ಹಾಸನ, ಡಿ. 21– ಪ್ರಾಥಮಿಕ ಶಿಕ್ಷಣ ಮುಗಿ ಯುವವರೆಗೆ ಪ್ರತಿಯೊಂದು ವಿಷಯವನ್ನೂ ಮಕ್ಕಳ ಮಾತೃಭಾಷೆಯಲ್ಲೇ ಕಲಿಸಬೇಕು; ಇತರ ಭಾಷೆಗಳನ್ನು ಪ್ರಾಥಮಿಕ ಮಟ್ಟದ ಬಳಿಕ ಬೋಧಿಸಬೇಕು ಎಂದು ಖ್ಯಾತಕವಿ ಚೆನ್ನವೀರ ಕಣವಿ ಇಲ್ಲಿ ಇಂದು ಸಲಹೆ ಮಾಡಿದರು. ಇಲ್ಲಿ ನಡೆದಿರುವ 65ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ ಅವರು ‘ಪುಸ್ತಕ ಮತ್ತು ಭಾರವಾದ ಪಠ್ಯಕ್ರಮಗಳ ಹೊರೆ ಕೂಡಲೇ ತಗ್ಗಿಸುವ ಕ್ರಮಕ್ಕೆ’ ಒತ್ತಾಯಿಸಿದರು.
ಮಕ್ಕಳಿಗೆ ಹತ್ತು ವರ್ಷದವರೆಗೆ ಯಾವುದೇ ರೀತಿಯ ಹೊರೆಯೂ ಇರಬಾರದು. ವಿರಾಮವಾದ ಹರ್ಷ ದಾಯಕ ವಾತಾವರಣದಲ್ಲಿ ಶಿಕ್ಷಣ ನೀಡುವಂತಾಗಬೇಕು. ಆಟ, ನಿಸರ್ಗದ ಒಡನಾಟ, ಸಾಹಸ ಮನೋಭಾವದ ವೃದ್ಧಿಗೆ ಯಥೇಚ್ಛ ಅವಕಾಶ ಕಲ್ಪಿಸಬೇಕು. ಮಿತಿ ಮೀರಿದ ಪರೀಕ್ಷೆಗಳಿಗೆ ಹಾಲು ಮನಸ್ಸನ್ನು ಒಡ್ಡುವ ಪದ್ಧತಿ ನಿಲ್ಲಬೇಕು ಎಂದರು.