ಕೊಯ್ನಾ, ಮಾರ್ಚ್ 21– ಕೊಯ್ನಾದಲ್ಲಿ 1967ರಲ್ಲಿ ಸಂಭವಿಸಿದ ಭೂಕಂಪಕ್ಕೆ ಕಾರಣವೇನು?
ಈ ವಿಷಯದ ಬಗ್ಗೆ ಭಾರತ ಹಾಗೂ ವಿದೇಶದಲ್ಲಿಯ ಭೂಕಂಪ ಶಾಸ್ತ್ರಜ್ಞರು ಮತ್ತು ಭೂಗರ್ಭ ಶಾಸ್ತ್ರಜ್ಞರ ನಡುವೆ ಇನ್ನೂ ಬಿರುಸಿನ ವಾದ–ವಿವಾದ ನಡೆಯುತ್ತಿದೆ.
ಅಣೆಕಟ್ಟೆಗಳಲ್ಲಿ ಮತ್ತು ಜಲಾಶಯಗಳಲ್ಲಿ ನೀರನ್ನು ಶೇಖರಿಸುವುದರಿಂದ ಉಂಟಾಗುವ ಅನೇಕ ಮಾನವಕಲ್ಪಿತ ಭೂಕಂಪಗಳ ನಿದರ್ಶನಗಳಿಗೆ ಕೊಯ್ನಾವೂ ಒಂದು ಎಂದು ಖ್ಯಾತ ವಿಜ್ಞಾನಿಗಳ ತಂಡವೊಂದು ತನ್ನ ವರದಿಯಲ್ಲಿ ಸೂಚಿಸಿರುವುದೇ ಈ ವಿವಾದ ಮತ್ತೆ ಪುಟಗೊಂಡಿರುವುದಕ್ಕೆ ಕಾರಣ. ಈ ವಿಜ್ಞಾನಿಗಳು ಇತ್ತೀಚೆಗೆ ಪ್ಯಾರಿಸ್ಸಿನಲ್ಲಿ ಸಭೆ ಸೇರಿದ್ದರು. ಯುನೆಸ್ಕೊ ಆಶ್ರಯದಲ್ಲಿ ನಡೆದ ಈ ಸಭೆಯಲ್ಲಿ ಭಾಗವಹಿಸಿದ್ದ ವಿಜ್ಞಾನಿಗಳು ಕೊಯ್ನಾ ಭೂಕಂಪ ಕುರಿತ ತಜ್ಞರ ಸಮಿತಿಯ ಅಭಿಪ್ರಾಯವನ್ನು ವಿರೋಧಿಸಿದರು. ಕೊಯ್ನಾ ಭೂಕಂಪಕ್ಕೆ ಪ್ರಾಕೃತಿಕ ಕಾರಣಗಳಿವೆ ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿತ್ತು.
ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್ ಸರ್ಕಾರ ರಚನೆಗೆ ವಿರೋಧ
ಬೆಂಗಳೂರು, ಮಾರ್ಚ್ 21– ಅವಸರವಸರವಾಗಿ ಸಂಸ್ಥಾ ಕಾಂಗ್ರೆಸ್ ಶಾಸಕರನ್ನು ಸೇರಿಸಿಕೊಂಡು ಮಂತ್ರಿಮಂಡಲ ಉರು ಳಿಸಿ, ಸರ್ಕಾರ ರಚಿಸುವ ಆಡಳಿತ ಕಾಂಗ್ರೆಸ್ ಶಾಸಕ ಪಕ್ಷದ ಪ್ರಯತ್ನಕ್ಕೆ ರಾಜ್ಯ ಅಡ್ಹಾಕ್ ಸಮಿತಿಯ ಸಂಚಾಲಕ ಶ್ರೀ ಡಿ.ದೇವರಾಜ ಅರಸು ತೀವ್ರ ವಿರೋಧ ವ್ಯಕ್ತಮಾಡಿದ್ದಾರೆ.