ಬೆಂಗಳೂರು, ಜೂನ್ 7: ಹುಬ್ಬಳ್ಳಿ–ಧಾರವಾಡ ನಗರಸಭೆಯ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಶೀಘ್ರ ಚುನಾವಣೆ ಸಂಬಂಧದಲ್ಲಿ, ಸರ್ಕಾರದಿಂದ ಸ್ಪಷ್ಟ ಭರವಸೆ ಪಡೆಯಲು ಅಸಮರ್ಥರಾದ ಜನಸಂಘದ ಇಬ್ಬರು ಸದಸ್ಯರು ಇಂದು ವಿಧಾನಪರಿಷತ್ತಿನಲ್ಲಿ ಧರಣಿ ಸತ್ಯಾಗ್ರಹ ಕುಳಿತರು.
ಚುನಾವಣೆ ನಡೆಯಲು ಜೂನ್ ಅಂತ್ಯದವರೆಗೆ ಕಾಲಾವಧಿ ಇರುವಾಗ, ಸರ್ಕಾರ ಈ ಘಟ್ಟದಲ್ಲಿ ಯಾವ ರೀತಿಯಲ್ಲಿಯೂ ಹಸ್ತಕ್ಷೇಪ ಮಾಡುವಂತಿಲ್ಲ ಎಂಬುದು ಕಾನೂನು ಮಂತ್ರಿ ಡಿ.ಕೆ. ನಾಯ್ಕರ್ ಅವರ ನಿಲುವು.
ಅಣ್ವಸ್ತ್ರ ಸೇನಾಪಡೆಗೆ ಭಾರತದ ಸಿದ್ಧತೆ
ನವದೆಹಲಿ, ಜೂನ್ 7: ಶಾಂತಿಯುತ ಬಳಕೆಗಾಗಿ ಭಾರತ ಕೈಗೊಂಡ ಪ್ರಯೋಗಾರ್ಥ ಅಣುಸ್ಫೋಟಕ್ಕೆ ಸೇನಾ ಸಜ್ಜಿನ ಉದ್ದೇಶಗಳನ್ನು ಕಲ್ಪಿಸಿ ಪಾಕ್ ಪ್ರಧಾನಿ ಭುಟ್ಟೊ ಇಂದು ಪ್ರಧಾನಿ ಇಂದಿರಾ ಗಾಂಧಿ ಅವರ ಪತ್ರಕ್ಕೆ ಉತ್ತರವಿತ್ತಿದ್ದಾರೆ.
ಶಾಂತಿ, ಪ್ರಗತಿಯ ಉದ್ದೇಶ ಪ್ರತಿಪಾದಿಸಿ ಇಂದಿರಾ ಗಾಂಧಿ ಅವರು ಬರೆದಿದ್ದ ಪತ್ರಕ್ಕೆ 16 ದಿನಗಳ ಬಳಿಕ ಇಂದು ಭುಟ್ಟೊ ಇತ್ತಿರುವ ಉತ್ತರದಲ್ಲಿ ಅಡಕವಾಗಿರುವ ಶಂಕೆಗಳು ‘ಆಧಾರರಹಿತ ಆಪಾದನೆಗಳು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸ್ವರಣ್ ಸಿಂಗ್ ವಿವರಿಸಿದರು.