ನಗರ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಮುಷ್ಕರ ಅಂತ್ಯ ಇಂದು ತರಗತಿಗಳಿಗೆ ವಾಪಸ್
ಬೆಂಗಳೂರು, ಸೆ. 17– ಸೆಪ್ಟೆಂಬರ್ 2ರಂದು ಆರಂಭವಾಗಿದ್ದ ಬೆಂಗಳೂರು ವಿಶ್ವ ವಿದ್ಯಾ ನಿಲಯ ವಿದ್ಯಾರ್ಥಿಗಳ ಮುಷ್ಕರವನ್ನು ವಾಪಸು ತೆಗೆದುಕೊಳ್ಳಲಾಗಿದೆ.
ಈ ಮುಷ್ಕರದ ಕಾರಣದಿಂದ 8 ದಿನಗಳ ಕಾಲ ರಜಾ ಪಡೆದಿದ್ದ ನಗರದ ಕಾಲೇಜುಗಳು ನಾಳೆ ಗುರುವಾರ ಆರಂಭವಾಗುವುವು. ರಿಜಿಸ್ಟ್ರಾರ್ ಅವರು ರಜಾ ತೆಗೆದುಕೊಂಡಿರುವ ಕಾರಣ ವಿದ್ಯಾರ್ಥಿ ಕ್ರಿಯಾ ಸಮಿತಿ ಆಪಾದನೆಗಳ ಬಗ್ಗೆ ನ್ಯಾಯಾಧಿಕಾರಿಯಿಂದ ವಿಚಾರಣೆಯಾಗಬೇಕೆಂಬ ತನ್ನ ನಿಲುವನ್ನು ಬದಲಾಯಿಸಿ, ಆಪಾದನೆಗಳನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗಕ್ಕೆ ಒಪ್ಪಿಸುವ ಸಲಹೆಯನ್ನು ಒಪ್ಪಿದೆ.
ಈಗ ಅನಾರೋಗ್ಯದ ಕಾರಣ 15 ದಿನಗಳ ಕಾಲ ರಜಾ ಪಡೆದು ಆಸ್ಪತ್ರೆಯಲ್ಲಿರುವ ರಿಜಿಸ್ಟ್ರಾರ್ ಶ್ರೀ ವಿ. ಮಲ್ಲಿಕಾರ್ಜುನಪ್ಪ ಅವರು ಮತ್ತೆ ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಬರುವುದಿಲ್ಲವೆಂದು ತಿಳಿದುಬಂದಿದೆ.
ಕನ್ನಡ ಶಬ್ದಕೋಶದ ಪ್ರಥಮ ಸಂಪುಟ ಡಿಸೆಂಬರಲ್ಲಿ ಹೊರಕ್ಕೆ
ಬೆಂಗಳೂರು, ಸೆ. 17– ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಪ್ರಕಟವಾಗುತ್ತಿರುವ ಕನ್ನಡ ಶಬ್ದಕೋಶದ ಪ್ರಥಮ ಸಂಪುಟ ಮುಂದಿನ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಪರಿಷತ್ತಿನ ಹೊನ್ನಿನ ಹಬ್ಬದ ವೇಳೆಗೆ ಕನ್ನಡಿಗರ ಕೈಸೇರಲಿದೆ.
ಪುಟ್ಟ ಶಬ್ದಕೋಶ
ಬೆಂಗಳೂರು, ಸೆ. 17– ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ಪುಟ್ಟ ಪ್ರಮಾಣದ ಕನ್ನಡ–ಕನ್ನಡ ಶಬ್ದಕೋಶವೊಂದನ್ನು ಹೊರತರಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ. ಈ ಕಾರ್ಯಕ್ಕೆ ಎರಡು ಲಕ್ಷ ರೂ. ವೆಚ್ಚವಾಗುವ ನಿರೀಕ್ಷೆ ಇದೆ.