14 ಭಾರಿ ಬ್ಯಾಂಕುಗಳ ರಾಷ್ಟ್ರೀಕರಣ: ರಾಷ್ಟ್ರಪತಿ ಸುಗ್ರೀವಾಜ್ಞೆ
ನವದೆಹಲಿ, ಜುಲೈ 19– ಹದಿನಾಲ್ಕು ಭಾರಿ ಭಾರತೀಯ ವಾಣಿಜ್ಯ ಬ್ಯಾಂಕ್ಗಳನ್ನು ಕೇಂದ್ರ ಸರ್ಕಾರ ಇಂದು ರಾಷ್ಟ್ರೀಕರಿಸಿತು.
ರಾಷ್ಟ್ರೀಕೃತವಾದ ಬ್ಯಾಂಕುಗಳಲ್ಲಿ ರಾಜ್ಯದಲ್ಲಿ ನೆಲೆ ಹೊಂದಿರುವ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕುಗಳು ಸೇರಿವೆ. ರಾಷ್ಟ್ರಪತಿಯ ಸುಗ್ರೀವಾಜ್ಞೆಯೊಂದರ ಮೂಲಕ ಬ್ಯಾಂಕುಗಳ ರಾಷ್ಟ್ರೀಕರಣವನ್ನು ಇಂದು ಜಾರಿಗೆ ತರಲಾಯಿತು.
‘ರಾಷ್ಟ್ರೀಯ ಆದ್ಯತೆ ಮತ್ತು ಗುರಿಗಳಿಗೆ ಅನುಗುಣವಾಗಿ ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿಯ ಅಗತ್ಯವನ್ನು ಇನ್ನೂ ಉತ್ತಮಪಡಿಸಲು’ ಈ ರಾಷ್ಟ್ರೀಕರಣ ಕ್ರಮ ಕೈಗೊಳ್ಳಲಾಗಿದೆಯೆಂದು ಕೇಂದ್ರ ವಿವರಿಸಿದೆ.
‘ಬರಸಿಡಿಲು’ ಕೆನರಾ ಬ್ಯಾಂಕ್ ಅಧ್ಯಕ್ಷ ಪ್ರತಿಕ್ರಿಯೆ
ಮಂಗಳೂರು, ಜುಲೈ 19– ದೇಶದ 14 ಬ್ಯಾಂಕುಗಳನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣ ಮಾಡಿರುವ ಸುದ್ದಿ ಬರಸಿಡಿಲಿನಂತೆ ಎರಗಿದೆಯೆಂದು ಕೆನರಾ ಬ್ಯಾಂಕಿನ ಅಧ್ಯಕ್ಷ ಶ್ರೀ ಕೆ.ಪಿ.ಜೆ. ಪ್ರಭು ಅವರು ಇಂದು ಇಲ್ಲಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.
ರಾಷ್ಟ್ರೀಕರಣದ ಮಾತು ಬಹಳ ದಿನಗಳಿಂದ ಕೇಳಿಬರುತ್ತಿದ್ದರೂ, ಆರ್ಡಿ ನೆನ್ಸ್ ಮೂಲಕ ರಾಷ್ಟ್ರೀಕರಣವಾಗಿರುವುದು ಆಶ್ಚರ್ಯಕರವೆಂದು ಅವರು ಹೇಳಿದರು.
ವ್ಯಾಪಾರ ಮತ್ತು ವಾಣಿಜ್ಯ ವಹಿವಾಟಿನ ಮೇಲೆ ರಾಷ್ಟ್ರೀಕರಣದ ಪರಿಣಾಮವನ್ನು ಕಾದು ನೋಡಬೇಕಾಗಿದೆಯೆಂದು ಅವರು ನುಡಿದರು.
ಡಾ. ನಾಗನಗೌಡ ಅವರ ನಿಧನ
ಬೆಂಗಳೂರು, ಜುಲೈ 19– ಮಾಜಿ ಸಚಿವರು, ವಿಧಾನಸಭಾ ಸದಸ್ಯರೂ ಆದ ಡಾ. ಆರ್. ನಾಗನಗೌಡ ಅವರು ಇಂದು ಸಂಜೆ ಬಳ್ಳಾರಿ ಆಸ್ಪತ್ರೆಯಲ್ಲಿ ನಿಧನರಾದರು.
ಅನಾರೋಗ್ಯದ ಕಾರಣ, ಕಳೆದ ಬುಧವಾರ ಬಳ್ಳಾರಿ ಆಸ್ಪತ್ರೆಗೆ ಶ್ರೀಯುತರನ್ನು ಸೇರಿಸಲಾಗಿತ್ತು.