ನವದೆಹಲಿ, ಮಾರ್ಚ್ 8– ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ ಸುಗ್ರೀವಾಜ್ಞೆಯನ್ನು ಇಂದು ರಾತ್ರಿ ವಾಪಸ್ ಪಡೆಯುವ ಮೂಲಕ, 24 ದಿನಗಳ ನಂತರ ರಾಬ್ಡಿದೇವಿ ನೇತೃತ್ವದ ರಾಷ್ಟ್ರೀಯ ಜನತಾದಳ ನೇತೃತ್ವದ ಸರ್ಕಾರದ ಪುನರ್ ಪ್ರತಿಷ್ಠಾಪನೆಗೆ ದಾರಿ ಮಾಡಿಕೊಡಲಾಯಿತು.
ರಾಷ್ಟ್ರಪತಿ ಆಳ್ವಿಕೆಯ ಆಜ್ಞೆಯನ್ನು ಹಿಂತೆಗೆದುಕೊಂಡಿರುವುದನ್ನು ಗೃಹ ಸಚಿವ ಅಡ್ವಾಣಿ ಲೋಕಸಭೆಗೆ ಮುಜುಗರದಿಂದ ತಿಳಿಸಿದರು. ಪ್ರಧಾನಿ ವಾಜಪೇಯಿ ಅವರು ರಾಜ್ಯಸಭೆಯಲ್ಲಿ ಬಿಹಾರದ ಗೊತ್ತುವಳಿಗೆ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆಯಲು ಅದರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜತೆ ನಡೆಸಿದ ಮಾತುಕತೆ ವಿಫಲವಾಗಿತ್ತು.
ಗೊತ್ತುವಳಿಯನ್ನು ವಿರೋಧಿ ಕಾಂಗ್ರೆಸ್ ಪಕ್ಷವು ರಾಜ್ಯಸಭೆಯಲ್ಲಿ ಬೆಂಬಲಿಸದೇ ಇರಲು ಕೈಗೊಂಡ ದೃಢ ನಿರ್ಧಾರದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಕೈಕಟ್ಟಿದಂತಾಯಿತು. ಇಂದು ಬೆಳಿಗ್ಗೆ ನಡೆದ ಸಚಿವ ಸಂಪುಟದ ಸಭೆಯು ರಾಷ್ಟ್ರಪತಿ ಆಜ್ಞೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತು.