50 ವರ್ಷಗಳ ಹಿಂದೆ | ಬುಧವಾರ, 31 ಜನವರಿ 1973

ಕಿಟ್ಟರಹಿತ ಕಲ್ಲಿದ್ದಲು ಗಣಿಗಳ ಆಡಳಿತ ಸರ್ಕಾರದ ವಶಕ್ಕೆ
ನವದೆಹಲಿ, ಜ. 30– ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕೇಂದ್ರ ಸರ್ಕಾರ ಇಂದು ದೇಶದ 474 ಕಿಟ್ಟರಹಿತ (ನಾನ್ ಕೋಕಿಂಗ್) ಕಲ್ಲಿದ್ದಲು ಗಣಿಗಳ ಆಡಳಿತವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು. ಈ ಗಣಿಗಳನ್ನು ಮುಂದೆ ರಾಷ್ಟ್ರೀಕರಿಸಲಾಗುವುದು.
ಇದರಿಂದ ಭಾರತದ ಕಲ್ಲಿದ್ದಲು ಉದ್ಯಮ ಹೆಚ್ಚು ಕಡಿಮೆ ಪೂರ್ತಿಯಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಒಳಪಟ್ಟಂತಾಗಿದೆ. ಕಳೆದ ವರ್ಷ 214 ಕಿಟ್ಟಯುಕ್ತ ಕಲ್ಲಿದ್ದಲು ಗಣಿಗಳನ್ನು ರಾಷ್ಟ್ರೀಕರಿಸಲಾಗಿತ್ತು.
ಕೇಂದ್ರ ಸಂಪುಟ ಇಂದು ಅಲ್ಪಕಾಲ ಸಭೆ ನಡೆಸಿದ ಮೇಲೆ ರಾಷ್ಟ್ರಪತಿ ವಿ.ವಿ. ಗಿರಿ ಅವರು ಸುಗ್ರೀವಾಜ್ಞೆಗೆ ಸಹಿ ಹಾಕಿದರು.
ರಾಷ್ಟ್ರೀಯ ಕಲ್ಲಿದ್ದಲು ಕಾರ್ಪೊರೇಷನ್ನಿನ ಅಧ್ಯಕ್ಷ ಜೆ.ಜಿ. ಕುಮಾರಮಂಗಲಂ ಅವರನ್ನು ಕಲ್ಲಿದ್ದಲು ಗಣಿಗಳ ಆಡಳಿತ ಸಂಸ್ಥೆಯ ಕಸ್ಟೊಡಿಯನ್ ಆಗಿ ನೇಮಿಸಲಾಗಿದೆ.
ಈ ಸಂಸ್ಥೆ ಈಗ ವಶಪಡಿಸಿಕೊಳ್ಳಲಾದ ಕಿಟ್ಟರಹಿತ ಕಲ್ಪಿದ್ದಲು ಗಣಿಗಳ ಆಡಳಿತ ನಿರ್ವಹಿಸುತ್ತದೆ.
ಮುಂದಿನ ಮುಂಗಡಪತ್ರದಲ್ಲಿ ಬರ ನಿವಾರಣೆಯ ಶಾಶ್ವತ ಕ್ರಮಗಳಿಗೆ ಆದ್ಯತೆ
ಬೆಂಗಳೂರು, ಜ. 30– ಫೆಬ್ರುವರಿ ತಿಂಗಳ ಮೂರನೇ ವಾರದ ಸುಮಾರಿನಲ್ಲಿ ವಿಧಾನ ಮಂಡಲದಲ್ಲಿ ಮಂಡಿತವಾಗಲಿರುವ 1973–74ನೇ ಸಾಲಿನ ಬಜೆಟ್ನಲ್ಲಿ ರಾಜ್ಯದ ಮೂರರಲ್ಲಿ ಒಂದು ಭಾಗದಲ್ಲಿ ತೀವ್ರ ಅಭಾವ ಪರಿಸ್ಥಿತಿಯಿರುವ ಪ್ರದೇಶಗಳ ಜನ ಮತ್ತು ಜಾನುವಾರು ರಕ್ಷಣೆ ಹಾಗೂ ಶಾಶ್ವತ ಬರ ನಿವಾರಣಾ ಕ್ರಮಗಳು ಆದ್ಯತೆ ಪಡೆಯಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.