ಲಂಡನ್, ಡಿ. 11– ಜಯಂತಿ ನೌಕಾ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಧರ್ಮತೇಜ ಅವರನ್ನು ವಿಚಾರಣೆಗಾಗಿ ಭಾರತ ಸರ್ಕಾರಕ್ಕೆ ಒಪ್ಪಿಸಬೇಕೆಂಬ ಭಾರತ ಸರ್ಕಾರದ ಕೋರಿಕೆಗೆ ಇಲ್ಲಿನ ಬೋಸ್ಟ್ರೀಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ಇಂದು ಸಮ್ಮತಿಸಿತು.
10 ಲಕ್ಷ ಪೌಂಡುಗಳ ಮೋಸದ ಆಪಾದನೆ ಬಗ್ಗೆ ಭಾರತದಲ್ಲಿ ಅವರ ವಿಚಾರಣೆ ನಡೆಯುವುದು.
ರಾಜಕೀಯದ ಕಾರಣದಿಂದ ಭಾರತದಲ್ಲಿ ಧರ್ಮತೇಜ ಅವರ ವಿಚಾರಣೆ ನ್ಯಾಯರೀತಿಯಲ್ಲಿ ನಡೆಯುವುದಿಲ್ಲವೆಂಬ ವಕೀಲರ ವಾದವನ್ನು ಮ್ಯಾಜಿಸ್ಟ್ರೇಟರು ತಿರಸ್ಕರಿಸಿದರು.
ಸಾಹಿತ್ಯ ಸಮ್ಮೇಳನ: 10 ಸಾವಿರ ಮಂದಿ ಕೂಡಬಲ್ಲ ಮಂಟಪ
ಬೆಂಗಳೂರು, ಡಿ. 11– ನಗರದಲ್ಲಿ ಡಿಸೆಂಬರ್ 25ರಿಂದ 29ರವರೆಗೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ 10 ಸಾವಿರ ಮಂದಿ ಕೂರಲು ಅವಕಾಶವಿರುವ ಮಂಟಪದ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಸಮ್ಮೇಳನದ ಸಂಬಂಧದ ವ್ಯವಸ್ಥೆಯ ಬಗ್ಗೆ ಇಂದು ವರದಿಗಾರರಿಗೆ ವಿವರ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ.ನಾರಾಯಣ ಅವರು, ಸಾವಿರಾರು ಮಂದಿ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಹೊಸ ಸಿನಿಮಾ ಲೈಸೆನ್ಸ್ ನೀಡಿಕೆ ಮೇಲೆ ನಿರ್ಬಂಧ?
ಬೆಂಗಳೂರು, ಡಿ. 11– ನಗರದಲ್ಲಿ ಚಲನಚಿತ್ರ ಮಂದಿರಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಇನ್ನು ಮುಂದೆ ಅವುಗಳ ನಿರ್ಮಾಣಕ್ಕೆ ಲೈಸೆನ್ಸ್ ಕೊಡುವುದರ ಬಗ್ಗೆ ಯೋಚಿಸಿ ತೀರ್ಮಾನಿಸಬೇಕಾಗುವುದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಇಲ್ಲಿ ಹೇಳಿದರು.