ತ್ಯಾಗದ ಮಾತು ಆಡುವವರು ಮೊದಲು ಪಾಲಿಸಲಿ: ಅರಸು
ಧರ್ಮಸ್ಥಳ, ನ. 23– ಸರ್ವಧರ್ಮ ಸಮ್ಮೇಳನದ 41ನೇ ಅಧಿವೇಶನ ಇಂದು ಇಲ್ಲಿ ಪ್ರಾರಂಭವಾಯಿತು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ದೇವರಾಜ ಅರಸು, ‘ಸಮಷ್ಟಿ ಸಾಧಕವಾದ ಧರ್ಮವನ್ನು ಆಚರಣೆಗೆ ತರಲು ಮಠಾಧಿಪತಿಗಳು ಶ್ರಮಿಸಬೇಕು. ಆಸ್ತಿ ಇದ್ದರೆ ಮಾತ್ರ ತಮ್ಮ ಮಠ ಅಥವಾ ಸಂಸ್ಥೆಯ ಕೆಲಸ ಸಾಧ್ಯ ಎಂದು ಕುಳಿತರೆ ನಾವು ಅವರ ಕರ್ತವ್ಯಗಳು ಏನು ಎಂದು ಕೇಳಬೇಕಾಗುತ್ತದೆ. ತ್ಯಾಗದ ಪಾಠ ಹೇಳುವವರು ಸ್ವಲ್ಪಮಟ್ಟಿಗಾದರೂ ಪರಿಪಾಲಿಸಬೇಕು. ಮನಸ್ಸು, ಮಾತು, ಕೃತಿ ಒಂದಾದರೆ ಮಾತ್ರ ಆತ್ಮಶಕ್ತಿ ಕೂಡುತ್ತದೆ’ ಎಂದು ಹೇಳಿದರು.
ಪೆಟ್ರೋಲ್ ಬಂಕ್ ಪರವಾನಗಿ ನೀಡಿಕೆಯಲ್ಲಿ ಕಾಲುಭಾಗ ಹರಿಜನರಿಗೆ: ಪ್ರಧಾನಿ ಆದೇಶ
ನವದೆಹಲಿ, ನ. 23– ಪೆಟ್ರೋಲ್ ಬಂಕುಗಳನ್ನು ಇಡುವುದಕ್ಕೆ ಹೊಸದಾಗಿ ಪರವಾನಗಿ ನೀಡುವಾಗ ಶೇಕಡ 25ರಷ್ಟನ್ನು ಹರಿಜನ, ಗಿರಿಜನರಿಗೆ ಮೀಸಲಿಡಬೇಕೆಂದು ಪ್ರಧಾನಿ ಅವರು ಆದೇಶ ನೀಡಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಅನುಕೂಲಸ್ಥ ವರ್ಗಕ್ಕಿಂತ ದುರ್ಬಲ ವರ್ಗಕ್ಕೆ ಆದ್ಯತೆ ಕೊಡಬೇಕೆಂಬುದು ಸರ್ಕಾರದ ನೀತಿಯಾಗಿದೆಯೆಂದು ಪೆಟ್ರೋಲಿಯಂ ಖಾತೆ ಸಚಿವ ಡಿ.ಕೆ.ಬರೂವ ಅವರು ಇಂದು ಲೋಕಸಭೆಯಲ್ಲಿ
ಪ್ರಶ್ನೆಯೊಂದಕ್ಕೆ ಉತ್ತರಿಸಿದರು.