ಕೆ.ಆರ್.ಎಸ್ನಲ್ಲಿ ಪ್ರತಿಭಟನೆ: ಗಲಭೆ ಅಗ್ನಿಸ್ಪರ್ಶ, ಗಾಳಿಯಲ್ಲಿ ಗುಂಡು
ಮಂಡ್ಯ, ಜೂನ್ 26– ಮಂಡ್ಯ ಜಿಲ್ಲೆ ರೈತರು ವರುಣಾ ನಾಲೆ ಕಾಮಗಾರಿ ವಿರುದ್ಧ ಕೃಷ್ಣರಾಜ ಸಾಗರ ಅಣೆಕಟ್ಟು ಪ್ರದೇಶದಲ್ಲಿ ಇಂದು ಪ್ರತಿಭಟನೆ ನಡೆಸುತ್ತಿದ್ದಾಗ ಕಲ್ಲು ತೂರಾಟ–ಗಲಭೆ ಸಂಭವಿಸಿ 20ಕ್ಕೂ ಹೆಚ್ಚು ಜನ ಗಾಯಗೊಂಡರು.
ಪೊಲೀಸರು ಗಲಭೆ ನಿಯಂತ್ರಿಸಲು ಗಾಳಿಯಲ್ಲಿ ಐದು ಸುತ್ತು ಗುಂಡು ಹಾರಿಸಿದರು. ಹಲವು ವಾಹನ ಜಖಂ ಸೇರಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಅಂದಾಜಿದೆ.
ಮೈಸೂರು ಜಿಲ್ಲೆಗೆ ನೀರೊದಗಿಸಲು ಎರಡನೇ ಹಂತದ ವರುಣಾ ನಾಲೆ ನಿರ್ಮಿಸುತ್ತಿರುವುದನ್ನು ಪ್ರತಿಭಟಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಇಂದು ಆಯೋಜಿಸಿದ್ದ ‘ಕೆ.ಆರ್.ಎಸ್. ಚಲೋ’ ಕಾರ್ಯಕ್ರಮದಲ್ಲಿ ಗಲಭೆ ಸಂಭವಿಸಿತು.
‘ಅದಕ್ಷ, ಭ್ರಷ್ಟ ಸಚಿವರನ್ನು ಸಂಪುಟದಿಂದ ಕೈಬಿಡಿ’
ಬೆಂಗಳೂರು, ಜೂನ್ 26– ‘ಅದಕ್ಷ ಮತ್ತು ಭ್ರಷ್ಟ ಸಚಿವರನ್ನು ಸಂಪುಟದಿಂದ ನಿರ್ದಾಕ್ಷಿಣ್ಯವಾಗಿ ಕೈಬಿಡಿ; ಉತ್ಸಾಹಿ ಮತ್ತು ಕ್ರಿಯಾಶೀಲ ವ್ಯಕ್ತಿಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿ’.
ಪಕ್ಷದ ಸಂಘಟನೆ ಹಾಗೂ ಸಂಪುಟ ಪುನರ್ರಚನೆ ಸಂಬಂಧ ಜನತಾ ದಳದ ಹಿರಿಯ ಮುಖಂಡರು ನಡೆಸುತ್ತಿರುವ ಸಮಾಲೋಚನೆಯ ಸಭೆಯ ಅಂತಿಮ ದಿನವಾದ ಇಂದು ಪಕ್ಷದ ಜಿಲ್ಲಾ ಮುಖಂಡರುಗಳಿಂದ ಪ್ರಮುಖವಾಗಿ ಕೇಳಿ ಬಂದ ಒತ್ತಾಯವಿದು. ಇದರೊಂದಿಗೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಜಿಲ್ಲಾವಾರು ಸಮಾಲೋಚನೆ ಕಸರತ್ತು ಪೂರ್ಣಗೊಂಡಿತು.