ಬೆಂಗಳೂರು, ನ. 19– ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ. 23ರಂದು ನಡೆಯುವ ವಿಶ್ವಸುಂದರಿ ಸ್ಪರ್ಧೆಯನ್ನು ‘ಕೋರ್ಟ್ ಆದೇಶ ನೀಡುವ ಮೂಲಕ ನಿಲ್ಲಿಸಲಾಗುವುದಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಸ್ಪರ್ಧೆ ನಡೆಸುವ ಸಂಬಂಧದಲ್ಲಿ ಎಂಟು ಮಾರ್ಗಸೂಚಿಗಳನ್ನು ಕೋರ್ಟ್ ನೀಡಿತು.
ಈ ಮಾರ್ಗಸೂಚಿ ಪಾಲನೆ ಬಗ್ಗೆ ಸ್ಪರ್ಧೆ ಮುಗಿದ ಮೇಲೆ ಕೋರ್ಟಿಗೆ ವರದಿ ಸಲ್ಲಿಸಬೇಕೆಂದು ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಅವರಿಗೆ ಆದೇಶಿಸಿತು.
ಮುದ ನೀಡದ ‘ಮಿಸ್ ಪರ್ಸನಾಲಿಟಿ’
ಬೆಂಗಳೂರು, ನ. 19– ತೀವ್ರ ಆಸಕ್ತಿ ಕೆರಳಿಸಿದ್ದ ವಿಶ್ವಸುಂದರಿ ಸ್ಪರ್ಧೆಯ ಎರಡನೇ ಮುಖ್ಯ ಕಾರ್ಯಕ್ರಮವಾದ ‘ಮಿಸ್ ಪರ್ಸನಾಲಿಟಿ’ ಸ್ಪರ್ಧೆ ಪ್ರೇಕ್ಷಕರು ನಿರೀಕ್ಷಿಸಿದಷ್ಟು ಮುದ ನೀಡುವಲ್ಲಿ ವಿಫಲವಾಯಿತು.
ಅಪಾರ ನಿರೀಕ್ಷೆ ಹೊತ್ತು ನಗರದಿಂದ ಸುಮಾರು 55 ಕಿ.ಮೀ. ಹಾದಿಯನ್ನು ಕ್ರಮಿಸಿ ದೊಡ್ಡಬಳ್ಳಾಪುರ ಸಮೀಪದ ‘ಗ್ರೀನ್ ವ್ಯಾಲಿ’ ವಿಹಾರಧಾಮಕ್ಕೆ ತೆರಳಿದ ಸೌಂದರ್ಯ ವೀಕ್ಷಕರು, ಅವಸರದಲ್ಲಿ ನಡೆದುಹೋದ ‘ಮಿಸ್ ಪರ್ಸನಾಲಿಟಿ’ ಸ್ಪರ್ಧೆಯನ್ನು ಪೂರ್ಣ ವೀಕ್ಷಿಸಲೂ ಸಾಧ್ಯವಾಗದೆ ನಿರಾಶೆಯಿಂದ ಮರಳಬೇಕಾಯಿತು.