಡೆ ಆರೋಪ
ನವದೆಹಲಿ, ಜೂನ್ 14 (ಪಿಟಿಐ, ಯುಎನ್ಐ)– ಪಕ್ಷದಿಂದ ತಮ್ಮನ್ನು ಉಚ್ಚಾಟಿಸಲು ಪ್ರಧಾನಿ ಎಚ್.ಡಿ. ದೇವೇಗೌಡ ಅವರೇ ಕಾರಣ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜನತಾದಳದಿಂದ ಉಚ್ಚಾಟಿತರಾದ ರಾಮಕೃಷ್ಣ ಹೆಗಡೆ ಇಂದು ನೇರ ಆರೋಪ ಮಾಡಿದ್ದಾರೆ.
ಲೋಕಸಭೆಯಲ್ಲಿ ವಿಶ್ವಾಸಮತ ಪಡೆಯುವುದೇ ತಡ, ದೇವೇಗೌಡರು ತರಾತುರಿಯಲ್ಲಿ ತಮ್ಮನ್ನು ಪಕ್ಷದಿಂದ ಹೊರಹಾಕುವುದೇ ಅತ್ಯಂತ ಆದ್ಯತೆಯ ವಿಷಯವೆನ್ನುವ ಹಾಗೆ ಹಿರಿಯ ನಾಯಕರ ಮನವೊಲಿಸಲು ಅವರ ಮನೆಯಿಂದ ಮನೆಗೆ ಅಲೆದಾಡಿದರು ಎಂದು ಹೆಗಡೆ ದೂರಿದರು.
ಬೆಂಗಳೂರಿನಲ್ಲಿ ಕಟ್ಟಡ ಕುಸಿದು 8 ಸಾವು
ಬೆಂಗಳೂರು, ಜೂನ್ 14– ಬೆಂಗಳೂರು ಮಹಾನಗರಪಾಲಿಕೆಗೆ ಸೇರಿದ ಜೆ.ಪಿ ನಗರ ಮಾರೇನಹಳ್ಳಿಯ ಪೌರ ಕಾರ್ಮಿಕ ವಸತಿ ಸಮುಚ್ಚಯದ ಒಂದು ಭಾಗ ಇಂದು ಬೆಳಿಗ್ಗೆ ಸಂಪೂರ್ಣ ಕುಸಿದು ಬಿದ್ದು, ಒಂದೇ ಕುಟುಂಬದ ಏಳು ಮಂದಿ ಸೇರಿ ಒಟ್ಟು 8 ಜನ ಸಜೀವ ಸಮಾಧಿಯಾದರು.