ಸಿಪಿಪಿ ನಾಯಕತ್ವಕ್ಕೆ ಸೆಣೆಸಾಟ: ಉಭಯ ಬಣಗಳ ಬಿಗಿ ಪಟ್ಟು
ನವದೆಹಲಿ, ಡಿ. 22 (ಯುಎನ್ಐ, ಪಿಟಿಐ)– ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷ ಸ್ಥಾನಕ್ಕೆ ಒಮ್ಮತ ಅಭ್ಯರ್ಥಿಗೆ ಬದಲಾಗಿ ಚುನಾವಣೆ ನಡೆಯಬೇಕೆಂದು ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಬೆಂಬಲಿಗರು ಪಟ್ಟು ಹಿಡಿದಿರುವುದರಿಂದ ಅಧ್ಯಕ್ಷ ಸೀತಾರಂ ಕೇಸರಿ ಹಾಗೂ ರಾವ್ ಬಣಗಳ ನಡುವೆ ಹಣಾಹಣಿ ನಡೆಯುವ ಸಂಭವವಿದೆ.
ಕಾಂಗ್ರೆಸ್ ಅಧ್ಯಕ್ಷ ಸೀತಾರಂ ಕೇಸರಿ ಅವರಿಗೆ ಪಕ್ಷದ ಹಿರಿಯ ನಾಯಕರು ಹಾಗೂ ರಾಜ್ಯ ಘಟಕಗಳ ನಾಯಕರ ಬೆಂಬಲ ಇದೆ ಎನ್ನಲಾಗಿದ್ದು, ಅವರೇ ಸಿಪಿಪಿ ನಾಯಕತ್ವಕ್ಕೆ ಒಮ್ಮತದ ಅಭ್ಯರ್ಥಿ ಎನ್ನಲಾಗುತ್ತಿದೆ.
ರಂಗ ಸರ್ಕಾರಕ್ಕೆ ಬೆದರಿಕೆ ಇಲ್ಲ: ಪ್ರಧಾನಿ
ಕಲ್ಲಿಕೋಟೆ, ಡಿ. 22 (ಪಿಟಿಐ)– ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಯಿಂದ ಸಂಯುಕ್ತ ರಂಗ ಸರ್ಕಾರದ ಸ್ಥಿರತೆಗೆ ಒದಗಬಹುದಾದ ಬೆದರಿಕೆಯ ಕುರಿತು ತಮಗೆ ಯಾವುದೇ ಆತಂಕವಿಲ್ಲ ಎಂದು ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಿಳಿಸಿದ್ದು, ಆರ್ಥಿಕ ಸುಧಾರಣೆ ಮುಂದುವರಿಸಿಕೊಂಡು ಹೋಗುವ ತಮ್ಮ ದೃಢ ನಿರ್ಧಾರವನ್ನು ಪುನರುಚ್ಚರಿಸಿದ್ದಾರೆ.
‘ದೆಹಲಿ ಗದ್ದುಗೆ ಬಗ್ಗೆ ನನಗೆ ಚಿಂತೆಯಿಲ್ಲ. ಆದರೆ 13 ರಾಜಕೀಯ ಪಕ್ಷಗಳು ನನಗೆ ವಹಿಸಿರುವ ಕಾರ್ಯದ ಬಗ್ಗೆ ಹೆಚ್ಚು ಮುತವರ್ಜಿಯಿದೆ’ ಎಂದು ನಿನ್ನೆಯಿಂದ ನಗರಕ್ಕೆ ಭೇಟಿ ನೀಡಿರುವ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.