ಪಂಚಾಯ್ತಿಗೆ ಒಪ್ಪಿಸದೇ ವಿವಾದ ಇತ್ಯರ್ಥ ಯತ್ನ: ಕೆ.ಎಲ್. ರಾವ್ ಭರವಸೆ
ನವದೆಹಲಿ, ಜುಲೈ 19– ಕಾವೇರಿ ಜಲ ವಿವಾದದ ಸಂಬಂಧದಲ್ಲಿ ಮೈಸೂರು, ತಮಿಳುನಾಡು ಮತ್ತು ಕೇರಳ ಸರ್ಕಾರಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಕೇಂದ್ರ ನೀರಾವರಿ ಸಚಿವ ಡಾ. ಕೆ.ಎಲ್. ರಾವ್ ಇಂದು ರಾಜ್ಯಸಭೆಗೆ ತಿಳಿಸಿದರು.
ಆದರೆ, ಮೈಸೂರಿನಲ್ಲಿ ಅಣೆಕಟ್ಟುಗಳ ನಿರ್ಮಾಣದಿಂದ ತಗ್ಗು ಪ್ರದೇಶಗಳಲ್ಲಿ ಇರುವವರಿಗೆ ತೊಂದರೆ ಆಗದಂತೆ ಮಾಡುವುದು ಹೇಗೆ ಎಂಬ ಒಂದೇ ಒಂದು ಅಂಶದ ಕುರಿತು ವಿವಾದವಿದೆ ಎಂದು ಅವರು ಎ.ಡಿ. ಮಣಿ ಮತ್ತು ತಿಲ್ಲೈವಿಲ್ಲಾಲನ್ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ವಿವಾದವನ್ನು ಪಂಚಾಯ್ತಿಗೆ ಒಪ್ಪಿಸದೇ, ಸಂಬಂಧಿಸಿದ ಎಲ್ಲ ಪಕ್ಷಗಳವರಿಗೂ ಒಪ್ಪಿಗೆಯಾಗುವಂತೆ ನ್ಯಾಯಸಮ್ಮತವಾಗಿ ಇತ್ಯರ್ಥಪಡಿಸಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದೂ ಅವರು ಆಶ್ವಾಸನೆ ನೀಡಿದರು.
‘ಕಾವೇರಿ ಬಗ್ಗೆ ತಮಿಳುನಾಡಿನ ಸಿದ್ಧಾಂತ ವಿಶ್ವದ ಇತಿಹಾಸದಲ್ಲೇ ಪ್ರಥಮ’
ಬೆಂಗಳೂರು, ಜುಲೈ 19– ನದಿ ಹುಟ್ಟುವ ಮೇಲಿನ ಪ್ರದೇಶಕ್ಕೆ ನೀರಿನ ಬಳಕೆ ಬಗ್ಗೆ ಯಾವ ಹಕ್ಕೂ ಇಲ್ಲ. ನದಿ ಹರಿಯುವ ಕೆಳ ಪ್ರದೇಶಕ್ಕೇ ಎಲ್ಲಾ ಹಕ್ಕುಗಳೂ ಸಲ್ಲಬೇಕೆಂಬ ತಮಿಳುನಾಡಿನ ‘ಹೊಸ ಸಿದ್ಧಾಂತ’ವನ್ನು ರಾಜ್ಯಪಾಲ ಶ್ರೀ ಧರ್ಮವೀರ ಅವರು ಅಲ್ಲಗಳೆದಿದ್ದಾರೆ.
ಬೆಳಿಗ್ಗೆ ವಿಧಾನಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ‘ಇಂಥ ಸಿದ್ಧಾಂತವನ್ನು ವಿಶ್ವ ಇತಿಹಾಸದಲ್ಲಿ ಎಲ್ಲೂ ಪ್ರತಿಪಾದಿಸಿಲ್ಲ’ ಎಂದು ತಿಳಿಸಿದರು.