ಚುನಾವಣಾ ಮೈತ್ರಿ ಯತ್ನ: ಎಐಸಿಸಿಯಿಂದ ಎಸ್ಸೆನ್ಗೆ ಸರ್ವಾಧಿಕಾರ
ಜವಾಹರಲಾಲ್ ನೆಹರೂ ನಗರ, ಡಿ. 6– ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್ ಪಕ್ಷವನ್ನು ಪರಾಭವಗೊಳಿಸಲು ಇತರ ಪ್ರಜಾಸತ್ತಾತ್ಮಕ ಪಕ್ಷಗಳೊಂದಿಗೆ ಚುನಾವಣಾ ಹೊಂದಾಣಿಕೆ ಏರ್ಪಡಿಸಿಕೊಳ್ಳಲು ಸಂಸ್ಥಾ ಕಾಂಗ್ರೆಸ್ ಎಐಸಿಸಿ ಇಂದು ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರಿಗೆ ಅಧಿಕಾರ ನೀಡಿತು.
ಎಲ್ಲ ಪ್ರಜಾಸತ್ತಾತ್ಮಕ ಪಕ್ಷಗಳ ಸಂಯುಕ್ತ ಕ್ರಮಕ್ಕೆ ಪರಮಾವಧಿ ಹೊಂದಾಣಿಕೆ ಉಂಟು ಮಾಡುವ ದಿಸೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸುವ ಅಧಿಕೃತ ರಾಜಕೀಯ ನಿರ್ಣಯಕ್ಕೆ ಸರ್ವಾನುಮತ ದೊರೆಯಲಿಲ್ಲ.
ಕರಡು ನಿರ್ಣಯದ ಪ್ರಮುಖ ಶಿಲ್ಪಿ ವೀರೇಂದ್ರ ಪಾಟೀಲ್
ನೆಹರೂ ನಗರ, ಡಿ. 6– ಚುನಾವಣಾ ಹೊಂದಾಣಿಕೆ ಮತ್ತು ಜಂಟಿ ಕಾರ್ಯನಿರ್ವಹಣೆ ಕುರಿತ ಕರಡು ನಿರ್ಣಯವನ್ನು ರೂಪಿಸುವಲ್ಲಿ ಮೈಸೂರಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಪ್ರಮುಖ ಪಾತ್ರ ವಹಿಸಿದ್ದಾರೆಂದು ಹೇಳಲಾಗಿದೆ.
ಅಧಿವೇಶನದಲ್ಲಿ ನಿನ್ನೆ ಮಂಡಿಸಿ ಇಂದು ಅಂಗೀಕೃತವಾದ ಈ ನಿರ್ಣಯದ ಕರಡನ್ನು ಡಿಸೆಂಬರ್ 3ರಂದು ಕಾರ್ಯಕಾರಿ ಸಮಿತಿಯ ಮುಂದೆ ಮಂಡಿಸಲಾಗಿತ್ತು. ಚುನಾವಣಾ ಹೊಂದಾಣಿಕೆ ಬಗ್ಗೆ ಯಾವುದೇ ಬಿಗಿ ಸೂತ್ರಗಳನ್ನು ಅನುಸರಿಸಬಾರದೆಂದು ಪಾಟೀಲರು ಕಾರ್ಯಕಾರಿ ಸಮಿತಿಯ ಮನವೊಲಿಸಿದ್ದರು.