ದಳ ಅಧ್ಯಕ್ಷತೆ: ಒಮ್ಮತದ ಆಯ್ಕೆಗೆ ತೆರೆಮರೆ ಯತ್ನ ನವದೆಹಲಿ, ಜೂನ್ 10– ವಿವಾದದ ಸುಳಿಗೆ ಸಿಕ್ಕಿ ನ್ಯಾಯಾಲಯದ ವಶವಾಗಿರುವ ಜನತಾದಳದ ಅಧ್ಯಕ್ಷ ಸ್ಥಾನದ ಚುನಾವಣೆ ಯನ್ನು ಈಗಲೂ ಒಮ್ಮತದ ಅಭ್ಯರ್ಥಿಯ ಆಯ್ಕೆಗೆ ತೆರೆಮರೆಯ ಪ್ರಯತ್ನ ನಡೆಯುತ್ತಿದೆ.
ಈ ಪ್ರಯತ್ನಕ್ಕೆ ಈಗ ಕೈಹಾಕಿರುವವರು ಕರ್ನಾಟಕದ ಎಂ.ಎಸ್.ಗುರುಪಾದ ಸ್ವಾಮಿ ಅವರು. ಈಗಾಗಲೇ ಅನೇಕ ಹಿರಿಯರನ್ನು ಭೇಟಿ ಮಾಡಿರುವ ಅವರು, ಲಾಲೂ ಪ್ರಸಾದ್ ಯಾದವ್ ಮತ್ತು ಶರದ್ ಯಾದವ್ ಅವರಿಬ್ಬರನ್ನೂ ಕಣದಿಂದ ನಿವೃತ್ತಗೊಳಿಸಿ ಮೂರನೇ ಅಭ್ಯರ್ಥಿಯ ಆಯ್ಕೆಗೆ ಒಲವು ಮೂಡಿಸುವ ಕ್ರಿಯೆಯಲ್ಲಿ ತೊಡಗಿದ್ದಾರೆ.
ಈ ಮೂರನೇ ಅಭ್ಯರ್ಥಿ ಪ್ರೊ. ಮಧು ದಂಡವತೆ ಅವರಾಗಲಿ ಎಂಬುದು ಗುರುಪಾದ ಸ್ವಾಮಿ ಅವರ ಲಾಬಿ. ಪ್ರಧಾನಿ ಗುಜ್ರಾಲ್ ಅವರೇ ಅಧ್ಯಕ್ಷರಾಗಲಿ ಎನ್ನುವ ವಾದವೂ ಇದೆ.