‘ನವದೆಹಲಿ, ಜೂನ್ 9 (ಪಿಟಿಐ,ಯುಎನ್ಐ)– ರಾಷ್ಟ್ರಪತಿ ಡಾ.ಶಂಕರ್ ದಯಾಳ್ ಶರ್ಮಾ ಅವರ ಸೂಚನೆಯಂತೆ ಪ್ರಧಾನಿ ಎಚ್.ಡಿ. ದೇವೇಗೌಡರ ಸರ್ಕಾರ ವಿಶ್ವಾಸ ಮತ ಕೋರಲಿರುವ ಎರಡು ದಿನಗಳ ಸಂಕ್ಷಿಪ್ತ ಲೋಕಸಭೆ ಅಧಿವೇಶನ ನಾಳೆ ಆರಂಭವಾಗಲಿದೆ.
ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಾಸ ಮತ ಕೋರುವ ಸಲುವಾಗಿಯೇ 15 ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಲೋಕಸಭೆ ಅಧಿವೇಶನ ಕರೆಯಲಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ ವಿಶ್ವಾಸ ಮತ ಕೋರಲು ಮೇ 22ರಿಂದ 28ರವರೆಗೆ ಅಧಿವೇಶನ ಕರೆಯಲಾಗಿತ್ತು.
ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ರಾಜೀನಾಮೆ ನೀಡಿದ ನಂತರ ಎಚ್.ಡಿ. ದೇವೇಗೌಡರ ನೇತೃತ್ವದ 20 ಸದಸ್ಯರ ಸಂಪುಟ ಜೂನ್ 1ರಂದು ಅಸ್ತಿತ್ವಕ್ಕೆ ಬಂದಿದ್ದು, ಜೂನ್ 12ರ ಒಳಗೆ ಸದನದಲ್ಲಿ ಬಹುಮತ ಸಾಬೀತು ಮಾಡುವಂತೆ ರಾಷ್ಟ್ರಪತಿಯವರು ಸೂಚಿಸಿದ್ದರು.
‘ಬಂದಿ’ ಬಸವ
ಬೆಂಗಳೂರು, ಜೂನ್ 9– ‘ಬಸವಣ್ಣ ಒಂದು ವರ್ಗಕ್ಕೆ ಸೀಮಿತವಲ್ಲ ಅವರನ್ನು ನಮ್ಮಲ್ಲೇ ಇಟ್ಟುಕೊಂಡು ಕೊಳೆಸುವುದು ಬೇಡ. ಅವರ ತತ್ವಗಳು ವಿಶ್ವದಾದ್ಯಂತ ಪ್ರಚಾರವಾಗಬೇಕು’ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ಇಲ್ಲಿ ಕರೆ ನೀಡಿದರು.
ಬಸವ ಸಮಿತಿ ಕೆಂಗೇರಿ ಹತ್ತಿರದ ದೊಡ್ಡಬೇಲೆ ಗ್ರಾಮದಲ್ಲಿ ಆರಂಭಿಸಿರುವ ಬಾಲಕಿಯರ ವಸತಿ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ನಾಮಕರಣದ ಹಿನ್ನೆಲೆಯಲ್ಲಿ ಎದ್ದಿರುವ ವಿವಾದಕ್ಕೆ ಉತ್ತರವೆನ್ನುವಂತೆ ‘ಬಸವಣ್ಣನನ್ನು ಕೊಳೆಸೋಕೆ ಏನು ಮಾಡಬೇಕೋ ಎಲ್ಲವನ್ನೂ ನಾವು ಮಾಡಿದ್ದೇವೆ’ಎಂದರು.