ಕದನವಿರಾಮ ರೇಖೆ ದಾಟಿದ ಇಸ್ರೇಲ್ ಪಡೆ; ಯುದ್ಧ ಕಣಕ್ಕೆ ಇರಾಕ್
ಪಶ್ಚಿಮ ಏಷ್ಯಾ ಯುದ್ಧದ ಐದನೇ ದಿನವಾದ ಬುಧವಾರ ಕದನವಿರಾಮ ರೇಖೆಯ ಸಿರಿಯಾ ಕಡೆಯೊಳಗಿನ ಪ್ರದೇಶದೊಳಗೆ ಹೋರಾಡುತ್ತಿರುವ ಇಸ್ರೇಲಿ ಪಡೆಗಳು ಗೋಲನ್ ಪರ್ವತ ವಲಯದಲ್ಲಿ 1967ರ ಕದನವಿರಾಮ ರೇಖೆ ದಾಟಿ ಹೋಗಿದ್ದರೆ, ಇನ್ನೊಂದು ಕಡೆ ರಣರಂಗಕ್ಕೆ ಇರಾಕಿ ಪಡೆ ಧಾವಿಸಿದೆ ಎಂಬ ಪ್ರಕಟಣೆಯೊಂದಿಗೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿಕೊಂಡಂತಾಗಿದೆ.
ತನ್ನ ವಿಮಾನಗಳು ಡಮಾಸ್ಕಸ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ಮಾಡಿದ್ದಾಗಿ ಇಸ್ರೇಲ್ ಪ್ರಕಟಿಸಿದೆ.
ಕಾವೇರಿ ಜಲ: ರಾಜ್ಯಗಳ ಬೇಡಿಕೆ ಹೊಂದಾಣಿಕೆಗೆ ಕೇಂದ್ರ ಅಧ್ಯಯನ
ನವದೆಹಲಿ, ಅ. 10– ಲಭ್ಯವಿರುವ ಕಾವೇರಿ ನದಿ ನೀರಿನ ಪ್ರಮಾಣ ಅನುಸರಿಸಿ ಮೂರು ರಾಜ್ಯಗಳ ಬೇಡಿಕೆಗಳ ಹೊಂದಾಣಿಕೆ ಕುರಿತ ಕೇಂದ್ರದ ಅಧ್ಯಯನಕ್ಕೆ ತಮಿಳುನಾಡು, ಕೇರಳ ಮತ್ತು ಮೈಸೂರು ರಾಜ್ಯಗಳು ಇಂದು ಒಪ್ಪಿಕೊಂಡವು. ಸಚಿವ ಮಟ್ಟದ ಎರಡು ದಿನಗಳ ಮಾತುಕತೆ ಇಲ್ಲಿ ಮುಕ್ತಾಯಗೊಂಡಿತು.
ಕೃಷಿ ಕಾರ್ಮಿಕರ ವೇತನ ಏರಿಕೆ
ಬೆಂಗಳೂರು, ಅ. 10– ಜೀವನವೆಚ್ಚ ಹೆಚ್ಚಿರುವುದರಿಂದ ರಾಜ್ಯ ಸರ್ಕಾರವು ಕನಿಷ್ಠ ವೇತನ ಕಾಯ್ದೆಯ ಕಲಮುಗಳನ್ವಯ ಅಕ್ಟೋಬರ್ 2ರಿಂದ ಕೃಷಿ ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಿಸಿದೆ.
ಈ ಪ್ರಕಾರ, ಹಸು, ಕುರಿ ಮತ್ತು ಮೇಕೆ ಮೇಯಿಸುವವರೂ ದಿನಕ್ಕೆ 1.30 ರೂಪಾಯಿ ಪಡೆಯಬಲ್ಲರು. ಈ ಮೊದಲು ಅವರು 75 ಪೈಸೆಯನ್ನು ಪಡೆಯುತ್ತಿದ್ದರು.