ನವದೆಹಲಿ, ಜುಲೈ 28– ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಬಿಸಿ ಚರ್ಚೆ, ವಾದ–ವಿವಾದ ಮುಂತಾದ ಗಲಭೆ, ಗೊಂದಲದ ನಂತರ ಕಾನೂನು ಸಚಿವ ಎಚ್.ಆರ್. ಗೋಖಲೆ ಅವರು ಮೂಲಭೂತ ಹಕ್ಕುಗಳ ಕುರಿತ ಸಂವಿಧಾನ ತಿದ್ದುಪಡಿಗೆ ಎರಡು ಮಸೂದೆಗಳನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದರು.
ಈ ತಿದ್ದುಪಡಿ ಅಂಗೀಕೃತವಾದರೆ ಸಂವಿಧಾನದಲ್ಲಿ ಮೂಲಭೂತ ಹಕ್ಕು ಕುರಿತ ಅಧ್ಯಾಯದ ತಿದ್ದುಪಡಿಗೆ ಸಂಸತ್ತಿಗೆ ಅಧಿಕಾರ ದೊರೆಯುತ್ತದೆ.
ಆಡಳಿತ ಕಾಂಗ್ರೆಸ್ ಸಂಸದೀಯ ಪಕ್ಷದಲ್ಲಿ ಸಾರ್ವತ್ರಿಕ ಬೆಂಬಲ
ನವದೆಹಲಿ, ಜುಲೈ 28– ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡುವುದಕ್ಕೆ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ವಶಪಡಿಸಿಕೊಂಡ ಆಸ್ತಿ–ಪಾಸ್ತಿ ಬಗ್ಗೆ ಪರಿಹಾರದ ಪ್ರಶ್ನೆಯನ್ನು ನ್ಯಾಯಾಂಗ ಪರಿಶೀಲಿಸುವುದನ್ನು ತಡೆಯುವುದಕ್ಕೆ ಸಂಸತ್ತಿಗೆ ಅಧಿಕಾರ ನೀಡುವ ಎರಡು ಮಸೂದೆಗಳಿಗೆ ಇಂದು ಆಡಳಿತ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಸಾಮಾನ್ಯ ಬೆಂಬಲ ದೊರೆಯಿತು.