ಸೋಮವಾರ 20.7.1998
ಕಾರವಾರ, ಜುಲೈ 19– ‘ಸೀಬರ್ಡ್’ ನಿರಾಶ್ರಿತರ ಪುನರ್ವಸತಿ ಮತ್ತು ಪರಿಹಾರ ಕುರಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇಂದು ಇಲ್ಲಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಮುಖ್ಯಮಂತ್ರಿ ಪಟೇಲ್ ಅವರ ಉಪಸ್ಥಿತಿಯಲ್ಲಿ ನಡೆದ ಅತಿ ಮಹತ್ವದ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ.
ಇದರಿಂದಾಗಿ ಇಲ್ಲಿಯವರೆಗಿದ್ದ ಅನಿಶ್ಚಿತತೆ ಮತ್ತೆ ಮುಂದುವರಿದಂತಾಗಿದೆ.
ಏಷ್ಯಾದಲ್ಲಿಯೇ ಅತಿ ದೊಡ್ಡ ನೌಕಾ ನೆಲೆಯಾಗಲಿರುವ ‘ಸೀಬರ್ಡ್’ ನೌಕಾ ನೆಲೆ ಯೋಜನೆಯ ಜಾರಿಗೆ ಅಡ್ಡಿಯಾಗಿರುವ ಪುನರ್ವಸತಿ ಮತ್ತು ನಿರಾಶ್ರಿತರಿಗೆ ನೀಡಬೇಕಾಗಿರುವ ಪರಿಹಾರ ಕುರಿತು ಚರ್ಚಿಸಲೆಂದೇ ರಕ್ಷಣಾ ಸಚಿವರು ಇಂದು ಮುಖ್ಯಮಂತ್ರಿ, ಕಂದಾಯ ಸಚಿವರೊಂದಿಗೆ ಇಲ್ಲಿಗೆ ಆಗಮಿಸಿದ್ದರು.
****
ಚನ್ನರಾಯಪಟ್ಟಣ, ಜುಲೈ 19– ನಾಲೆಗೆ ಮಣ್ಣು ಸುರಿದು ಕಳೆದ 96 ದಿನಗಳಿಂದ ಅನಿರ್ಧಿಷ್ಟ ನೀರು ತಡೆ ಚಳವಳಿ ನಡೆಸುತ್ತಿದ್ದ ಬಾಗೂರು–ನವಿಲೆ ಸುರಂಗ ಸಂತ್ರಸ್ತ ರೈತರು ಇಂದು ಸ್ವಯಂ ಬಂಧನಕ್ಕೆ ಒಳಗಾಗಿ, ನಾಲೆಯನ್ನು ತೆರವು ಮಾಡಿದ್ದರಿಂದ ಅನಿರ್ಧಿಷ್ಟ ನೀರು ಬಂದ್ ಚಳವಳಿ ಅಂತ್ಯವಾಯಿತು.
ಈ ತಿಂಗಳ 14ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಗೋಪಾಲ್, ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಮುಖಂಡ ಎಚ್.ವಿ.ಅನಂತಸುಬ್ಬರಾವ್ ಅವರೂ ಸೇರಿದಂತೆ ಸುಮಾರು 100 ಜನ ಬಂಧನಕ್ಕೆ ಒಳಗಾದರು.
ಚನ್ನರಾಯಪಟ್ಟಣ ತಾಲ್ಲೂಕು ಮತ್ತು ಹಾಸನ ನಗರದಲ್ಲಿ ಇಂದಿನಿಂದ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.