ಬರೇಲಿ, ಮೇ 29(ಪಿಟಿಐ)– ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರವು ಅಭಿವೃದ್ಧಿಗೆ ಅಡಚಣೆ ಉಂಟು ಮಾಡುತ್ತಿದೆ. ವಿಚಾರಣೆ ಬಾಕಿ ಇರುವ ಭ್ರಷ್ಟಾಚಾರ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದು ಒಳಿತೆಂದು ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
‘ರಾಜಕಾರಣಿ ಹಾಗೂ ಅಪರಾಧಿಗಳ ನಡುವಿನ ಅಪವಿತ್ರ ಮೈತ್ರಿ ಸಡಿಲಿಸುವುದು ಈಗ ಅತ್ಯಗತ್ಯವಾಗಿದೆ. ನಾನೊಬ್ಬನೇ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಭ್ರಷ್ಟಾಚಾರದ ಭೂತವನ್ನು ಹೊಡೆದೋಡಿಸಲು ಸರ್ಕಾರ ಹಾಗೂ ಜನತೆ ಒಂದಾಗಿ ಹೋರಾಡಬೇಕು’ ಎಂದರು.
ಎಸ್ಎಸ್ಎಲ್ಸಿ ಫಲಿತಾಂಶ: ಶೇ 46.14 ತೇರ್ಗಡೆ
ಬೆಂಗಳೂರು, ಮೇ 29– ಕಳೆದ ಮಾರ್ಚಿ–ಏಪ್ರಿಲ್ ತಿಂಗಳಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ತೇರ್ಗಡೆ ಮತ್ತು ರ್ಯಾಂಕ್ ಗಳಿಕೆ ಹೀಗೆ ಎರಡರಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಇದೇ ಮೊದಲ ಬಾರಿಗೆ ಮೊದಲ ಮೂರೂ ರ್ಯಾಂಕ್ಗಳನ್ನು ಅವರೇ ಮಡಿಲು ತುಂಬಿಸಿಕೊಂಡಿದ್ದಾರೆ.
ಒಟ್ಟು 20 ರ್ಯಾಂಕ್ಗಳನ್ನು 127 ವಿದ್ಯಾರ್ಥಿಗಳು ಹಂಚಿಕೊಂಡಿದ್ದು, ಇವರಲ್ಲಿ 66 ವಿದ್ಯಾರ್ಥಿನಿಯರು. ಕೇವಲ 61 ರ್ಯಾಂಕುಗಳನ್ನು ಬಾಲಕರು ಪಡೆದು ಇಲ್ಲಿಯೂ ಹಿಂದೆ ಬಿದ್ದಿದ್ದಾರೆ.